Home » ಉಡುಪಿ: ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ದೋಣಿ ಸಮುದ್ರದಲ್ಲಿ ಪಲ್ಟಿ: ಇಬ್ಬರು ಸಾವು

ಉಡುಪಿ: ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ದೋಣಿ ಸಮುದ್ರದಲ್ಲಿ ಪಲ್ಟಿ: ಇಬ್ಬರು ಸಾವು

0 comments

ಉಡುಪಿ: ಪ್ರವಾಸಿಗರನ್ನು ವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದ ದೋಣಿಯೊಂದು ಪಲ್ಟಿಯಾಗಿರುವ ಘಟನೆ ಕುಂದಾಪುರ ಕೋಡಿಬೆಂಗ್ರೆ ಬೀಚ್‌ ಸಮೀಪ ಇಂದು ಮಧ್ಯಾಹ್ನ ನಡೆದಿದೆ. ಮೈಸೂರು ಮೂಲದ ಇಬ್ಬರು ಪ್ರವಾಸಿಗರು ಸಾವಿಗೀಡಾದ ಘಟನೆ ನಡೆದಿದೆ.

ಮೈಸೂರು ಮೂಲದ ಶಂಕರಪ್ಪ (22) ಸಿಂಧು (23) ಮೃತರು. ದಿಶಾ (26) ಎಂಬ ಮಹಿಳೆಯ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಧರ್ಮರಾಜ (26) ಎನ್ನುವವರು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸುತ್ತಿದ್ದಾರೆ. ಇವರು ಮೈಸೂರು ಮೂಲದವರು.

14 ಮಂದಿಯ ತಂಡ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಿಂದ ಪ್ರವಾಸಿ ದೋಣಿ ಮೂಲಕ ಸಮುದ್ರದಲ್ಲಿ ವಿಹಾರಕ್ಕೆ ಹೊರಟಿದ್ದು, ಸುಮಾರು 12 ಗಂಟೆಗೆ ಹಂಗಾರಕಟ್ಟೆ ಶಿಪ್‌ ಬಿಲ್ಡಿಂಗ್‌ ಪ್ರದೇಶದ ಸಮೀಪ ನದಿ ಸಮುದ್ರ ಸೇರುವ ಸ್ಥಳದಲ್ಲಿ ದೋಣಿ ಆಕಸ್ಮಿಕವಾಗಿ ಪಲ್ಟಿಯಾಗಿದೆ. ದೋಣಿಯಲ್ಲಿದ್ದ 14 ಮಂದಿ ಸಮುದ್ರದ ನೀರಿಗೆ ಬಿದ್ದಿದ್ದು, ಇವರಲ್ಲಿ ಕೆಲವರು ಮಾತ್ರ ಲೈಫ್‌ ಜಾಕೆಟ್‌ ಧರಿಸಿದ್ದರು ಎನ್ನಲಾಗಿದೆ. ನೀರಿಗೆ ಬಿದ್ದವರನ್ನು ಕೂಡಲೇ ಇತರ ದೋಣಿಯವರು ರಕ್ಷಿಸಿ ತೀರಕ್ಕೆ ಕರೆದುಕೊಂಡು ಬಂದಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿತ್ತು.

ಗಂಭೀರವಾಗಿ ಗಾಯಗೊಂಡವನ್ನು ಕೂಡಲೇ ಉಡುಪಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

banner

You may also like