

ಬೆಂಗಳೂರು: ನಗರದ ಚಂದ್ರಾಲೇಔಟ್ನ ಬಿಎಂಟಿಸಿ ಡಿಪೋ ಬಳಿ ಖಾಸಗಿ ಬಸ್ಸೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಬಸ್ ಸಂಪೂರ್ಣ ಸುಟ್ಟುಹೋಗಿದ್ದು, ಕರಕಲಾಗಿದೆ. ಅದೃಷ್ಟವಶಾತ್ ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇಲ್ಲದಿರುವ ಕಾರಣ ಪ್ರಾಣ ಹಾನಿ ಆಗಿಲ್ಲ.
ಬೆಂಕಿಯ ಜ್ವಾಲೆ ಬಸ್ನ ಅಕ್ಕಪಕ್ಕ ನಿಂತಿರುವ ಇತರ ವಾಹನಗಳಿಗೆ ಕೂಡಾ ಹಬ್ಬಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಕಿಡಿಗೇಡಿಗಳು ಮದ್ಯದ ನಶೆಯಲ್ಲಿ ಸಿಗರೇಟ್ ತುಂಡನ್ನು ಬಸ್ಮೇಲೆ ಎಸೆದಿದ್ದರಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಸ್ ನಿಲ್ದಾಣದಲ್ಲಿ ಇಬ್ಬರು ಓಡಾಟ ಮಾಡಿರುವ ಕುರಿತು ವರದಿಯಾಗಿದ್ದು, ಅವರೇ ಈ ಕೃತ್ಯ ಮಾಡಿರುವ ಸಾಧ್ಯತೆಯಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.