Channapattana By Election: ಸಿ ಪಿ ಯೋಗೇಶ್ವರ್ ಪಕ್ಷೇತರ ಸ್ಪರ್ಧೆ ?!

 

Channapattana By Election: ರಾಜ್ಯದಲ್ಲಿ ಉಪಚುನಾವಣೆಯ (Assembly By Election) ಕಾವು ಜೋರಾಗಿದೆ. ಆದರೆ ಅಭ್ಯರ್ಥಿಗಳ ಆಯ್ಕೆ ಇನ್ನೂ ಕುತೂಹಲವಾಗಿಯೇ ಉಳಿದಿದೆ. ಅದರಲ್ಲೂ ಪ್ರತಿಷ್ಠೆಯ ಕ್ಷೇತ್ರವಾದ ಚನ್ನಪಟ್ಟಣ(Channapattana)ದ ಕಡೆಯೇ ಜನರ ಚಿತ್ತ ನೆಟ್ಟಿದೆ. ಇದನ್ನು ಜಿದ್ದಾಗಿ ಪರಿಗಣಿಸಿರುವ ಕಾಂಗ್ರೆಸ್ ಹಾಗೂ ಮೈತ್ರಿ ದೋಸ್ತಿಗಳು ಗೆಲ್ಲಲೇ ಬೇಕೆಂದು ಪಣತೊಟ್ಟಿವೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿವೆ. ಈ ನಡುವೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಟಿಕೆಟ್ ಆಕಾಂಕ್ಷಿ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಪಕ್ಷೇತರವಾಗಿ ಸ್ಪರ್ಧಿಸುತ್ತಾರಾ? ಎಂಬ ಅನುಮಾನಗಳು ಶುರುವಾಗಿವೆ.

 

ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿ ತಮ್ಮ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೂ ಈ ಕ್ಷೇತ್ರದಲ್ಲಿ ನಮ್ಮವರೇ ಗೆಲ್ಲಬೇಕೆಂಬುದು ಅವರ ಅಭಿಲಾಷೆ. ಅದು ಬಿಜೆಪಿ ಆಗಲಿ ಅಥವಾ ಜೆಡಿಎಸ್ ಆಗಲಿ, ಒಟ್ಟು ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎನ್ನುವುದು ಇಂಗಿತ.  ಇದರ ನಡುವೆಯೇ ಮೈತ್ರಿ ನಾಯಕರಿಗೆ ಸೆಡ್ಡು ಹೊಡೆಯಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ಮುಂದಾಗಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ತನಗೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿರೋ ಸಿಪಿವೈ, ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.

 

ನಾನೇ ಅಭ್ಯರ್ಥಿ ಎಂದ ಸಿಪಿವೈ:

ಈಗಾಗಲೇ ಟಿಕೆಟ್‌ಗಾಗಿ ಕೇಂದ್ರ ಸಚಿವ ಹೆಚ್‌ಡಿಕೆ (HD Kumaraswamy) ಹಾಗೂ ಬಿಜೆಪಿ ವರಿಷ್ಠರ ಬಳಿ ಮನವಿ ಮಾಡಿರೋ ಸಿಪಿವೈ ಸ್ಪರ್ಧೆಗೆ ಅವಕಾಶ ಕೋರಿದ್ದಾರೆ. ಆದರೆ ಮಗ ನಿಖಿಲ್ ನನ್ನು ಕಣಕ್ಕಿಳಿಸಿ ಕ್ಷೇತ್ರವನ್ನು JDS ನಲ್ಲೇ ಉಳಿಸಿಕೊಳ್ಳಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಕುಮಾರಸ್ವಾಮಿ ಅವರ ಈ ತಂತ್ರ ಅರಿತ ಸಿಪಿ ಯೋಗೇಶ್ವರ್, ಪಕ್ಷದ ವರಿಷ್ಠರು ಘೋಷಿಸುವ ಮುನ್ನವೇ ನಾನೇ ಮೈತ್ರಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಹೆಚ್‌ಡಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿ ಟಿಕೆಟ್ ಪಡೆಯುವ ಜಾಣ ನಡೆ ಅನುಸರಿಸಿದ್ದಾರೆ.

 

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ನಾನು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದೆ. ಆದಷ್ಟು ಬೇಗ ಅಭ್ಯರ್ಥಿ ಹೆಸರು ಸೂಚಿಸುವಂತೆ ಕೇಳಿದ್ದೇನೆ. ಈಗಾಗಲೇ ಕಾಂಗ್ರೆಸ್ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ. ಅದಕ್ಕೆ ಅಧಿಕೃತ ಅನುಮೋದನೆ ಅವರೇ ಕೊಡಬೇಕು. ಮೈತ್ರಿ ಪಕ್ಷದ ವರಿಷ್ಠರು ಅಧಿಕೃತ ಘೋಷಣೆ ಮಾಡಬೇಕು. ಹಾಗಾಗಿ ನೀವೇ ಬಂದು ಹೆಸರು ಘೋಷಣೆ ಮಾಡಿ ಎಂದು ಅವರನ್ನೇ ಕೇಳಿದ್ದೇನೆ ಎಂದಿದ್ದಾರೆ.

 

ಸಂಸದ ಡಾ ಮಂಜುನಾಥ್ ಪತ್ನಿ ಕಣ್ಣಕೆ?

ಡಾ ಸಿ ಎನ್ ಮಂಜುನಾಥ್ ಪತ್ನಿ, ದೇವೇಗೌಡರ ಸುಪುತ್ರಿ ಅನುಸೂಯಾ(Anusuya Mamjunath) ಅವರನ್ನು ಚನ್ನಪಟ್ಟಣ ಮೈತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಮೈತ್ರಿ ಪಕ್ಷಗಳ ನಾಯಕರು ಚರ್ಚೆ ನಡೆಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಒಂದು ವೇಳೆ ಅನಸೂಯಾ ಅವರನ್ನು ಕಣಕ್ಕಿಳಿಸಿದರೆ ಯಾವೆಲ್ಲ ಪ್ರಯೋಜನಗಳು ಆಗಬಹುದು ಎಂಬ ಬಗ್ಗೆ ಹಾಗೂ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಉಭಯ ಪಕ್ಷಗಳ ನಾಯಕರು ತೊಡಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮಂಜುನಾಥ್ ಇದೆಲ್ಲವನ್ನು ಅಲ್ಲಗಳೆದಿದ್ದಾರೆ.

Leave A Reply

Your email address will not be published.