ಮಂಗಳೂರು: ಭಾರೀ ಉರಿ ಬಿಸಿಲಿನಿಂದ ತತ್ತರಿಸಿ ಬಸವಳಿದಿದ್ದ ಜನರಿಗೆ ಶನಿವಾರ ಸುರಿದ ಮಳೆ ತಂಪು ನೀಡಿದೆ. ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರುವಾಶೆ, ಮಾಳ, ನೂರಲ್ ಬೆಟ್ಟು ಹಾಗೂ ಬಜಗೋಳಿ ಭಾಗಗಳಲ್ಲಿ ಭಾರೀ ಮಳೆಯಾಗಿದೆ.

ಹೆಬ್ರಿ ತಾಲೂಕಿನ ಮುನಿಯಾಲು, ಅಂಡಾರು, ಮುದ್ರಾಡಿ, ಕಬ್ಬಿನಾಲೆ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿದೆ. ಮುಂಜಾನೆಯೇ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಸಂಜೆ ಸಮಯದಲ್ಲಿ ಏಕಾಏಕಿ ಮಳೆ ಆರಂಭವಾಗಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ, ಧರ್ಮಸ್ಥಳದಲ್ಲಿ ಶನಿವಾರ ಸಂಜೆ ಮಳೆ ಸುರಿದಿದೆ. ಮುಂಡಾಜೆ, ಗುರುವಾಯನಕೆರೆ ಮೊದಲಾದ ಕಡೆ ಹನಿ ಹನಿಯಾಗಿ ಬಿದ್ದಿದೆ. ಉಜಿರೆ, ಧರ್ಮಸ್ಥಳದಲ್ಲಿ ಸುಮಾರು ಅರ್ಧ ಗಂಟೆ ಗುಡುಗು ಸಿಡಿಲು ಇಲ್ಲದೆ ಉತ್ತಮ ಮಳೆ ಬಂದಿದೆ. ಗುರುವಾಯನಕೆರೆ ಪ್ರದೇಶದಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು. ನಂತರ ಮಳೆ ಸುರಿದಿದೆ.
