ಬಾಗಲಕೋಟೆ: ಗೆಳತಿ ಮತ್ತು ಸ್ನೇಹಿತರ ಎದುರು ಯುವಕನೋರ್ವನಿಗೆ ತಾನು ಥಳಿಸಿದ್ದಾಗಿ ಅಪ್ರಾಪ್ತ ಬಾಲಕನೊಬ್ಬ ಬಿಲ್ಡಪ್ ಕೊಟ್ಟಿದ್ದು, ಇದನ್ನು ಪ್ರಶ್ನೆ ಮಾಡಿದ 19ರ ಹರೆಯದ ಯುವಕನನ್ನು ಅಪ್ರಾಪ್ತ ಬಾಲಕ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ರಾಹುಲ್ ಸಪ್ತಸಾಗರ (19) ಎನ್ನುವಾತನೇ ಮೃತ ಯುವಕ. ಹೋಳಿ ಹಬ್ಬದ ಆಚರಣೆ ಸಂದರ್ಭ ಇವರಿಬ್ಬರ ಮಧ್ಯೆ ಸಣ್ಣ ಗಲಾಟೆ ನಡೆದಿತ್ತು. ಅಪ್ರಾಪ್ತ ಬಾಲಕ ತಾನು ರಾಹುಲ್ ಸಪ್ತಸಾಗರ್ಗೆ ಥಳಿಸಿರುವುದಾಗಿ ಗೆಳತಿ ಮತ್ತು ಸ್ನೇಹಿತರ ಮುಂದೆ ಹೇಳಿದ್ದಾನೆ. ಇದನ್ನು ಆತನ ಸ್ನೇಹಿತರು ಹೋಗಿ ರಾಹುಲ್ ಸಪ್ತಸಾಗರ ಬಳಿ ಹೇಳಿದ್ದಾರೆ. ಈ ಕುರಿತು ರಾಹುಲ್ ಸಪ್ತಸಾಗರ ಅಪ್ರಾಪ್ತ ಬಾಲಕನ ಬಳಿ ಪ್ರಶ್ನೆ ಮಾಡುವುದ್ಕೆ ತೇರದಾಳದ ಸಿದ್ದೇಶ್ವರ ದೇವಸ್ಥಾನದ ಸಮೀಪ ಕರೆಸಿದ್ದಾನೆ.
ಹೀಗೆ ಇಬ್ಬರ ಮಧ್ಯೆ ಮಾತುಕತೆ ನಡೆದಿದ್ದು, ವಿಕೋಪಕ್ಕೆ ಹೋಗಿದೆ. ಅಲ್ಲಿದ ಸ್ನೇಹಿತರು ಇವರಿಬ್ಬರ ಜಗಳ ನಿಲ್ಲಿಸಲು ಪ್ರಯತ್ನ ಪಟ್ಟಿದ್ದಾರೆ. ಗಲಾಟೆ ಸಂದರ್ಭ ಆರೋಪಿ ಬಾಲಕ ಬೈಕ್ ಕೀ ಚೈನ್ನಲ್ಲಿದ್ದ ಚಾಕುವಿನಿಂದ ರಾಹುಲ್ ಕುತ್ತಿಗೆಗೆ ಇರಿದಿದ್ದು, ಕೊಲೆ ಮಾಡಿದ್ದಾಣೆ.
ಮೃತ ರಾಹುಲ ಸೆಕೆಂಡ್ ಇಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದಾನೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧನ ಮಾಡಿದ್ದಾರೆ.

