ಸಿನಿಮಾ ಮತ್ತು ಕಿರುತೆರೆಯ ಖ್ಯಾತ ನಟ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನದಿಂದ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಆದರೆ, ಅವರ ಸಾವಿನ ಬೆನ್ನಲ್ಲೇ ಒಂದು ಗಂಭೀರ ಚರ್ಚೆ ಮುನ್ನೆಲೆಗೆ ಬಂದಿದ್ದು, ಎದೆನೋವು ಕಾಣಿಸಿಕೊಂಡಾಗ ದಿಲೀಪ್ ರಾಜ್ ಅವರು ತೆಗೆದುಕೊಂಡ ಆ ಒಂದು ನಿರ್ಧಾರ ಅವರ ಪ್ರಾಣಕ್ಕೆ ಕುತ್ತು ತಂದಿತೇ? ಎಂಬ ಪ್ರಶ್ನೆ ಎದುರಾಗಿದೆ.


ಹೌದು, ದಿಲೀಪ್ ರಾಜ್ (47) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಆ ತಪ್ಪು ಮಾಡದೆ ಅವರು ಸರಿಯಾದ ಸಮಯಕ್ಕೆ ಅವರು ಆಸ್ಪತ್ರೆಗೆ ಹೋಗಿದ್ರೆ ಪ್ರಾಣ ಉಳಿಯುತ್ತಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ದಿಲೀಪ್ ಅವರು ಆಸ್ಪತ್ರೆಗೆ ಹೋಗದಿರಲು ಕಾರಣವೂ ಕೂಡ ಇದೆ.
ವರದಿಗಳ ಪ್ರಕಾರ, ಮೇ 12ರ ರಾತ್ರಿ ದಿಲೀಪ್ ರಾಜ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಆ ಕ್ಷಣದಲ್ಲಿ ಅವರು ಆಸ್ಪತ್ರೆಗೆ ಧಾವಿಸುವ ಬದಲು, ತಮ್ಮ ಕೈಯಲ್ಲಿದ್ದ ‘ಸ್ಮಾರ್ಟ್ವಾಚ್’ (Smartwatch) ಮೂಲಕ ಹೃದಯ ಬಡಿತವನ್ನು (Heart Rate) ಪರೀಕ್ಷಿಸಿಕೊಂಡಿದ್ದರು ಎನ್ನಲಾಗಿದೆ. ಸ್ಮಾರ್ಟ್ವಾಚ್ನಲ್ಲಿ ಹೃದಯ ಬಡಿತ ಸಾಮಾನ್ಯವಾಗಿದೆ ಎಂದು ತೋರಿಸಿದ ಕಾರಣ, ಅವರು ಅದನ್ನು ಸಾಮಾನ್ಯ ಅಸ್ವಸ್ಥತೆ ಎಂದು ಭಾವಿಸಿ ಆಸ್ಪತ್ರೆಗೆ ಹೋಗುವುದನ್ನು ತಡ ಮಾಡಿದ್ದರು ಎನ್ನಲಾಗಿದೆ. ನಂತರ ಆಸ್ಪತ್ರೆಗೆ ಹೋದರು ಕೂಡ ಆಗ ಸಮಯ ಕೈ ಮೀರಿ ಹೋಗಿತ್ತು.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವೈದ್ಯಕೀಯ ತಜ್ಞರು, “ಸ್ಮಾರ್ಟ್ವಾಚ್ಗಳು ಕೇವಲ ಮೇಲ್ಪದರದ ಮಾಹಿತಿ ನೀಡುತ್ತವೆ. ಅವು ವೈದ್ಯಕೀಯ ದರ್ಜೆಯ ಇಸಿಜಿ (ECG) ಅಥವಾ ಕಾರ್ಡಿಯಾಕ್ ಪರೀಕ್ಷೆಗಳಿಗೆ ಪರ್ಯಾಯವಲ್ಲ. ಎದೆನೋವು ಕಾಣಿಸಿಕೊಂಡಾಗ ‘ಗೋಲ್ಡನ್ ಅವರ್’ (Golden Hour) ಅಂದರೆ ಮೊದಲ ಒಂದು ಗಂಟೆ ಅತ್ಯಂತ ನಿರ್ಣಾಯಕ. ಆ ಸಮಯದಲ್ಲಿ ಸ್ಮಾರ್ಟ್ವಾಚ್ ರೀಡಿಂಗ್ ನೋಡಿ ಸುಮ್ಮನಿರುವುದು ಪ್ರಾಣಕ್ಕೇ ಅಪಾಯ ತರಬಹುದು,” ಎಂದು ಎಚ್ಚರಿಸಿದ್ದಾರೆ.

