

ಗಂಡು ಹೆಣ್ಣು ಮಕ್ಕಳ ನಡುವೆ ತಂದೆಯೋರ್ವ ನಿರಂತರ ಬೇಧಭಾವ ಮಾಡುತ್ತಾ ಹೆಣ್ಣು ಮಕ್ಕಳನ್ನು ನಿರಂತರ ಟೀಕಿಸುತ್ತಿದ್ದ ತಂದೆಯ ತಾರತಮ್ಯ ನೀತಿಯಿಂದ ಸಿಟ್ಟಿಗೆದ್ದ ಸೋದರಿಯರಿಬ್ಬರು ಅವರ ಕತ್ತು ಸೀಳಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ನಿರಂತರ ತಾರತಮ್ಯ ಮತ್ತು ಅವಹೇಳನದಿಂದ ಬೇಸತ್ತ 16 ಮತ್ತು 32 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಸೇರಿ ತಮ್ಮ 60 ವರ್ಷದ ತಂದೆ ಮಲಗಿದ್ದ ಸಂದರ್ಭದಲ್ಲಿ ಕೊಲೆ ಮಾಡಿದ್ದಾರೆ.
ಇವರಿಬ್ಬರು ಕಳೆದ ಕೆಲವು ದಿನಗಳಿಂದ ತಮ್ಮ ರೈತ ತಂದೆಯನ್ನು ಕೊಲೆ ಮಾಡುವ ಸಂಚು ರೂಪಿದಿದ್ದರು. ಭಾನುವಾರ ರಾತ್ರಿ ತಾಯಿ ಸೇರಿ ಕುಟುಂಬದ ಉಳಿದ ಸದಸ್ಯರಿಗೆ ನಿದ್ರೆ ಮಾತ್ರೆ ಬೆರೆಸಿದ ಆಹಾರವನ್ನು ನೀಡಿದ್ದು, ತಂದೆ ನಿದ್ದೆ ಮಾಡಿದಾಗ ಕಿರಿಯ ಮಗಳು ಕಾಲುಗಳನ್ನು ಬಗಿಯಾಗಿ ಹಿಡಿದಿದ್ದು, ಹಿರಿಯ ಮಗಳು ಅಡುಗೆ ಮನೆಯ ಚಾಕುವಿನಿಂದ ತಂದೆಯ ಗಂಟಲು ಸೀಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮನೆ ಮಂದಿ ಎಚ್ಚರಗೊಂಡಾಗ ರಕ್ತದ ಮಡುವಿನಲ್ಲಿ ಶವ ಇರುವುದು ಕಂಡು ಬಂದಿದೆ. ಪೊಲೀಸರು ನಂತರ ಸ್ಥಳಕ್ಕೆ ಆಗಮಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ವಿಚಾರಣೆ ನಡೆದ ಎರಡು ಗಂಟೆಯೊಳಗೆ ಇಬ್ಬರು ಹೆಣ್ಣುಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದರು. ತಮ್ಮ ಅಪರಾಧವನ್ನು ಇವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸದಂತೆ ಭೋಪಾ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಎರಡು ನಿದ್ರೆ ಮಾತ್ರೆಗಳ ಶೀಟ್ ಮತ್ತು ಕೊಲೆಗೆ ಬಳಸಲಾದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
