CM Siddaramaiah: ಸಿದ್ದರಾಮಯ್ಯ ಭಾಷಣ ವೇಳೆ ಬಿಜೆಪಿ ಕಾರ್ಯಕರ್ತೆಯರಿಂದ ಪ್ರತಿಭಟನೆ; ಬಿಜೆಪಿ-RSS ಗೊಡ್ಡು ಬೆದರಿಕೆಗೆ ಜಗ್ಗಲ್ಲ-ಬಗ್ಗಲ್ಲ-ಸಿಎಂ ಗುಡುಗು

CM Siddaramaiah: ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಕೇಂದ್ರ ಸರಕಾರದ ಬೆಲೆ ಏರಿಕೆ ಖಂಡನೆ ಮಾಡಿ ಕಾಂಗ್ರೆಸ್ ಸರಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವಾಗ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪು ಪಟ್ಟಿ ಪ್ರದರ್ಶಿಸಿ, ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ವೇದಿಕೆ ನುಗ್ಗಲು ಪ್ರಯತ್ನ ಪಟ್ಟ ಘಟನೆ ನಡೆದಿದೆ. ಅಲ್ಲದೇ ಸಿದ್ದರಾಮಯ್ಯ ಗೋ ಬ್ಯಾಕ್ ಪಾಕಿಸ್ತಾನ್ ಎಂದು ಘೋಷಣೆ ಕೂಗುತ್ತ ಕಾರ್ಯಕ್ರಮದ ಕಡೆಗೆ ಬಂದಾಗ ಆತಂಕದ ವಾತಾವರಣ ನಿರ್ಮಾಣವಾಯಿತು.
ಪೊಲೀಸರು ಕೂಡಲೇ ಐವರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡರು.
ಸಿಎಂ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ನಂತರ ತಮ್ಮ ಭಾಷಣದಲ್ಲಿ ಇಂತಹ ಬಿಜೆಪಿಯ ಪ್ರತಿಭಟನೆ, ಅಪಪ್ರಚಾರಕ್ಕೆ ನಾವು ಹೆದರುವುದಿಲ್ಲ. ನಾವು ಬಿಜೆಪಿ ಆರ್ಎಸ್ಎಸ್ ಗೊಡ್ಡು ಬೆದರಿಕೆಗೆ ಜಗ್ಗಲ್ಲ-ಬಗ್ಗಲ್ಲ. ನಿಮ್ಮನ್ನೆಲ್ಲ ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗಿದೆ, ನಮ್ಮ ಕಾರ್ಯಕರ್ತರಿಗೂ ಇದೆ ಎಂದು ತಿರುಗೇಟು ನೀಡಿದರು. ಕೂಡಲೇ ವೇದಿಕೆಯಲ್ಲಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಹೋಗುವಷ್ಟರಲ್ಲಿ, ಮಹಿಳಾ ಕಾರ್ಯಕರ್ತೆಯರನ್ನು ವಾಹನದಲ್ಲಿ ಕರೆದೊಯ್ಯಲಾಗಿತ್ತು.
ಸಚಿವೆ ಹೆಬ್ಬಾಳ್ಕರ್ ಕೂಡಾ ಡಿಸಿಪಿ ರೋಹನ್ ಜಗದೀಶ ಸೇರಿ ಇತರ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
Comments are closed.