Valmiki Scam: ವಾಲ್ಮೀಕಿ ನಿಗಮ ಹಗರಣ : ಮತ್ತೆ ಬರೋಬ್ಬರಿ 7.5 ಕೋಟಿ ಹಣ ಜಪ್ತಿ : ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್

V‌almiki Scam: ಅಗೆದಷ್ಟು ಭ್ರಷ್ಟಚಾರದ ಕರ್ಮಕಾಂಡ ಬೆಳಕಿಗೆ ಬರುತ್ತಲೇ ಇದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್‌ (Valmiki Corporation Scam) ದಿನದಿಂದ ದಿನಕ್ಕೆ ಮತ್ತಷ್ಟು ತಿರುವುಗಳನ್ನು ಪಡೆದುಕೊಳ್ತಿದೆ. ವಿಶೇಷ ತನಿಖಾ ತಂಡ (SIT) ಚಾರ್ಜ್‌ಶೀಟ್‌ನ್ನು ಸಲ್ಲಿಸಿದ ನಂತರವೂ ತನ್ನ ಬೇಟೆಯನ್ನು ಮುಂದುವರಿಸಿದೆ. ಆ.5ರಂದು SIT ಮತ್ತೆ 7.5 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ. ಫಸ್ಟ್ ಫಿನಾನ್ಸ್ ಬ್ಯಾಂಕ್ಸ್‌ನ ಅಧ್ಯಕ್ಷ ಸತ್ಯನಾರಾಯಣ ಇಟ್ಕಾರಿ ಅವರಿಂದ ಆರ್‌ಬಿಎಲ್‌ ಬ್ಯಾಂಕ್‌ನಲ್ಲಿದ್ದ (RBL Bank) ಅವರ ಖಾತೆಯಿಂದ ಈ ಹಣವನ್ನು ವಶಕ್ಕೆ ತೆಗೆದುಕೊಂಡಿದೆ. ಇದು ಸೇರಿದಂತೆ ಈವರೆಗೆ ಎಸ್‌ಐಟಿ ಒಟ್ಟು 57 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಮಧ್ಯೆ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಗಾದ ಕಾಂಗ್ರೆಸ್‌ ಮಾಜಿ ಸಚಿವ ಬಿ.ಎನ್‌ ನಾಗೇಂದ್ರ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆಯಾಗಿದೆ. ನ್ಯಾಯಾಂಗ ಬಂಧನ ಸೋಮವಾರ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಾಗೇಂದ್ರ (BN Nagendra) ಅವರನ್ನು ಇಡಿ ಹಾಜರುಪಡಿಸಿತ್ತು. ನಾಗೇಂದ್ರ ಅವರು ಜಾಮೀನು ಕೋರಿ ಯಾವುದೇ ಅರ್ಜಿ ಹಾಕದ ಕಾರಣ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಲಾಗಿದೆ. ಆಗಸ್ಟ್ 14ರ ವರೆಗೂ ಈ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.

ಬರೋಬ್ಬರಿ 3೦೦೦ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಹಗರಣ ಬೆಳಕಿಗೆ ಬಂದಾಗಿನಿಂದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ಸುಮಾರು 3,072 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಸತ್ಯಾರಾಯಣ ವರ್ಮಾ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ಸತ್ಯನಾರಾಯಣ ಇಟ್ಕಾರಿ, ಸಾಯಿ ತೇಜ, ನಾಗೇಶ್ವರ್ ಸೇರಿದಂತೆ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ತನಿಖೆಯ ಸಂದರ್ಭ SIT ತಂಡ ಸುಮಾರು 45 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ಜಪ್ತಿ ಮಾಡಿದೆ ಎಂದು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ. ಚಾರ್ಜ್‌ಶೀಟ್‌ ಸಲ್ಲಿಸಿದ ಬೆನ್ನಲ್ಲೇ ಮತ್ತೊಂದು ದಾಳಿ ಮಾಡಿ 7.5 ಕೋಟಿ ಹಣವನ್ನು ಜಪ್ತಿ ಮಾಡಿದೆ.

Leave A Reply

Your email address will not be published.