ಭಾರತದ ಭರವಸೆಯ ಯುವ ಟೇಬಲ್ ಟೆನಿಸ್ ಆಟಗಾರ ರಸ್ತೆ ಅಪಘಾತಕ್ಕೆ ಬಲಿ !! | ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ದುರಂತ

Share the Article

ಯಶಸ್ವಿ ಆಟಗಾರನಾಗಿ ಹೊರಹೊಮ್ಮಬೇಕಿದ್ದ ಯುವ ಟೇಬಲ್ ಟೆನಿಸ್ ಆಟಗಾರನೊಬ್ಬ ತನ್ನ ಕನಸು ನನಸಾಗುವ ಮುಂಚೆಯೇ ಇಹಲೋಕ ತ್ಯಜಿಸಿದ್ದಾನೆ. ತಮಿಳುನಾಡು ಮೂಲದ ಯುವ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಶಿಲಾಂಗ್‌ನಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. 18 ವರ್ಷದ ವಿಶ್ವ ಅವರು ತಂಡದ ಮೂವರು ಆಟಗಾರರ ಜೊತೆ ಗುವಾಹಟಿಯಿಂದ ಶಿಲಾಂಗ್‌ಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮುಂಭಾಗದಿಂದ ಬಂದ 12 ಚಕ್ರಗಳ ಟ್ರೇಲರ್, ರಸ್ತೆ ವಿಭಜಕಕ್ಕೆ ಗುದ್ದಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದು, ವಿಶ್ವ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನುಳಿದ ರಮೇಶ್ ಸಂತೋಷ್ ಕುಮಾರ್, ಅವಿನಾಶ್ ಪ್ರಸನ್ನಜಿ ಮತ್ತು ಕಿಶೋರ್ ಕುಮಾರ್ ಗಂಭೀರ ಗಾಯಗೊಂಡಿದ್ದಾರೆ ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ ತಿಳಿಸಿದೆ.

ರಾಷ್ಟ್ರೀಯ ಟೂರ್ನಿಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿರುವ ವಿಶ್ವ ಅವರು ಅಂತಾರಾಷ್ಟ್ರೀಯ ಟೂರ್ನಿಗಳಲ್ಲೂ ಪದಕ ಗಳಿಸಿದ್ದಾರೆ. ಇದೇ 27ರಿಂದ ಆಸ್ಟ್ರಿಯಾದ ಲಿನ್ಜ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಟಿ ಯೂತ್ ಕಂಟೆಂಡರ್‌ನಲ್ಲಿ ಅವರು ಪಾಲ್ಗೊಳ್ಳಬೇಕಾಗಿತ್ತು.

Leave A Reply