Bangalore: ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಮೃತ್ಯು ಪ್ರಕರಣ :1100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ!

Bangalore: ಬೆಂಗಳೂರು, ಜೂ.23: ಐದು ತಿಂಗಳ ಹಿಂದೆ ಬೆಂಗಳೂರು ನಗರದ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗ ಮೃತಪಟ್ಟ ಪ್ರಕರಣದ ಕುರಿತಂತೆ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಜನವರಿ 10ರಂದು ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ (28)ದಂಪತಿ ತಮ್ಮಿಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನ ನಾಗವಾರದಿಂದ (Bangalore) ಸಂಚರಿಸುತ್ತಿದ್ದ ಸಂದರ್ಭ ಕಲ್ಯಾಣ್ ನಗರದಿಂದ ಎಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾಗುತ್ತಿದ್ದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಕಬ್ಬಿಣದ ರಾಡ್‌ಗಳು ಇದ್ದಕ್ಕಿದ್ದಂತೆ ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದ ಘಟನೆ ನಡೆದಿತ್ತು. ಈ ಅವಘಡದ ಪರಿಣಾಮ ತೇಜಸ್ವಿನಿ (28) ಮತ್ತು ಆಕೆಯ ಎರಡೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ್ದರು. ಮತ್ತೊಂದು ಮಗು ಮತ್ತು ಮೃತರ ಪತಿ ಲೋಹಿತ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ದುರ್ಘಟನೆಯ ಬಳಿಕ ಈ ಕುರಿತಂತೆ ಲೋಹಿತ್ ಕುಮಾರ್ ನೀಡಿದ ದೂರಿನ ಅನ್ವಯ ಸೈಟ್ ಇಂಜಿನಿಯರ್ಸ್, ಗುತ್ತಿಗೆದಾರರು, ಬಿಎಂಆರ್ ಸಿಎಲ್ ಅಧಿಕಾರಿಗಳು, ಸೈಟ್ ಇನ್‌ಚಾರ್ಜ್ ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಸುಮಾರು ಐದು ತಿಂಗಳುಗಳ ಕಾಲ ಸುದೀರ್ಘ ತನಿಖೆಯ ಬಳಿಕ ಗೋವಿಂದಪುರ ಠಾಣಾ ಪೊಲೀಸರು ನಿರ್ಮಾಣ ಕಂಪನಿಯ ಇಂಜಿನಿಯರ್ಸ್ ಹಾಗೂ ಬಿಎಂಆರ್​ಸಿಎಲ್ ಇಂಜಿನಿಯರ್ಸ್ ಸೇರಿ ಸುಮಾರು 1100 ಪುಟಗಳ ದೋಷಾರೋಪಣೆ ಪಟ್ಟಿಯಲ್ಲಿ 11 ಅಧಿಕಾರಿಗಳ ಮೇಲೆ ದೋಷಾರೋಪ ಮಾಡಲಾಗಿದೆ.

ತಜ್ಞರ ವರದಿಯನ್ನೊಳಗೊಂಡು ಪೊಲೀಸರ ತನಿಖೆ ಎಫ್‌ಎಸ್ಎಲ್ ರಿಪೋರ್ಟ್‌ ಆಧಾರದ ಮೇಲೆ ತನಿಖೆ ನಡೆಸಿದ್ದ ಪೊಲೀಸರು ಐಐಟಿ ರಿಪೋರ್ಟ್ ಮತ್ತು ಎಫ್‌ಎಸ್ಎಲ್ ರಿಪೋರ್ಟ್ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಕಾಮಗಾರಿ ಯೋಜನೆಯ ದಾಖಲೆಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಪಿಲ್ಲರ್ ಡಿಸೈನ್ ಮಾಡಲಾದ ಬಗೆ ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕಿತ್ತು, ಲೋಪ ಯಾರದ್ದು ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಇದಲ್ಲದೆ ಈ ಘಟನೆ ಬಗ್ಗೆ ಐಐಟಿ ರಿಪೋರ್ಟ್ ಮತ್ತು ಬಳಕೆಯಾದ ಮೆಟಿರಿಯಲ್ಸ್ ಬಗ್ಗೆ ಎಫ್‌ಎಸ್ಎಲ್ ರಿಪೋರ್ಟ್ ಪಡೆದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರ ಜೊತೆಗೆ ಅಧಿಕಾರಿಗಳ ಲೋಪ, ಹಾಗೂ ಪಿಲ್ಲರ್ ನಿರ್ಮಾಣ ವೇಳೆ ಕೈಗೊಂಡ ಸುರಕ್ಷತಾ ಕ್ರಮಗಳ ವೈಫಲ್ಯ ಹಾಗೂ ನಿರ್ಲಕ್ಷ್ಯ ಧೋರಣೆ ಬಗ್ಗೆ ಕೂಡ ಮಾಹಿತಿ ನೀಡಲಾಗಿದೆ.

 

ಇದನ್ನು ಓದಿ: Natural drinks: ನಿಮ್ಮ ತ್ವಚೆ ಬಂಗಾರದಂತೆ ಫಳಫಳ ಹೊಳೆಯಲು ಈ ಮೂರು ಪದಾರ್ಥ ಬೆಸ್ಟ್‌!

Leave A Reply

Your email address will not be published.