Chaitra Kundapura: ಆಸ್ತಿಗಾಗಿ ನನ್ನ ಮಗಳು ನನ್ನನ್ನು ಕೊಲೆ ಮಾಡಬಹುದು- ಚೈತ್ರಾ ಅಪ್ಪನಿಂದ ದೂರು ದಾಖಲು

Chaitra Kundapura: ಬಾಲಕೃಷ್ಣ ನಾಯಕ್ ಹಾಗೂ ಚೈತ್ರಾಕುಂದಾಪುರ ನಡುವಿನ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಂದೆಯೇ ಈಗ ಮಗಳ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಆಸ್ತಿಗಾಗಿ ನನ್ನ ಮಗಳು ನನ್ನನ್ನು ಕೊಲೆ ಮಾಡಬಹುದು ಎಂದು ಉಡುಪಿಯ ಕುಂದಾಪುರ ಠಾಣೆಯಲ್ಲಿ ಚೈತ್ರಾ ತಂದೆ ಬಾಲಕೃಷ್ಣ ದೂರು ದಾಖಲು ಮಾಡಿದ್ದಾರೆ.
‘ಚೈತ್ರಾ ಅವರು ಗೆಳೆಯರ ಜೊತೆ ಮನೆಗೆ ಬಂದು ದೊಡ್ಡ ಮಟ್ಟದ ದುಡ್ಡಿನ ವ್ಯವಹಾರ ಮಾಡುತ್ತಿದ್ದರು. ಒಂದು ದಿನ ರಾತ್ರಿ ಕೋಟ್ಯಂತರ ರೂಪಾಯಿ ತಂದು ಎಣಿಸಿದ್ದನ್ನು ಕಂಡು ನಾನು ಭಯಗೊಡೆ. ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಅವರು ದಬಾಯಿಸಿದರು. ಹೀಗಾಗಿ, ನಾನು ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದೆ. ಇದು ಗೋವಿಂದ ಪೂಜಾರಿ ಹಣ ಎಂಬ ವಿಚಾರ ನನಗೆ ಆ ಬಳಿಕ ತಿಳಿಯಿತು. ಈ ವಿಚಾರವನ್ನು ನಾನು ಎಲ್ಲಾದರೂ ಹೇಳಬಹುದು ಎಂಬ ಕಾರಣಕ್ಕೆ ನನ್ನ ಹೆಂಡತಿ ರೋಹಿಣಿ ಹಾಗೂ ನನ್ನ ಮಗಳಾದ ಚೈತ್ರ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
‘ನನ್ನ ಮಗಳು ಆಕೆಯ ಸ್ನೇಹಿತನಾದ ಶ್ರೀಕಾಂತ್ ಅವರನ್ನು ಮದುವೆಯಾಗಲು ನಿರ್ಧರಿಸಿದ ವಿಷಯ ತಿಳಿಯಿತು. ಆಗ ನಾನು ಅವಳ ಬಳಿ ಆತನನ್ನು ಮದುವೆ ಆಗುವುದು ಸರಿಯಲ್ಲ, ಆತ ಸರಿಯಿಲ್ಲ ಎಂದು ಹೇಳಿದೆ. ನನ್ನ ಮಗಳು ಚೈತ್ರಾ ನನ್ನ ಬಳಿ ಒಂದು ವೇಳೆ ಆತನನ್ನು ಬಿಟ್ಟು ಬೇರೆ ಹುಡುಗನನ್ನು ಮದುವೆಯಾಗುವುದಾದರೆ ನನಗೆ 5 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದಳು. ಇದರಲ್ಲಿ ನನ್ನ ಪತ್ನಿ ರೋಹಿಣಿ ಕೂಡ ಶಾಮೀಲಿದ್ದಾಳೆ’ ಎಂದು ದೂರಿದ್ದಾರೆ.
‘ಮದುವೆಗೆ ಬರದೇ ಹೋದರೆ ಭೂಗತ ದೊರೆಗಳ ಮೂಲಕ ಕೊಲೆಗೈಯ್ಯುವ ಬೆದರಿಕೆ ಹಾಕಿದ್ದಾಳೆ. ಆಸ್ತಿಗಾಗಿ ಯಾವ ಹೇಯ ಕೃತ್ಯವನ್ನು ಎಸಗಲು ಅವಳು ಸಿದ್ಧಳಿದ್ದಾಳೆ. ನಾನು ಸತ್ತು ಹೋಗಿದ್ದೇನೆ ಎಂದು ಹೇಳಿಕೊಂಡು ಬರುತ್ತಿದ್ದಾಳೆ. ನನಗೆ ರಕ್ಷಣೆ ನೀಡಿ’ ಎಂದು ಬಾಲಕೃಷ್ಣ ಕೋರಿದ್ದಾರೆ.
Comments are closed.