

Bengaluru : ನಾನು ಮೊದಲು ಸತ್ತರೆ ಹೆಂಡತಿಯನ್ನು ನೋಡಿಕೊಳ್ಳಲು ಯಾರು ಇಲ್ಲ ಎಂದು ಈಗಲೇ ಹೆಂಡತಿಯನ್ನು ಉಸಿರುಗಟ್ಟಿಸಿ ಗಂಡನು ಕೊಂದ ಅಮಾನುಷ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ತಾನು ಸಾವನ್ನಪ್ಪಿದ ಬಳಿಕ ಪತ್ನಿಯನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎನ್ನುವ ಕಾರಣದಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಇಸ್ರೋ ನಿವೃತ್ತ ನೌಕರ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಆವಲಹಳ್ಳಿ ಬಳಿಯ ಬೊಮ್ಮೇನಹಳ್ಳಿಯ ವಿರ್ಟುಸೊ ಅಪಾರ್ಟ್ಮೆಂಟ್ನಲ್ಲಿ ಬುಧವಾರ ನಡೆದಿದೆ. ವಿಚಿತ್ರ ಅಂದ್ರೆ ಈ ದಂಪತಿಗೆ ಒಬ್ಬ ಮಗಳಿದ್ದು, ಅಮೆರಿಕಾದಲ್ಲಿ ವಾಸವಿದ್ದಾರೆ. ಆದರೆ, ಆಕೆ ತನ್ನ ತಾಯಿಯ ಅಂತಿಮ ವಿಧಿ ವಿಧಾನಕ್ಕೆ ಬರಲು ನಿರಾಕರಿಸಿದ್ದಾಳೆ.
ಆಂಧ್ರಪ್ರದೇಶದ ವಿಜಯವಾಡ ಮೂಲದ ನಾಗಲೇಶ್ವರರಾವ್ ದಂಪತಿ ಸುಮಾರು 25 ವರ್ಷಗಳಿಂದ ನಗರದಲ್ಲಿವಾಸವಾಗಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ(ಇಸ್ರೋ) ಟೀಮ್ ಲೀಡರ್ ಆಗಿದ್ದ ನಾಗಲೇಶ್ವರರಾವ್, 15 ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾಗಿದ್ದರು. ದಂಪತಿ, ವಿರ್ಟುಸೊ ಅಪಾರ್ಟ್ಮೆಂಟ್ನಲ್ಲಿಮೂರು ವರ್ಷಗಳ ಹಿಂದೆ ಫ್ಲಾಟ್ ಖರೀದಿಸಿದ್ದರು. ಬಳಿಕ ಅವರು ಅದೇ ಫ್ಲಾಟ್ಗೆ ಬಂದು ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ನಾಗೇಶ್ವರ್ ರಾವ್ ಮಾನಸಿಕ ಖಿನ್ನತೆಯಿಂದ (Depression) ಬಳಲುತ್ತಿರುವುದು ಕಂಡುಬಂದಿದೆ. ನಮಗೆ ವಯಸ್ಸಾಗಿದೆ, ಮಗಳು ಅಮೆರಿಕದಲ್ಲಿದ್ದಾಳೆ. ಇಲ್ಲಿ ನಮ್ಮನ್ನು ನೋಡಿಕೊಳ್ಳಲು ಹತ್ತಿರದ ಸಂಬಂಧಿಗಳೂ ಇಲ್ಲ. ನಾನು ಸತ್ತರೆ ನನ್ನ ಹೆಂಡತಿ ಒಂಟಿಯಾಗುತ್ತಾಳೆ, ಅವಳ ಪಾಡು ಏನಾಗಬಹುದು ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಹಾಗಾಗಿ ಅವಳನ್ನು ಕೊಂದು, ನಾನು ಕೂಡ ಆತ್ಮ*ತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಆದರೆ, ಪತ್ನಿಯನ್ನು ಕೊಂದ ಬಳಿಕ ಭಯಗೊಂಡ ನಾಗೇಶ್ವರ್ ರಾವ್, ತಾವು ಆತ್ಮ*ತ್ಯೆ ಮಾಡಿಕೊಳ್ಳುವ ಧೈರ್ಯ ಸಾಲದೆ ಸುಮ್ಮನಾಗಿದ್ದಾರೆ.
