

Chikkamaglur : ಇಂದಿನ ಕಾಲದಲ್ಲಿ ಹೆಚ್ಚಿನ ಗಂಡ ಹೆಂಡತಿಯರ ನಡುವೆ ನಂಬಿಕೆ ಎಂಬುದು ಮೊದಲಿನಂತೆ ಉಳಿದುಕೊಂಡಿಲ್ಲ. ನಿಯತ್ತಿನ ವಿಚಾರಕ್ಕೆ ಬಂದರಂತೂ ಅದು ಇಲ್ಲವೇ ಇಲ್ಲ ಎನ್ನಬಹುದು. ಇದೀಗ ತನ್ನ ಹೆಂಡತಿಗೆ ಕಂಡ ಕಂಡ ಹುಡುಗರೆಲ್ಲ ಮೆಸೇಜ್ ಮಾಡುತ್ತಾರೆ ಎಂದು ಗಂಡನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಹೌದು, ಚಿಕ್ಕಮಗಳೂರು ತಾಲೂಕಿನ ಬ್ಯಾಗದಹಳ್ಳಿ ಗ್ರಾಮದಲ್ಲಿ, ಪತ್ನಿಯ ಅಕ್ರಮ ಸಂಬಂಧ ಇದೆ ಹಾಗೂ ಆಕೆಗೆ ಯಾರ್ಯಾರೋ ಏನೇನೋ ಮೆಸೇಜ್ ಮಾಡುತ್ತಾರೆ ಎಂದು ಮನನೊಂದು ಮನು ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಪತ್ನಿ ಹಾಗೂ ಆಕೆಯ ಪ್ರಿಯಕರನೇ ಕಾರಣ ಎಂದು ಆರೋಪಿಸಿ ಮೃತನ ಪೋಷಕರು ದೂರು ನೀಡಿದ್ದಾರೆ.
ಮನು ಅವರಿಗೆ ವಿವಾಹವಾಗಿದ್ದು, ಕಳೆದ ಕೆಲವು ದಿನಗಳಿಂದ ದಂಪತಿಗಳ ನಡುವೆ ಪತ್ನಿಯ ಅಕ್ರಮ ಸಂಬಂಧದ ವಿಚಾರವಾಗಿ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಪತ್ನಿಯ ಮೊಬೈಲ್ಗೆ ಪರಪುರುಷನೊಬ್ಬ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದ ವಿಚಾರ ಮನು ಅವರಿಗೆ ತಿಳಿದಿತ್ತು. ಶುಕ್ರವಾರ ರಾತ್ರಿ ಇದೇ ವಿಚಾರವಾಗಿ ಮನು ಮತ್ತು ಅವರ ಪತ್ನಿ ನಡುವೆ ದೊಡ್ಡ ಮಟ್ಟದ ಜಗಳ ನಡೆದಿತ್ತು. ಈ ವೇಳೆ ಪತ್ನಿಯ ಆಪ್ತ ಸ್ನೇಹಿತ ಎನ್ನಲಾದ ವ್ಯಕ್ತಿಯೂ ಸ್ಥಳದಲ್ಲಿದ್ದು, ಮನು ಅವರೊಂದಿಗೆ ವಾಗ್ವಾದ ನಡೆಸಿದ್ದ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಸ್ಥಳೀಯರು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಪೊಲೀಸರು ಬಂದು ಸಮಸ್ಯೆ ಬಗೆ ಹರಿಸಿದ್ದರು.
ಆದರೆ ಪೊಲೀಸರು ಬಂದು ಹೋದ ನಂತರವೂ ಮನು ತೀವ್ರ ಮಾನಸಿಕ ವೇದನೆಗೆ ಒಳಗಾಗಿದ್ದರು ಎನ್ನಲಾಗಿದೆ. ಪತ್ನಿಯ ನಡವಳಿಕೆ ಮತ್ತು ಸಾರ್ವಜನಿಕವಾಗಿ ಉಂಟಾದ ಅವಮಾನದಿಂದ ನೊಂದ ಮನು, ಇಂದು ತನ್ನ ಮನೆಯಲ್ಲೇ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
