Muda Scam: ಮುಡಾ ಹಗರಣ: ಇಷ್ಟೆಲ್ಲಾ ಸಾಕ್ಷ್ಯ, ತನಿಖೆ ನಡೆಸ್ತಿದ್ರೂ ಯಾರನ್ನೂ ಬಂಧಿಸಿಲ್ಲ! ಲೋಕಾಯುಕ್ತ ವಿರುದ್ಧ ಸ್ನೇಹಮಯಿ ಕೃಷ್ಣ ಆಕ್ರೋಶ
Muda Scam: ಮುಡಾ ಹಗರಣದಲ್ಲಿ (Muda Scam) ಸಿಎಂ ವಿರುದ್ಧದ ಲೋಕಾಯುಕ್ತ ತನಿಖೆ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತರ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಮುಡಾ ಹಗರಣ ಸಂಬಂಧ ಒಂದು ತಿಂಗಳಿಂದ ವಿಚಾರಣೆ ಮಾಡುತ್ತಿರುವ ಲೋಕಾಯುಕ್ತ ಪೊಲೀಸರು ಒಬ್ಬರನ್ನೂ ಬಂಧಿಸಿಲ್ಲ ಎಂದು ಸಿಎಂ ವಿರುದ್ಧದ ಲೋಕಾಯುಕ್ತ ತನಿಖೆ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಮಾಧ್ಯಮ ಮೂಲಕ ಕಿಡಿ ಕಾರಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಇವರು ಕೇವಲ ಎರಡು-ಮೂರು ಸಾವಿರ ಲಂಚ ಪಡೆದವರನ್ನ ಬಂಧಿಸೋಕೆ ಇರೋದ? ಲೋಕಾಯುಕ್ತದಿಂದ ಈ ರೀತಿ ವಿಚಾರಣೆಯಿಂದಾಗಿ ಆರೋಪಿಗಳೆಲ್ಲ ಹೊರಗೆ ಬಂದು ಏನೇನೋ ಮಾತಾಡುವಂತೆ ಆಗಿದೆ. ಮುಡಾದ ಹಿಂದಿನ ಆಯುಕ್ತ ನಟೇಶ್ ನನಗೆ ಕಾನೂನು ತಿಳಿವಳಿಕೆ ಇಲ್ಲ ಎಂದಿದ್ದಾರೆ. ಆ ಅಯೋಗ್ಯನಿಗೆ ನಾನು ಸವಾಲು ಹಾಕುತ್ತೇನೆ. ಆತನ ಬಳಿ ಇರುವ ದಾಖಲೆಗಳನ್ನು ತೆಗೆದುಕೊಂಡು ಬರಲಿ. ಪಾರ್ವತಿ ಅವರಿಗೆ ನೀಡಿರುವ ಮಂಜೂರಾತಿ ಪತ್ರದಲ್ಲಿ ನಟೇಶ್ ಕ್ರಮ ಸಂಖ್ಯೆ ಯಾಕೆ ಹಾಕಿಲ್ಲ? 2015ರ ಕಾಯ್ದೆ ಪ್ರಕಾರ ಎಂದಿದ್ದಾರೆ. ಅಂದರೆ 2015ರ ಕಾಯ್ದೆಯಲ್ಲಿ 50-50 ನಿಯಮ ಜಾರಿ ಅಂತಾ ಎಲ್ಲಿ ಇದೆ. ಸುಪ್ರೀಂಕೋರ್ಟ್ ಆದೇಶ ಅನುಸಾರ ಅಂತೆಲ್ಲ ಮಾತಾಡಿದ್ದಾರೆ. ಕೇವಲ ಪಾರ್ವತಿ ಅವರಿಗೆ ನೀಡಿರುವ 14 ಸೈಟ್ ಮಾತ್ರವಲ್ಲ. ನಟೇಶ್ ಹಾಗೂ ದಿನೇಶ್ಕುಮಾರ್ ಕಾಲದಲ್ಲಿ ನೀಡಲಾದ ಅಕ್ರಮ ನಿವೇಶನಗಳ ದಾಖಲಾತಿ ಸಮೇತ ದೂರು ನೀಡಿದ್ದೇನೆ. ಇಷ್ಟಾದರೂ ಈ ಲೋಕಾಯುಕ್ತರು ಈ ವರೆಗೆ ಯಾರನ್ನೂ ಯಾಕೆ ಬಂಧಿಸಿಲ್ಲ? ಎಂದು ಕಿಡಿಕಾರಿದರು.
ಈ ಮುಡಾ ಪ್ರಕರಣದಲ್ಲಿ ಯಾರನ್ನೂ ಬಂಧಿಸದೆ ಈಗೇ ಮುಂದುವರಿದರೆ ಎಸ್ಪಿ ವಿರುದ್ಧವೇ ದೂರು ಕೊಡುತ್ತೇನೆ. ಲೋಕಾಯುಕ್ತ ಎಸ್ಪಿ ಉದೇಶ್ ವಿರುದ್ಧ ಹೈಕೋರ್ಟ್ ನಲ್ಲಿ ದೂರು ದಾಖಲಿಸುತ್ತೇನೆ. ಇವರು ಇರೋದು ಯಾಕೆ? ಇಷ್ಟೆಲ್ಲ ಸಾಕ್ಷ್ಯ ಸಮೇತ ದೂರು ಕೊಟ್ಟರೂ ಯಾಕೆ ಬಂಧಿಸಲಾಗುತ್ತಿಲ್ಲ? ತಿಂಗಳಿಂದ ವಿಚಾರಣೆ ಮಾಡಿ ಏನು ಕ್ರಮ ಕೈಗೊಂಡಿದ್ದಾರೆ? ಮೂರು ನಾಲ್ಕು ಸಾವಿರ ಲಂಚ ಪಡೆದ ಅಧಿಕಾರಿಗಳನ್ನು ತಕ್ಷಣ ಹೋಗಿ ಬಂಧಿಸುತ್ತೀರಿ, ಮುಡಾದಲ್ಲಿ ಇಷ್ಟೆಲ್ಲ ಹಗರಣ ನಡೆದಿದ್ರೂ, ಅದರ ಬಗ್ಗೆ ಸಾಕ್ಷ್ಯ ಸಮೇತ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ ಯಾಕೆ? ಎಂದು ಕಿಡಿಕಾರಿದರು.