ಬೀದರ್: ಕೂಲಿ ಕೆಲಸ ಮುಗಿಸಿಕೊಂಡು ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕುದುರೆಯೊಂದು ಜಾಡಿಸಿ ಒದ್ದ ಪರಿಣಾಮ, ವ್ಯಕ್ತಿ ಮೃತಪಟ್ಟ ಘಟನೆ ಬೀದರ್ ನಗರದ ಮೈಲೂರ್ ರಸ್ತೆ ಬಳಿ ನಡೆದಿದೆ.

ಮೈಲೂರಿನ ಜಮ್ಮಿ ಕಾಲನಿ ನಿವಾಸಿ ವೈಜನಾಥ (60) ಮೃತಪಟ್ಟ ವ್ಯಕ್ತಿ.
ವೈಜನಾಥ ಅವರು ಕೆಲಸ ಮುಗಿಸಿ ರಿಂಗ್ ರಸ್ತೆಯ ಮೂಲಕ ಮೈಲೂರಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕುದುರೆಯೊಂದು ದಿಢೀರನೆ ಹಿಂದಿನಿಂದ ಬಂದು ವೈಜನಾಥ ಅವರಿಗೆ ಗುದ್ದಿದೆ. ಕುದುರೆ ಒದ್ದ ರಭಸಕ್ಕೆ ವೈಜನಾಥ ಅವರ ತಲೆಗೆ ಗಂಭೀರ ಗಾಯವಾಗಿದೆ.
ಘಟನೆ ನಡೆದ ಕೂಡಲೇ ತೀವ್ರವಾಗಿ ಗಾಯಗೊಂಡಿದ್ದ ವೈಜನಾಥ ಅವರನ್ನು ಬೀದರ್ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆಂದು ಹೈದರಾಬಾದ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ.
ಈ ಘಟನೆ ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

