

ಉಜಿರೆ: ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗವನ್ನು ಮೊದಲ ಬಾರಿ ಆರಂಭಿಸುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪ್ರೊ.ಪ್ರಭಾಕರ್ ಹಾಗು ಡಾ!ಯಶೋವರ್ಮ ಅವರ ಒಡನಾಟ,ಮಾರ್ಗದರ್ಶನದಲ್ಲಿ ಸಿಕ್ಕ ಸ್ವಾತಂತ್ರ್ಯ ಹಾಗೂ ಅವಕಾಶವನ್ನು ಬಳಸಿಕೊಂಡು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು. ಒಳ್ಳೆಯ ಸಂಸ್ಥೆಯಲ್ಲಿ ಕೆಲಸ ಮಾಡಿದ ಧನ್ಯತಾಭಾವವಿದೆ.
33 ವರ್ಷ ಸೇವೆಯ ಜತೆಗೆ ಮಂಜುವಾಣಿಯಲ್ಲಿ ಅಂಕಣಕಾರನಾಗಿ ಸಹಸಂಪಾದಕನಾಗಿ ಅನುಭವ ಪಡೆಯಲು ಸಾಧ್ಯವಾಯಿತು. ಉಜಿರೆಗೆ ಬಂದು ಸಾಮ್ರಾಜ್ಯ ಕಟ್ಟಿದ ಅನುಭವ ತೃಪ್ತಿ ನೀಡಿದೆ ಎಂದು ಉಜಿರೆ ಎಸ್ ಡಿ ಎಂ ಕಾಲೇಜಿನ ಪತ್ರಿಕೋದ್ಯಮ ಹಾಗು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ,ಕಲಾ ನಿಕಾಯದ ಡೀನ್ ಡಾ!ಭಾಸ್ಕರ ಹೆಗಡೆ ನುಡಿದರು.
ಅವರು ಜ 30ರಂದು ಉಜಿರೆ ಎಸ್ ಡಿ ಎಂ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಕಾಲೇಜಿನಲ್ಲಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ತನ್ನ ಸುದೀರ್ಘ ಸೇವಾನುಭವದ ಸಿಹಿ ಕಹಿ ನೆನಪುಗಳನ್ನು ಎಲೆ ಎಳೆಯಾಗಿ ಬಿಚ್ಚಿಟ್ಟರು.
ಕಾಲೇಜಿನ ಉಪನ್ಯಾಸದ ಜತೆಗೆ ನಮ್ಮೂರ ವಾರ್ತೆಯಲ್ಲಿ 623 ಸಂಚಿಕೆ, 3 ಸಾವಿರಕ್ಕೂ ಮಿಕ್ಕಿ ಯಶೋಗಾಥೆಗಳ ಸಂಕಲನ,ಮಸ್ತಕಾಭಿಷೇಕ,ನಡಾವಳಿ, ತುಳು ಸಮ್ಮೇಳನ ಲಕ್ಷ ದೀಪೋತ್ಸವ, ಸಾಹಿತ್ಯ ಸಮ್ಮೇಳನ ರೇಡಿಯೋ ನಿನಾದ ಹೀಗೆ ಬಹುಮುಖ ಬೆಳವಣಿಗೆಗೆ ಅವಕಾಶ ದೊರೆತಿರುವುದು ಸದಾ ನೆನಪಿನಲ್ಲುಳಿಯುವಂತಹುದು ಎಂದು ಸ್ಮರಿಸಿ ಕೃತಜ್ಞತೆ ಸಲ್ಲಸಿದರು. ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ!ಸತೀಶ್ಚಂದ್ರ ಎಸ್ ಮಾತನಾಡಿ ಭಾಸ್ಕರ ಹೆಗಡೆಯವರು ಜನಪ್ರಿಯ ಉಪನ್ಯಾಸಕರಾಗಿ ಅವರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಯಶಸ್ವಿಯಾಗಿ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಕೀರ್ತಿ ತರುವುದರ ಜತೆಗೆ ಅವರ ತರಬೇತಿಯಿಂದ ಉದ್ಯೋಗಾವಕಾಶಗಳಲ್ಲಿ ಆದ್ಯತೆ ಪಡೆದು ಪ್ರತಿಷ್ಠಿತ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಲು ಕಾರಣರಾಗಿದ್ದಾರೆ.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ, ಹೊಸತನವನ್ನು ಅಳವಡಿಸಿ ಸಂಸ್ಥೆಗೆ ಕೀರ್ತಿತರುವಂತವರಾಗಿದ್ದಾರೆ.ವಿದ್ಯಾರ್ಥಿಗಳಿಗೆ ಬೆಳಕು ನೀಡಿದ ಭಾಸ್ಕರ ನಾಗಿ ಸಹೃದಯಿಯಾಗಿ ಅವರ ಕೊಡುಗೆ, ಸಾಧನೆ ಯಿಂದ ಒಳ್ಳೆಯ ವಿಭಾಗ ಕಟ್ಟಿ ಬೆಳೆಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಆಡಳಿತ ಮಂಡಳಿಯ ಪರವಾಗಿ ಅವರಿಗೆ ಉತ್ತರೋತ್ತರ ಯಶಸ್ಸು, ಅರೋಗ್ಯ ಸಮೃದ್ಧಿಯಾಗಿರಲಿ ಎಂದು ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ. ಅಭಿನಂದಿಸಿ ಭಾಸ್ಕರ ಹೆಗಡೆಯವರ ಕೊಡುಗೆ, ಸಹಜೀವನ, ಅನುಭವ,ವಿಭಾಗದಲ್ಲಿ ಅತಿ ಹೆಚ್ಚು ಚಟುವಟಿಕೆ ಗಳಿಗೆ ಸಮಯಾವಕಾಶ ದೊರಕಿಸಿ ಕೊಂಡು ವಿಶೇಷ ಆಸಕ್ತಿ ವಹಿಸಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿ,ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ನುಡಿದರು. ಕಾಲೇಜಿನ ಉಪನ್ಯಾಸಕರಾದ ಡಾ! ಹಂಪೇಶ್, ಡಾ!ಸುವೀರ್ ಜೈನ್, ಡಾ!ಮಹೇಶ್ ಕುಮಾರ್ ಶೆಟ್ಟಿ, ಡಾ!ಶ್ರೀಧರ ಭಟ್, ಡಾ!ಬಿ.ಪಿ.ಸಂಪತ್ ಕುಮಾರ್ ಭಾಸ್ಕರ ಹೆಗಡೆ ಯವರೊಂದಿಗಿನ ಆತ್ಮೀಯ ಒಡನಾಟವನ್ನು ಸ್ಮರಿಸಿಕೊಂಡು ಅಭಿನಂದಿಸಿದರು. ಡಾ! ಭಾನುಪ್ರಕಾಶ್ ಭಾಸ್ಕರ ಹೆಗಡೆಯವರ ಬಗೆಗೆ ಬರೆದ ಲೇಖನ, ಶ್ರೀಮತಿ ಅಭಿಜ್ಞಾ ಸ್ವರಚಿತ ಕವನವನ್ನು ವಾಚಿಸಿದರು. ಕಾಲೇಜಿನ ಪ್ರಾಧ್ಯಾಪಕ ಸಂಘದ ವತಿಯಿಂದ ಭಾಸ್ಕರ ಹೆಗಡೆಯವರನ್ನು ವಿಶೇಷವಾಗಿ ಸನ್ಮಾನಿಸಿ,ಗೌರವಿಸಲಾಯಿತು.
ಸೋನಿಯಾ ವರ್ಮಾ, ನಿವೃತ್ತ ಉಪನ್ಯಾಸಕರು, ಉಪನ್ಯಾಸಕ ವೃಂದ, ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಗಳು, ಅಭಿಮಾನಿಗಳು, ಭಾಸ್ಕರ ಹೆಗಡೆಯವರ ಕುಟುಂಬ ವರ್ಗ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಸಂಘದ ಕಾರ್ಯದರ್ಶಿ ಡಾ!ಭೋಜಮ್ಮ ಸ್ವಾಗತಿಸಿ, ಉಪನ್ಯಾಸಕ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು. ಮು ರ ಳಿಕೃಷ್ಣ ಆಚಾರ್ ಭಾಸ್ಕರ ಹೆಗಡೆಯವರನ್ನು ಸನ್ಮಾನಿಸಿ,ಗೌರವಿಸಿದರು.













