Home » ಡಾ.ವಂದನಾ ದಾಸ್ ಕೊಲೆ ಪ್ರಕರಣ: ಕೇರಳ ನ್ಯಾಯಾಲಯದಿಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಡಾ.ವಂದನಾ ದಾಸ್ ಕೊಲೆ ಪ್ರಕರಣ: ಕೇರಳ ನ್ಯಾಯಾಲಯದಿಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

0 comments

ಕೇರಳದ ಕೊಲ್ಲಂನಲ್ಲಿ ಆಸ್ಪತ್ರೆಯೊಳಗೆ ನಡೆದ ಡಾ. ವಂದನಾ ದಾಸ್ ಅವರ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಜಿ. ಸಂದೀಪ್‌ಗೆ ಶನಿವಾರ (ಮಾರ್ಚ್ 21, 2026) ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆರೋಪಿಗೆ ಮರಣದಂಡನೆ ವಿಧಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ಪ್ರಾಸಿಕ್ಯೂಷನ್ ತಿಳಿಸಿದೆ. ಸಂತ್ರಸ್ತೆಯ ಕುಟುಂಬವೂ “ಗರಿಷ್ಠ ಶಿಕ್ಷೆ”ಗಾಗಿ ಒತ್ತಾಯಿಸಿದೆ.

ಮೇ 2023 ರಲ್ಲಿ ಸಂದೀಪ್ ಎಂಬಾತ ತಾಲೂಕು ಆಸ್ಪತ್ರೆಯೊಳಗೆ ವಂದನಾ ದಾಸ್ ಅವರನ್ನು ಬರ್ಬರವಾಗಿ ಕೊಂದಿದ್ದ. ಕೊಲ್ಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆಗಿನ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ವಿವಿಧ ಅಪರಾಧಗಳಿಗಾಗಿ ಸಂದೀಪ್‌ಗೆ ಒಟ್ಟು 30 ವರ್ಷಗಳ ಶಿಕ್ಷೆಯನ್ನು ವಿಧಿಸಿತು ಮತ್ತು ಆ ಅವಧಿಯನ್ನು ಅನುಭವಿಸಿದ ನಂತರ, ಕೊಲೆಗಾಗಿ ಅವನ ಜೀವಾವಧಿ ಶಿಕ್ಷೆ ಆರಂಭವಾಗಲಿದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರತಾಪ್ ಜಿ. ಪಡಿಕ್ಕಲ್ ಸುದ್ದಿಗಾರರಿಗೆ ತಿಳಿಸಿದರು.

ಜೀವಾವಧಿ ಶಿಕ್ಷೆಯನ್ನು ಮರಣದಂಡನೆಯಾಗಿ ಹೆಚ್ಚಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡುವುದಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರು ಹೇಳಿದರು.

ಮೇ 10, 2023 ರಂದು ಈ ಘೋರ ಕೊಲೆ ನಡೆದಿತ್ತು. ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಸಂದೀಪ್‌ ನೆರೆಹೊರೆಯವರ ಜೊತೆ ಗಲಾಟೆ ಮಾಡಿದ್ದು ತನ್ನ ಕಾಲಿಗೆ ತಾನೇ ಗಾಯ ಮಾಡಿಕೊಂಡಿದ್ದ. ನಂತರ ಪೊಲೀಸರಿಗೆ ಕರೆ ಮಾಡಿ ರಕ್ಷಣೆ ಕೋರಿದ್ದರಿಂದ, ಪೊಲೀಸರು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಿದ್ದರು. ಸಂದೀಪ್ ನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪೊಲೀಸರು ತಾಲ್ಲೂಕು ಆಸ್ಪತ್ರೆಗೆ ಕರೆತಂದಿದ್ದು, ಡಾ.ದಾಸ್‌ ಸಂದೀಪ್‌ನ ಕಾಲಿನ ಗಾಯಕ್ಕೆ ಬಟ್ಟೆ ಹಾಕುತ್ತಿದ್ದಾಗ, ಆತ ಶಸ್ತ್ರಚಿಕಿತ್ಸಾ ಕತ್ತರಿ ಕಿತ್ತುಕೊಂದು ಮೊದಲು ಪೊಲೀಸರ ಮೇಲೆ ದಾಳಿ ಮಾಡಿದ್ದ. ಆಗ ಡಾ. ವಂದನಾರನ್ನು ಹಿಡಿದು ಅವರ ಕುತ್ತಿಗೆ, ಹೊಟ್ಟೆ, ಬೆನ್ನಿನ ಭಾಗಕ್ಕೆ ಮನಬಂದಂತೆ ಹಲವು ಬಾರಿ ಇರಿದಿದ್ದ.

banner

ಆದರೆ ವಂದನಾಗೆ ಆತನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಕೆಗೆ ಹಲವಾರು ಬಾರಿ ಇರಿತವಾಗಿದ್ದು, ನಂತರ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

ವಂದನಾ ಕೊಟ್ಟಾಯಂ ಜಿಲ್ಲೆಯ ಕಾಡುತುರುತಿ ಪ್ರದೇಶದವರಾಗಿದ್ದು, ಅವರ ಹೆತ್ತವರ ಏಕೈಕ ಮಗಳಾಗಿದ್ದರು. ಅವರು ಅಜೀಜಿಯಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗೃಹ ಶಸ್ತ್ರಚಿಕಿತ್ಸಕಿಯಾಗಿದ್ದರು ಮತ್ತು ತರಬೇತಿಯ ಭಾಗವಾಗಿ ಕೊಟ್ಟಾರಕ್ಕರ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

You may also like