Police: ಸುಳ್ಳು ಕೊಲೆ ಕೇಸ್ ಹಾಕಿ ಅಮಾಯಕನನ್ನು ಜೈಲಿಗೆ ಕಳುಹಿಸಿದ ಪೊಲೀಸ್ ಅಧಿಕಾರಿಗಳು ಸಸ್ಪೆಂಡ್!

Police: ಸುಳ್ಳು ಕೊಲೆ ಕೇಸ್ ಹಾಕಿ ಅಮಾಯಕನನ್ನು ಜೈಲಿಗೆ ಕಳುಹಿಸಿದ ಆರೋಪದ ಮೇಲೆ ಇನ್ಸ್ಪೆಕ್ಟರ್ ಮತ್ತು ಇಬ್ಬರು ಸಬ್ ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡಲಾಗಿದೆ.

ಕುಶಾಲನಗರ ಟೌನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಜಿ ಪ್ರಕಾಶ್, ಇಲವಾಲ ಸಬ್ ಇನ್ಸ್ಪೆಕ್ಟರ್ ಮಹೇಶ್ ಕುಮಾರ್ ಹಾಗೂ ಜಯಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಎತ್ತಿನಮನೆಯವರನ್ನು ಅಮಾನತು ಮಾಡಲಾಗಿದೆ. ಕೊಲೆ ಪ್ರಕರಣದ ವಿಚಾರಣಾಧಿಕಾರಿಗಳಾದ ಇವರು ಸುಳ್ಳು ಚಾರ್ಜ್ಶೀಟ್ ಹಾಕಿ ನಿರಪರಾಧಿಯನ್ನು ಜೈಲಿಗೆ ಕಳುಹಿಸಿದ್ದರು.
ಕುಶಾಲನಗರ ಸಮೀಪದ ಬಸವನಹಳ್ಳಿ ಹೊಸ ಬಡಾವಣೆಯ ಗಾಂಧಿ ಎಂಬುವರ ಪುತ್ರ ಸುರೇಶ್ ಅಲಿಯಾಸ್ ಕುರುಬರ ಸುರೇಶ್ ಎಂಬುವನ ವಿರುದ್ಧ ಅಂದು ಬೆಟ್ಟದಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಬಿ.ಜಿ ಪ್ರಕಾಶ್ ಸುಳ್ಳು ಚಾರ್ಜ್ಶೀಟ್ ಸಲ್ಲಿಸಿದ್ದರು. ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದಾಗ ಸುಳ್ಳು ಚಾರ್ಜ್ಶೀಟ್ ಹಾಕಿರುವುದು ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
2020ರ ನವೆಂಬರ್ 12 ರಂದು ಬೆಟ್ಟದಪುರದಲ್ಲಿ ಓರ್ವ ಮಹಿಳೆಯ ಮೃತದೇಹ ಸಿಕ್ಕಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಬಲವಾದ ಏಟಿನಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಅದು ಕೊಲೆ ಎಂದು ಸ್ಪಷ್ಟಪವಾಗಿತ್ತು. ಈ ಮೃತ ಮಹಿಳೆ ಯಾರು? ಕೊಲೆ ಮಾಡಿದವರು ಯಾರು? ಎಂಬ ಪ್ರಶ್ನೆಗಳು ಮೂಡಿದ್ದವು.
ಈ ನಡುವೆ ಬಸವನಹಳ್ಳಿಯ ಸುರೇಶ್ ಅಲಿಯಾಸ್ ಕುರುಬರ ಸುರೇಶ್ ಅವರು 2020ರ ನವೆಂಬರ್ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪತ್ನಿ ಕಾಣೆಯಾಗಲು ಗಣೇಶ್ ಎಂಬಾತನೇ ಕಾರಣ ಎಂದು ತಿಳಿಸಿದ್ದರು. ಬಳಿಕ, ಮಲ್ಲಿಗೆಯ ತಾಯಿ ಗೌರಿ ಅವರು ಮಗಳು ಕೊಲೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಸುರೇಶ್ ಅವರನ್ನೇ ಆರೋಪಿಯಾಗಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಅಂದಿನ ವಿಚಾರಣಾಧಿಕಾರಿಗಳು ಕಟ್ಟುಕಥೆ ಕಟ್ಟಿದ್ದರು. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಬಿ.ಜಿ ಪ್ರಕಾಶ್ ನ್ಯಾಯಾಲಯಕ್ಕೆ ಸುಳ್ಳು ಚಾರ್ಜ್ಶೀಟ್ ಸಲ್ಲಿಸಿದ್ದರು.
ಕೋರ್ಟ್ನಲ್ಲಿ ಸತ್ಯ ಬಯಲು
ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈಗಾಗಲೇ 9 ಜನ ಸಾಕ್ಷಿದಾರರ ವಿಚಾರಣೆಯೂ ನಡೆದಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲಿ, ನಾನು (ಸುರೇಶ್) ನನ್ನ ಪತ್ನಿಯನ್ನು ಕೊಂದಿಲ್ಲ, ಆಕೆ ಬದುಕಿದ್ದಾಳೆ ಎಂದು ಸುರೇಶ್ ಅವರು ಪದೇ ಪದೆ ಮನವಿ ಮಾಡುತ್ತಿದ್ದರು.
ಅಷ್ಟೇ ಅಲ್ಲದೆ ನಮ್ಮ ತಾಯಿ ಬದುಕಿದ್ದಾಳೆ, ನಮ್ಮ ತಾಯಿ ಸತ್ತಿಲ್ಲ ಎಂದು ಸುರೇಶ್ ಮತ್ತು ಮಲ್ಲಿಗೆ ದಂಪತಿಯ ಮಕ್ಕಳಾದ ಕೃಷ್ಣ, ಕೀರ್ತಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಅಕ್ಕಪಕ್ಕದ ಮನೆಯವರೂ ಸಹಿತ ಮಲ್ಲಿಗೆ ಸತ್ತಿಲ್ಲ ಎಂದು ಸಾಕ್ಷ್ಯ ಹೇಳಿದ್ದರು.
ಸತ್ತಿದ್ದಾಳೆಂದು ಬಿಂಬಿಸಲಾಗಿದ್ದ ಮಲ್ಲಿಗೆ 2025ರ ಏಪ್ರಿಲ್ 2ರಂದು ಜಡ್ಜ್ ಮುಂದೆ ಹಾಜರಾಗಿದ್ದರು. ಕೋರ್ಟ್ನಲ್ಲಿ ಪೊಲೀಸರು ಹೇಳಿದ್ದು ಕಟ್ಟುಕತೆ ಎಂದು ಸಾಬೀತಾಗಿತ್ತು. ಆದರೆ, ಪತ್ನಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದ ಸುರೇಶ್ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದಾರೆ. ಇದೀಗ, ಸತ್ಯ ಹೊರ ಬಂದಿರುವುದರಿಂದ ಸುರೇಶ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುರೇಶ್ ವಿರುದ್ಧ ಸುಳ್ಳು ಕೇಸ್ ಹಾಕಿದ್ದ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
Comments are closed.