Belthangady : ‘ಗ್ರಾಮದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಇದ್ದೇವೆ, ಬಂದು ವಿಷ ಬೀಜ ಬಿತ್ತಿದ್ದು ಶಾಸಕ ಹರೀಶ್ ಪೂಂಜ’ – ತೆಕ್ಕಾರು ಗ್ರಾಮಸ್ಥರ ಆಕ್ರೋಶ

Belthangady : ಶನಿವಾರ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಕರಾವಳಿಯಾದ್ಯಂತ ಬಾರಿ ಚರ್ಚೆಯಾಗುತ್ತಿದೆ. ಈ ಕುರಿತಾಗಿ ಹರೀಶ್ ಪೂಂಜ ಅವರ ಮೇಲೆ ಪ್ರಕರಣ ಕೂಡ ದಾಖಲಾಗಿದೆ. ಈ ಬೆನ್ನಲ್ಲೇ ತಿಕ್ಕಾರು ಗ್ರಾಮಸ್ಥರು ಹರೀಶ್ ಪೂಂಜ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ತೆಕ್ಕಾರು ಗ್ರಾಮಸ್ಥರು ಹರೀಶ್ ಪೂಂಜ ಅವರ ಹೇಳಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿ, ಗ್ರಾಮದಲ್ಲಿ ನಾವೆಲ್ಲರೂ ಸೌಹಾರ್ದತೆಯಿಂದ ಇದ್ದೇವೆ. ಬ್ರಹ್ಮಕಲಶೋತ್ಸವವನ್ನು ಎಲ್ಲಾ ಸಮುದಾಯದವರು ಸೇರಿ ಆಯೋಜಿಸಿದ್ದೇವೆ. ಮುಸ್ಲಿಂ ಸಮುದಾಯದವರು ನಮಗೆ ಬೆನ್ನೆಲುಬಾಗಿ ನಿಂತು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ದೇವಸ್ಥಾನದ ಕಾರ್ಯಕ್ರಮಕ್ಕೆ ಬರುವವರೆಗೆ ಪಾರ್ಕಿಂಗ್ ವ್ಯವಸ್ಥೆ, ಸ್ಟೇಜ್ ಹಾಕಲು ಜಾಗದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟವರೆ ಮುಸ್ಲಿಮರು. ಅವರ ತರಕಾರಿ ಬೆಳೆಯುವ ಜಾಗವನ್ನು ಈ ಬಾರಿ ದೇವಸ್ಥಾನಕ್ಕಾಗಿ ಬಿಟ್ಟು ಕೊಟ್ಟಿದ್ದಾರೆ. ಆದರೆ ಹರೀಶ್ ಪೂಂಜಾ ಅವರು ಬಂದು ಕೆಲವೇ ಕ್ಷಣಗಳಲ್ಲಿ ನಮ್ಮೆಲ್ಲರ ನಡುವೆ ಬಿರುಕು ಮೂಡಿಸಿದ್ದಾರೆ. ವಿಷ ಬೀಜ ಬಿತ್ತಿ ಹೋಗಿದ್ದಾರೆ. ಶಾಸಕರು ತೆಕ್ಕಾರು ಪರಿಸರದ ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಶಾಸಕರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ನಾವೆಲ್ಲರೂ ಒಟ್ಟಾಗಿ ನಿಂತು ಬಹಳ ಚಂದವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಎಲ್ಲರೂ ಕೂಡ ಕುಟುಂಬದ ರೀತಿ ಒಂದಾಗಿ ಸಂತೋಷ ಪಡುತ್ತಿದ್ದೆವು. ಭಾಷಣ ಮಾಡಲು ಬಂದ ಹರೀಶ್ ಪೂಂಜ ಅವರು ಇದೀಗ ಎಲ್ಲರಿಗೂ ನೋವುಂಟು ಮಾಡುವಂತಹ ಹೇಳಿಕೆ ನೀಡಿ ಸೌಹಾರ್ದತೆಯನ್ನು ಕದಾಡುವ ಪ್ರಯತ್ನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಮುಸ್ಲಿಂ ಮುಖಂಡರು ಮಾತನಾಡಿ ನಾವೆಲ್ಲರೂ ಒಟ್ಟಾಗಿ ಬ್ರಹ್ಮಕಲಶೋತ್ಸವಕ್ಕಾಗಿ ಕೆಲಸ ಮಾಡಿದ್ದೇವೆ. ಮೊದಲಿನಿಂದಲೂ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಇಲ್ಲಿ ಬದುಕುತ್ತಿದ್ದೇವೆ. ಯಾರೋ ಬಂದು ಭಾಷಣ ಮಾಡಿ ನಮ್ಮನ್ನು ಹಾಳು ಮಾಡಲು ಯತ್ನಿಸಿದರೆ ನಾವು ಬದಲಾಗುವುದಿಲ್ಲ. ಮುಂದೆಯೂ ಕೂಡ ನಾವು ನಮ್ಮ ಊರಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತೇವೆ ಎಂದು ಹೇಳಿದ್ದಾರೆ
ಹರೀಶ್ ಪೂಂಜ ಹೇಳಿದ್ದೇನು?
ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ಹರೀಶ್ ಪೂಂಜಾ ದೇವಾಲಯದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮುಸ್ಲಿಂ ಮಸೀದಿಗಳಿಗೆ ಏಕೆ ನೀಡಿದ್ದೀರಿ? ನಮಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ನೀವು ಮುಸ್ಲಿಮರಿಗೆ ಆಹ್ವಾನ ಪತ್ರಿಕೆ ನೀಡಿದ್ದರಿಂದಲೇ ಅವರು ಟ್ಯೂಬ್ಲೈಟ್ ಒಡೆದಿದ್ದಾರೆ” ಎಂದಿದ್ದರು
Comments are closed.