BJP Manifesto: ಬಿಜೆಪಿಯ `ಪ್ರಜಾ ಪ್ರಣಾಳಿಕೆ’ ಬಿಡುಗಡೆ : BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು, 5 ಕೆಜಿ ಅಕ್ಕಿ, 5 ಕೆಜಿ ಸಿರಿ ಧಾನ್ಯ !

BJP Manifesto released: ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ತನ್ನ ಜನಪ್ರಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆ (BJP Manifesto released) ಮಾಡಿದೆ. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಬಿಜೆಪಿಯ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಜನ ಸಾಮಾನ್ಯರನ್ನು ಆಕರ್ಷಿಸಲು ಮತ್ತು ಕಾಂಗ್ರೆಸ್ನ ಹಲವು ಗ್ಯಾರೆಂಟಿಗಳಿಗೆ ಟಕ್ಕರ್ ನೀಡಲು ಬಿಜೆಪಿ ಈ ಜನಪ್ರಿಯ ಪ್ರಣಾಳಿಕೆ ಮಾಡಿದೆ ಎನ್ನಲಾಗಿದೆ.

ಪ್ರಜಾ ಪ್ರಣಾಳಿಕೆ ಬಿಡುಗಡೆಯ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಪ್ರಜಾ ಪ್ರಣಾಳಿಕೆ ಬಿಡುಗಡೆ ನಂತರ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ‘ಜನರ ಹಿತದೃಷ್ಟಿಯಿಂದ ಪ್ರಜಾ ಪ್ರಣಾಳಿಕೆ ತಯಾರಿಸಿದ್ದೇವೆ. ಇದರಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಅರ್ಧಲೀಟರ್ ನಂದಿನಿ ಹಾಲು ಕೊಡುತ್ತೇವೆ. ಬಡವರ ಕಲ್ಯಾಣಕ್ಕೆ ನಾವು ಮಹತ್ವ ನೀಡಿದ್ದೇವೆ ‘ ಎಂದಿದ್ದಾರೆ.

ಅಷ್ಟೇ ಅಲ್ಲದೆ, ‘ ಆಯುಷ್ಮಾನ್ ಕಾರ್ಡ್ ಫಲಾನುಭವಿಗಳ ಚಿಕಿತ್ಸಾ ವೆಚ್ಚವನ್ನು 10 ಲಕ್ಷ ರೂ.ಗೆ ಏರಿಕೆ ಮಾಡಲಾಗುವುದು. ಬಿಪಿಎಲ್ ಕಾರ್ಡುದಾರರಿಗೆ 5 ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ ನೀಡಲಾಗುವುದು’ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬಿಜೆಪಿ ಭರವಸೆಗಳು :-

• ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಹಲವು ಸವಲತ್ತುಗಳನ್ನು ನೀಡುವುದಾಗಿ ಭರವಸೆ ನೀಡಿದ್ದು, ಬಿಪಿಎಲ್ ಕುಟುಂಬಗಳಿಗೆ ಯುಗಾದಿ, ಗಣೇಶ ಮತ್ತು ದೀಪಾವಳಿ ಹಬ್ಬಕ್ಕೆ ಮೂರು ಎಲ್ಪಿಜಿ ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
• ಏಕರೂಪ ನಾಗರಿಕೆ ಸಂಹಿತೆ ಅಭಯ, ಪ್ರತಿ ವಾರ್ಡ್ನಲ್ಲಿಯೂ ಅಟಲ್ ಆಹಾರ ಕೇಂದ್ರ ಸ್ಥಾಪಿಸಲಾಗುವುದು.
• ಮೊಬೈಲ್ ಪಶು ಆರೋಗ್ಯ ಕ್ಲಿನಿಕ್ ಆರಂಭ ಮಾಡುವುದಾಗಿ ಭರವಸೆ.
• ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಉಚಿತವಾಗಿ ಅರ್ಧ ಲೀಟರ್ ನಂದಿನಿ ಹಾಲು ವಿತರಣೆ ಹಾಗೂ ಶ್ರೀ ಅನ್ನ ಯೋಜನೆಯಡಿ 5 ಕೆಜಿ ಅಕ್ಕಿ ಮತ್ತು 5 ಕೆಜಿ ಸಿರಿಧಾನ್ಯ ವಿತರಣೆ ಮಾಡುವುದಾಗಿ ಪ್ರಕಟಿಸಿದೆ.
• ಎಲ್ಲರಿಗೂ ಸೂರು ಯೋಜನೆಯಡಿ 10 ಲಕ್ಷ ಮನೆಗಳ ನಿರ್ಮಾಣ ಮಾಡಲಾಗುವುದು.
• ವಿಶ್ವೇಶ್ವರಯ್ಯ ವಿದ್ಯಾ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳ ಮೇಲ್ದರ್ಜೆ, ಮೈಸೂರಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ದೇಶದ ಅತಿದೊಡ್ಡ ಪುನೀತ್ ರಾಜ್ ಕುಮಾರ್ ಫಿಲ್ಮ್ ಸಿಟಿ ಸ್ಥಾಪನೆ ಮಾಡಲಾಗುವುದು.
• ಪ್ರತಿ ಜಿಲ್ಲೆಯಲ್ಲಿ ಐಐಟಿ ಮಾದರಿಯ ಕೆಐಟಿ (ಕರ್ನಾಟಕ ತಂತ್ರಜ್ಞಾನ ಸಂಸ್ಥೆ) ಆರಂಭದ ಭರವಸೆ.
• ಮುಂದಿನ ಐದು ವರ್ಷಗಳಲ್ಲಿ 200 ಮೀನು ಕೃಷಿ ಉತ್ಪಾದನಾ ಕೇಂದ್ರಗಳ ಸ್ಥಾಪಿಸಲಾಗುವುದು.
• ಹೈನುಗಾರರಿಗೆ ನೀಡುವ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ಗೆ 5 ರಿಂದ 7 ರೂಪಾಯಿ ಏರಿಕೆ ಮಾಡುವುದಾಗಿ ಎಂಬ ಭರವಸೆ ನೀಡಲಾಗಿದೆ.

ಇದನ್ನೂ ಓದಿ: Congress Guarantee: 6ನೇ ಗ್ಯಾರಂಟಿ ಘೋಷಣೆ: ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಬಂಪರ್ ಕೊಡುಗೆ!

Leave A Reply

Your email address will not be published.