ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಟೀಮ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಚರಿಸಿದ ವಿಜಯೋತ್ಸವದ ವೇಳೆ 11 ಮಂದಿ ಕಾಲ್ತುಳಿತದಲ್ಲಿ ಮೃತಪಟ್ಟ ಘಟನೆ ನಡೆದಿತ್ತು. ಈ ಘಟನೆ ಇನ್ನು ಜನಮಾನಸದಿಂದ ಅಳಿಸಿ ಹೋಗಿಲ್ಲ. ಈ ವರ್ಷವೂ ಕೂಡ ಆರ್ಸಿಬಿ ತಂಡ ಫೈನಲ್ ತಲುಪಿದೆ. ಈ ಮ್ಯಾಚ್ ನಲ್ಲಿ ಏನಾದರೂ ಆರ್ಸಿಬಿ ಗೆದ್ದರೆ ಅಭಿಮಾನಿಗಳು ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಪೊಲೀಸರು ಕಡಕ್ ಎಚ್ಚರಿಕೆ ನೀಡಿದ್ದಾರೆ.


ಅಹಮದಾಬಾದ್ನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ನಡುವಿನ ಐಪಿಎಲ್ ಮಹಾಫೈಟ್ ಪಂದ್ಯದ ಹಿನ್ನೆಲೆಯಲ್ಲಿ, ಸಿಲಿಕಾನ್ ಸಿಟಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು, ಪಂದ್ಯದ ಫಲಿತಾಂಶದ ನಂತರ ಅಭಿಮಾನಿಗಳು ಸಾರ್ವಜನಿಕ ರಸ್ತೆಗಳಿಗೆ ಬಂದು ಸಂಭ್ರಮಾಚರಣೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ
ಅಲ್ಲದೆ ಪಂದ್ಯ ಮುಗಿದ ಬಳಿಕ ರಸ್ತೆಗಳಲ್ಲಿ ಗುಂಪು ಕೂಡುವುದು, ರ್ಯಾಲಿಗಳನ್ನು ನಡೆಸುವುದು ಅಥವಾ ವಿಜಯೋತ್ಸವದ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ನಿಷೇಧಿಸಲಾಗಿದೆ. ನಗರದ ರಸ್ತೆಗಳಲ್ಲಿ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು, ವೀಲಿಂಗ್ನಂತಹ ಅಪಾಯಕಾರಿ ಸ್ಟಂಟ್ಗಳನ್ನು ಮಾಡುವುದು ಮತ್ತು ಕರ್ಕಶವಾಗಿ ಹಾರ್ನ್ ಮಾಡುವುದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
