Dharmasthala :ಕಳೆದ ಹನ್ನೆರಡು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಪುಣ್ಯ ಸ್ಥಳ ಧರ್ಮಸ್ಥಳದ (Dharmasthala)ನೇತ್ರಾವತಿ ಸ್ನಾನಘಟ್ಟದ ಬಳಿಯಲ್ಲೇ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮತ್ತೊಮ್ಮೆ ತನಿಖೆಯಾಗಬೇಕೆಂದು ವ್ಯಾಪಕ ಆಗ್ರಹವಾಗುತ್ತಿರುವ ಮಧ್ಯೆಯೇ ಮಕ್ಕಳ ನ್ಯಾಯಾಲಯವು ಅಂದಿನ ತನಿಖಾಧಿಕಾರಿಯನ್ನೇ ತನಿಖೆಗೆ ಒಳಪಡಿಸಬೇಕು ಎಂದಿದೆ. ಅಲ್ಲದೇ ನಾಗರೀಕ ಸಮಾಜ ಮತ್ತೊಮ್ಮೆ ಒಟ್ಟಾಗಿ ಮರು ತನಿಖೆಗೆ ಆಗ್ರಹಿಸಿದ್ದು, ಇದರ ಬೆನ್ನಲ್ಲೇ ‘ಧರ್ಮಸ್ಥಳ ಫೈಲ್ಸ್’ ಸಿನಿಮಾವೊಂದರ ಸುಳಿವೊಂದು ಪ್ರಚಲಿತದಲ್ಲಿದೆ.

ಹೌದು, ಪುಣ್ಯ ಕ್ಷೇತ್ರ ಹಾಗೂ ಅಲ್ಲಿನ ವಿಶೇಷತೆ ಜೊತೆಗೆ ಅಲ್ಲಿ ಸುತ್ತ ಮುತ್ತ ನಡೆಯುತ್ತಿದ್ದ ಅಕ್ರಮ ಕೃತ್ಯಗಳ ಕಥೆಗಳನ್ನೊಳಗೊಂಡ ಕಥೆಯನ್ನು ಸಮಾಜದ ಮುಂದಿಡುವ ಬೃಹತ್ ಪ್ಲಾನ್ ಒಂದು ನಡೆದಿದೆ ಎನ್ನಲಾಗಿದ್ದು, ಸುಮಾರು 400 ಕ್ಕೂ ಹೆಚ್ಚು ಅನಾಥ ಶವ, ಅಸಹಜ ಸಾವು ಪ್ರಕರಣಗಳು ಮತ್ತೊಮ್ಮೆ ಸುದ್ದಿಯಾಗಲಿದೆ. ಸೌಜನ್ಯ ಕೊಲೆ ಪ್ರಕರಣ ಬೆಳಕಿಗೆ ಬರುವ ಹಿಂದೆ ಹಲವು ದಶಕಗಳಿಂದ ನೂರಾರು ಕೊಲೆಗಳು ಅತ್ಯಾಚಾರಗಳು ಆ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದ್ದು, ನಡೆದಿದ್ದ ಅಷ್ಟೂ ಪ್ರಕರಣಗಳು ಸುದ್ದಿ ಇಲ್ಲದಂತಾಗಿದೆ, ಅವುಗಳನ್ನು ಮತ್ತೊಮ್ಮೆ ಸಮಾಜಕ್ಕೆ ತಿಳಿಸುವ ಪ್ರಯತ್ನ ಸಿನಿಮಾದ ಉದ್ದೇಶವಾಗಿದೆಯಂತೆ.
1989 ರಲ್ಲಿ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾ ಸಾವು ಆಗ ಕೂಡಾ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿತ್ತು. ಅವತ್ತು ರಾಜ್ಯ ಮಟ್ಟದ ಕೆಲವು ಕರೇಜಿಯಸ್ ಪತ್ರಿಕೆಗಳು ಯಾರ ಭಯವಿಲ್ಲದೆ, ಹಂಗಿಲ್ಲದೆ ಪದ್ಮಲತ ಕೊಲೆ ಪ್ರಕರಣದ ಬಗ್ಗೆ ಬರೆದಿದ್ದು, ತಮ್ಮ ಕೈಲಾದ ಪ್ರತಿಭಟನೆಯನ್ನು ನಡೆಸಿದ್ದವು. ಸೌಜನ್ಯ ಪ್ರಕರಣದಂತೆಯೇ ಅಂದು ಪದ್ಮಲತಾ ಪ್ರಕರಣವೂ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣಗಳ ಪ್ರಚಾರ, ಮಾಧ್ಯಮ ಪ್ರಚಾರ ಇಲ್ಲದ ಆ ಕಾಲದಲ್ಲಿ ಉಳ್ಳವರ ಮಾತನ್ನು ಧಿಕ್ಕರಿಸಿ ನಡೆದರೆನ್ನುವ ಒಂದೇ ಒಂದು ಕಾರಣಕ್ಕಾಗಿ ಹೋರಾಟಗಾರರ ಮಗಳನ್ನೇ ಕಾಣೆ ಮಾಡಲಾಗಿತ್ತು. ಹಲವು ದಿನಗಳ ಹೋರಾಟ, ಮನವಿ ಆಗ್ರಹ, ಉಪವಾಸ ಸತ್ಯಾಗ್ರಹದ ಬಳಿಕ ಪದ್ಮಲತಾ ಶವ ಕೊಳೆತ ರೀತಿಯಲ್ಲಿ ಪತ್ತೆಯಾಗಿದ್ದು, ಮೈಮೇಲಿನ ಬಟ್ಟೆಯ ಗುರುತಿನಿಂದ ಆಕೆಯ ಶವವೆನ್ನುವುದನ್ನು ಸ್ಪಷ್ಟಪಡಿಸಲಾಗಿತ್ತು.
ಅಂದಿಗೆ ಆ ಪ್ರಕರಣದಿಂದ ಬಚಾವ್ ಆಗಿದ್ದ ಹಂತಕರಿಂದ ನಂತರದಲ್ಲಿ ಒಂದೊಂದೇ ಪ್ರಕರಣ ನಡೆಯುತ್ತಲೇ ಹೋಯಿತು. ವರ್ಷಕ್ಕೆ ಕೆಲವು ಪ್ರಕರಣ, ಅದರಲ್ಲೂ ಮಹಿಳೆಯರೇ ಹೆಚ್ಚಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದರೂ ಎಲ್ಲವೂ ಅಸಹಜ ಸಾವೆಂದು ಮುಚ್ಚಿಹೋಗುತ್ತಿತ್ತು.


ಸಿನಿಮಾ ಬರಬೇಕು ಎನ್ನುವ ಆಗ್ರಹದೊಂದಿಗೆ ವೈರಲ್ ಆಗುತ್ತಿರುವ ಪೋಸ್ಟರ್