Udupi: ಕ್ರಿಶ್ಚಿಯನ್ ಮಿಶನರಿಗಳು ವಿದ್ಯೆ ನೀಡಿ ಬದುಕು ಕೊಟ್ಟವು, ಉಡುಪಿ ಮಠಗಳು ಏನು ಮಾಡಿದ್ವು? – ಖ್ಯಾತ ಚಿಂತಕ ಪುರುಷೋತ್ತಮ ಬಿಳಿಮಲೆ!!

Udupi: ಭಾರತಕ್ಕೆ ಬಂದ ಕ್ರಿಶ್ಚಿಯನ್ ಮಿಷನರಿಗಳು (Christian Missionary) ಶಾಲೆಗಳನ್ನು ತೆರೆದು, ವಿದ್ಯೆ ನೀಡಿ ನಮಗೆಲ್ಲರಿಗೂ ಬದುಕು ಕಟ್ಟಿಕೊಟ್ಟವು. ಆದರೆ ಶತಶತಮಾನಗಳ ಇತಿಹಾಸವಿರುವ ಉಡುಪಿಯ ಅಷ್ಟಮಠಗಳು ಏನು ಮಾಡಿದವು ಎಂದು ಕನ್ನಡದ ಖ್ಯಾತ ಚಿಂತಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ( purushottama bilimale)ಯವರು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕೆಲವು ವಾರಗಳ ಹಿಂದೆ ಉಡುಪಿ(Udupi) ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಉಡುಪಿಯ ಭಾಸೆಲ್ ಮಿಷನ್ ಮೆಮೊರಿಯಲ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು. ಇದರಲ್ಲಿ ಪುರುಷೋತ್ತಮ ಬಿಳಿ ಮಲೆಯವರು ಕೂಡ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಕರ್ನಾಟಕದ ಗತವೈಭವವನ್ನು ನೆನಪಿಸಿ ಅನೇಕ ವಿಚಾರಗಳನ್ನು ಅಭ್ಯಾಗತರ ಮುಂದೆ ತೆರೆದಿಟ್ಟರು.
ಈ ವೇಳೆ ಮಾತನಾಡಿದ ಅವರು ಆರಂಭದಿಂದಲೂ ವಿವಿಧ ಧರ್ಮಗಳ ಮಹಾನ್ ಪುರುಷರುಗಳಿಗೆ ಕರ್ನಾಟಕವೇ ಅಚ್ಚುಮೆಚ್ಚು ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ಹಲವು ಧರ್ಮಗಳ ಸಾಧನೆಯನ್ನು ಕೊಂಡಾಡಿದರು. ಈ ವೇಳೆ ಮಾತನಾಡುತ್ತಾ ಕ್ರಿಶ್ಚಿಯನ್ ಸಮುದಾಯ ಭಾರತಕ್ಕೆ ಬಂದು ಮಿಷನರಿಗಳನ್ನು ನಮಗೆಲ್ಲರಿಗೂ ವಿದ್ಯೆಯನ್ನು ನೀಡಿದವು, ಬದುಕನ್ನು ಕಟ್ಟಿಕೊಟ್ಟವು. ಅವರು ಬಂದು ಐವತ್ತು ವರ್ಷದಲ್ಲಿ ಈ ಸಾಧನೆ ಮಾಡಿದರು. ಆದರೆ ಇದೇ ನೆಲದಲ್ಲಿ ಹುಟ್ಟಿ ಬೆಳೆದು ಶತಮಾನಗಳ ಇತಿಹಾಸವಿರುವಂತಹ ಉಡುಪಿಯ ಅಷ್ಟಮಠಗಳು ಏನು ಮಾಡಿದವು ಎಂದು ನೇರವಾಗಿ ಪ್ರಶ್ನೆ ಹಾಕಿದರು. ಅಲ್ಲದೆ ಇಂದು ಚರ್ಚ್ ಗೆ ಕಲ್ಲು ಎಸೆಯುವ ಪುಡಾರಿಗಳಿಗೆ ಈ ಮಿಷನರಿಗಳು, ಚರ್ಚುಗಳು ನಮ್ಮ ತಂದೆ, ತಾಯಿಯವರಿಗೆ, ಅಜ್ಜಂದಿರಿಗೆ ವಿದ್ಯೆಯನ್ನು ಕೊಟ್ಟಿವೆ ಎಂಬಂತಹ ಯಾವ ನೈತಿಕ ಪ್ರಜ್ಞೆಯೂ ಕೂಡ ಇಲ್ಲ ಎಂದು ಕಟುವಾಗಿ ಟೀಕಿಸಿದರು.
ಇಷ್ಟೇ ಅಲ್ಲದೆ ಮಿಷನರಿಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆದ ಸಹಾಯವನ್ನು ಕೊಂಡಾಡಿದರು. ಅವಿಭಜಿತ ಜಿಲ್ಲೆಗಳ ಬೆಳವಣಿಗೆಗೆ ಮಿಷನರಿಗಳ ಸಾಧನೆ, ಕೊಡುಗೆ ಎಷ್ಟಿದೆ ಎಂಬುದನ್ನು ಸ್ಮರಿಸಿದ್ದರು. ಇದರೊಂದಿಗೆ ಹಿಜಾಬ್ ವಿವಾದವನ್ನು ನೆನಪಿಸಿ, ಆವಿವಾದ ನಮ್ಮ ಜಿಲ್ಲೆಯಿಂದಲೇ ಹುಟ್ಟಿಕೊಂಡಿತು ಎಂಬುದು ವಿಷಾದದ ಸಂಗತಿ ಎಂಬುದಾಗಿ ತಿಳಿಸಿ ಕಟುವಾಗಿ ಖಂಡಿಸಿದರು. ಸದ್ಯ ಅವರು ಮಾತನಾಡಿರುವಂತಹ ಈ ಒಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.