ಭೂಮಿಯನ್ನು ಮಾತೆ ಎಂದು ಭಕ್ತಿಯಿಂದ ಆರಾಧಿಸುವ ಹಬ್ಬ ಕೆಡ್ಡಸ

“ಕೆಡ್ಡಸ” ತುಳುನಾಡಿನಲ್ಲಿ ಆಚರಿಸುವ ಹಬ್ಬ. ಇದೊಂದು “ಮಾತೃ ಭೂಮಿಯನ್ನು ಪೂಜಿಸುವ ಉತ್ಸವ”ವಾಗಿದ್ದು ದಕ್ಷಿಣ ಭಾರತದ ತುಳುನಾಡಿನ ಪ್ರದೇಶದಲ್ಲಿ ಭೂಮಿ ಪೂಜೆಯೆಂದೇ ಜನಪ್ರಿಯವಾಗಿದೆ. ಇದು ತುಳು ತಿಂಗಳ ಪೋನಿ (ಗ್ರೆಗೋರಿಯನ್ ತಿಂಗಳು ಫೆಬ್ರುವರಿ) ನ ಮುಕ್ತಾಯದ ದಿನಗಳಲ್ಲಿ ಆಚರಿಸಲಾಗುವ ಪ್ರಮುಖ ಮೂರು ದಿನಗಳ ಉತ್ಸವವಾಗಿದೆ. ಈ ಹಬ್ಬವು ಆ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಪ್ರಕೃತಿಯ ಅರಿವು ಮೂಡಿಸುತ್ತದೆ. ಕೆಡ್ಡಸ ಎಂಬ ಪದ ಅರ್ಥ ಕೇಟ. ಎಂದರೆ ಬೇಟೆ ಎಂಬ ಅರ್ಥವನ್ನು ನೀಡುತ್ತದೆ.
ಕೆಡ್ಡಸ ಆಚರಣೆ :
ಫೆಬ್ರವರಿಯಲ್ಲಿ ಸಾಮಾನ್ಯವಾಗಿ ಕೆಡ್ಡಸವು ಬರುತ್ತದೆ ಮತ್ತು ಇದರಲ್ಲಿ ಮೂರು ವಿಧ ಇದ್ದು, ಕೆಡ್ಡಸ, ನಡು ಕೆಡ್ಡಸ, ಕಡೆ ಕೆಡ್ಡಸ ಎಂದು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.
ಕಡೆ ಕೆಡ್ಡಸದ ಸಮಯದಲ್ಲಿ ಕುಟುಂಬದ ಓರ್ವ ವಯಸ್ಸಾದ ಮಹಿಳೆ ಈ ಆಚರಣೆಗಳನ್ನು ನಿರ್ವಹಿಸುತ್ತಾಳೆ. ಈ ದಿನದಂದು ‘ಸಾರ್ನಡ್ಡೆ’ (ತುಳುನಾಡಿನ ಖಾದ್ಯ) ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತುಳಸಿ ಕಟ್ಟೆಯ ಮುಂದೆ ಇಡಲಾಗುತ್ತದೆ. ಮುಂಜಾನೆ ಅವಳು ಎಚ್ಚರಗೊಂಡು ತುಳಸಿ ಕಟ್ಟೆಯ ಸುತ್ತ ಹಸುವಿನ ಸಗಣಿ (ಅಂಬಿ ತುಳುವಿನಲ್ಲಿ) ಯನ್ನು ಸಾರಿಸಿ ಸುತ್ತಲು ದೀಪ ಬೆಳಗಲಾಗುತ್ತದೆ. ಇದರ ಜೊತೆಯಲ್ಲಿ ಕುಂಕುಮ, ಸೀಗೆ ಕಾಯಿಯನ್ನು ಕಟ್ಟೆಯ ಮುಂದೆ ಬಾಳೆ ಎಲೆಯಲ್ಲಿ ಬಡಿಸುತ್ತಾರೆ. ನಂತರ ಆಕೆ ತೆಂಗಿನ ಎಣ್ಣೆಯನ್ನು ಮಣ್ಣಿಗೆ ಸುರಿಯುತ್ತಾಳೆ (ಇದು ಭೂಮಿತಾಯಿಗೆ ಮಾಡುವ ಅಭಿಷೇಕ ಎಂಬ ನಂಬಿಕೆ). ನಂತರ ಅವಳು ಸ್ನಾನ ಮಾಡಿ ಬರುತ್ತಾಳೆ.
ವಿಧಿವಿಧಾನ :
ತುಳುನಾಡಿನಲ್ಲಿ ವಾರ್ಷಿಕಾವರ್ತನದಲ್ಲಿ ಆಚರಣೆಯಾಗುವ ಒಂದು ಹಬ್ಬ. ಕೃಷಿ ಸಂಬಂಧಿಯಾಗಿ ಇದರ ಆಚರಣೆಯಾಗುತ್ತದೆ. ಸಮೃದ್ಧಿ ಮತ್ತು ಫಲಾಪೇಕ್ಷೆಯ ಆಶಯದಿಂದ ಇದು ಆಚರಣೆಯಾಗುತ್ತದೆ. ಕೆಡ್ಡಸ ಆಚರಣೆಯನ್ನು ಭೂಮಿ ತಾಯಿಯ ಮಿಯಾದ ಹಬ್ಬವೆಂದು ಕರೆದು ಭೂಮಿಯನ್ನು ಸಾಮಾನ್ಯ ಸ್ತ್ರೀಯೆಂಬಂತೆ ನಾವು ಪರಿಭಾವಿಸಿದ್ದೇವೆ. ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಪರಿಭಾವಿಸಿ, ಆ ನಂಬಿಕೆಯ ಪ್ರಕಾರ ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ.
ಕೆಡ್ಡಸ ಆಚರಣೆಯ ಎರಡನೇ ದಿನವನ್ನು ‘ನಡುಕೆಡ್ಡಸ’ ವೆಂದು ಕರೆದು ಆ ದಿನ ‘ಕೆಡ್ಡಸ’ ದ ಬೇಟೆಯನ್ನು ನಡೆಸುತ್ತೇವೆ. ಕೆಡ್ಡಸಾಚರಣೆಯಲ್ಲಿ ಮಾಂಸದೂಟವ ಮಾಡಲೇ ಬೇಕೆಂಬ ನಂಬಿಕೆಯೂ ಇದೆ. ಕೆಡ್ಡಸದ ಮೂರು ದಿನ ಕೊಡಲಿ ಏಟು, ಹಾರೆ, ಪಿಕ್ಕಾಸಿಗಳಲ್ಲಿ ಅಗೆಯುವಂತಿಲ್ಲ. ಮನೆಯ ಆವರಣವನ್ನು ಸ್ವಚ್ಛ ಮಾಡಿ ೭ ಬಗೆಯ ಧಾನ್ಯಗಳನ್ನು ಬೆರೆಸಿ ಬೂತಾಯಿಗೆ ಬಾಳೆಲೆಯಲ್ಲಿ ಇಡುವುದು ಕ್ರಮ. ಭೂದೇವಿಗೆ ವಸ್ತ್ರ, ಗೆಜ್ಜೆ, ಕತ್ತಿ, ಕಲಶ, ಅರಶಿನ, ಕುಂಕುಮ ಇತ್ಯಾದಿಯನ್ನು ಇಡುವುದು ವಾಡಿಕೆ.
ಕೆಡ್ಡಸ ಬೇಟೆ :
ಈ ಕೆಡ್ಡಸ ಆಚರಣೆ ಸಂದರ್ಭದಲ್ಲಿ ಕಾಡುಪ್ರಾಣಿಗಳಿಗೆ ಕಾಲು ಒಡೆಯುವ ರೋಗ ಬರುತ್ತದೆ ಎಂದು ಜನ ನಂಬುತ್ತಾರೆ. ಈ ಅರ್ಥದಲ್ಲಿ ಬೇಟೆ ಕೆಡ್ದಸ ಆಚರಣೆಯ ಉಪಾಂಗವಾಗಿ ಜರಗುತ್ತದೆ. ಋತುಮಾನದ ವ್ಯತ್ಯಾಸವಾಗಿ ಮೃಗಗಳಿಗೆ ಕಾಲುರೋಗ ಸಂಭವನೀಯವಾದರೂ, ಅದಕ್ಕಿಂತ ಮುಖ್ಯವಾಗಿ ತಮ್ಮ ಬೆಳೆಗೆ ತೊಂದರೆಯನ್ನುಂಟು ಮಾಡುವ ಪ್ರಾಣಿಗಳ ಬೇಟೆ ಮಾಡಲು ಅವಕಾಶವಾಗುತ್ತದೆ. ನಡು ಕೆಡ್ಡಸದ ದಿನ ಪೂರ್ವ ನಿರ್ಧರಿತದಂತೆ ಊರ ಜನ ಒಂದೆಡೆ ಸೇರುತ್ತಾರೆ. ಕಲ್ಲೊಂದನ್ನು ನೆಟ್ಟು -ಹಣ್ಣು -ತೆಂಗಿನಕಾಯಿ ಕಾಡು ಹೂಗಳನ್ನಿಟ್ಟು -ಕಾಡು ದೈವವನ್ನು ನೆನೆದು ಪ್ರಾರ್ಥಿಸುತ್ತಾರೆ. ಈಡೊಂದನ್ನು ಸಿಡಿಸುತ್ತಾರೆ. ಅರಣ್ಯ ಸೇರಿ ಗಡಿಭಾಗಗಳೆಲ್ಲಾ ಕೋವಿ-ಆಯುಧ ಹಿಡಿದವರು ನಿಲ್ಲುತ್ತಾರೆ. ಉಳಿದವರು ಕಾಡೊಳಗೆ ಬೊಬ್ಬೆ ಹಾಕುತ್ತಾ ಪ್ರಾಣಿಗಳನ್ನು ಓಡಿಸುತ್ತಾರೆ. ಬೇಟೆಯಾದರೆ ಆರಂಭದಲ್ಲಿ ಸೇರಿದಲ್ಲಿಗೆ ಮರಳಿ ಬರುತ್ತಾರೆ. ಬೇಟೆಯಾದ ಪ್ರಾಣಿಗಳನ್ನು ಬೇಟೆ ಮಾಡಿದವರಿಗೆ ನಿಯಮದಂತೆ, ‘ಅಜಕಲು ಮಾಡಿ’ ಮಾಂಸವನ್ನು ಹಂಚಿ ಉಳಿದ ಹೆಚ್ಚುವರಿ ಮಾಂಸವನ್ನು ಸೇರಿದ ಉಳಿದವರಿಗೆ ಸಮಾನವಾಗಿ ಹಂಚ್ಚುತ್ತಾರೆ. ಒಂದಷ್ಟು ಮಾಂಸವನ್ನು ಅಲ್ಲಿಯೇ ಅಡುಗೆ ಮಾಡಿ ಕಾಡ ದೈವಕ್ಕೆ ಬಡಿಸಿ ಬಳಿಕ ಪ್ರಸಾದವಾಗಿ ಸೇವಿಸುತ್ತಾರೆ. ಕೆಡ್ಡಸ ಆಚರಣೆಯಲ್ಲಿ ‘ಮಾಂಸದೂಟ’ ಮಾಡದಿದ್ದರೆ ‘ದೇಹದ ಎಲುಬು’ ನುಚ್ಚು ನೂರಾಗುತ್ತದೆ ಎಂಬ ನಂಬಿಕೆ ಇದೆ. ಅದಕ್ಕನುಗುಣವಾಗಿ ಬೇಟೆಯನ್ನು ಮಾಂಸದಡುಗೆಗೆ ಪೂರಕವಾಗಿಸುವ ಆಶಯ ಹೊಂದಿಸಿಕೊಳ್ಳಲಾಗಿದೆ. ಬೇಟೆಯಲ್ಲಿ ಬೇಟೆಯಾಗದಿದ್ದರೆ ಬದನೆ-ನುಗ್ಗೆ ಕಾಯಿಯನ್ನಾದರೂ ಅಡುಗೆ ಮಾಡಲೇಬೇಕೆಂಬ ನಂಬಿಕೆಯನ್ನು ಕೆಡ್ಡಸ ಆಚರಣೆ ಹಿನ್ನಲೆಯಲ್ಲಿ ರೂಪಿಸಲಾಗಿದೆ. ಭೂಮಿತಾಯಿಯು ಸೀಗೆಕಾಯಿಯಲ್ಲಿ ಸ್ನಾನಮಾಡುವಳೆಂಬ ನಂಬಿಕೆಯ ಮೇರೆಗೆ ಸೀಗೆಕಾಯಿಯನ್ನು ಇಡಲಾಗುತ್ತದೆ. ಸ್ನಾನದ ನಂತರ ಹಣೆಗೆ ಕುಂಕುಮ ಇಟ್ಟು ಕಟ್ಟೆಯ ಮುಂದೆ ಇರಿಸಲಾದ ಖಾದ್ಯ(ಸಾರ್ನಡ್ಡೆ)ಯನ್ನು ಸೇವಿಸುತ್ತಾಳೆ.
ಉದ್ದೇಶ :
ಮಾನವ ಬದುಕಿಗೂ ಬೇಟೆಗೂ ಅನ್ಯೋನ್ಯ ಸಂಬಂಧವಿದೆ. ಆದಿಮೂಲದಲ್ಲಿ ಮಾನವನಿಗೆ ಬೇಟೆಯೇ ಆಹಾರದ ಮೂಲವಾಗಿತ್ತು. ಸಮುದಾಯ ಕಾಡನ್ನು ಆಂಶಿಕವಾಗಿ ಕೃಷಿಗೆ ಪೂರಕವಾಗಿ ಬಳಸಿಕೊಂಡಿದೆ. ಕೃಷಿ ಸಂಸ್ಕೃತಿಗೆ ಮಾನವ ವರ್ಗಾವಣೆ ಮಾಡುವುದರ ಮೂಲಕ ಬೇಟೆ ಅವನಿಗೆ ರಕ್ಷಣೆಯ ನೆಪವಾಯಿತು. ಪ್ರಾಣಿಗಳ ಕ್ರೌರ್ಯ ಮೂಲ ಪ್ರವೃತ್ತಿ ಮಾನವ ಭಯಕ್ಕೆ ಕಾರಣವಾಗಿ ಅದು ಕೂಡ ಬೇಟೆಗೆ ಹೇತುವಾಯಿತು. ಮೂಲದ ಪೃವೃತ್ತಿಯಾಗಿ ಬೇಟೆ ಕ್ರಮೇಣ ಅರಸುಗಳ ವಿನೋದದ ಅಂಗವಾಗಿ ರೂಢಿಯಲ್ಲಿತ್ತು .
ಕೆಡ್ಡಸದ ಕರೆಯೋಲೆ :
ಕರಾವಳಿಯ ನಲಿಕೆ ಜನಾಂಗದವರು ಮನೆಮನೆ ಬಂದು ಕರೆ ಕಳಿಸುತ್ತಾರೆ ಅದು ಹೀಗೆ ಇದೆ. ಸೋಮವಾರ ಕೆಡ್ಡಸ, ಮುಟ್ಟುನೆ ಅಂಗಾರ ನಡು ಕೆಡ್ಡಸ ಬುಧವಾರ ಬಿರಿಪುನೆಪಜಿ ಕಡ್ಪರೆ ಬಲ್ಲಿ ಉನುಂಗೆಲ್ ಪೊಲಿಪ್ಯರೆ ಬಲ್ಲಿ, ಅರಸುಲೆ ಬೋಟೆಂಗ್ಸರ್ವೆರ್ ಉಲ್ಲಾಯನಕುಲು ಪೋವೋಡುಗೆ. ವಲಸಾರಿ ಮಜಲ್ಡ್ ಕೂಡ್ದುವಲಸರಿ ದೇರ್ದ್ದ್ ಪಾಲೆಜ್ಜಾರ್ ಜಪ್ಪುನಗ ಉಳ್ಳಾಲ್ದಿನಕುಲು ಕಡಿಪಿ ಕಂಜಿನ್ ನೀರ್ಡ್ ಪಾಡೋದು. ಓಡುಡ್ ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು. ಮಲ್ಲ ಮಲ್ಲ ಮೃರ್ಗೊಲು ಜತ್ತ್ದ್ ಬರ್ಪ. ಕಟ್ಟ ಇಜ್ಜಾಂದಿ ಬೆಡಿ, ಕದಿ ಕಟ್ಟಂದಿನ ಪಗರಿ, ಕೈಲ ಕಡೆಲ ಪತ್ತ್ದ್ಉಜ್ಜೆರ್ಗೊಂಜಿ ಎರ್ಪು ಏರ್ಪಾದ್ಇಲ್ಲ ಬೇತ್ತಡಿತ್ ಉಂತೊಂದು ಮುರ್ಗೊಲೆಗ್ ತಾಂಟಾವೊಡು. ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು.ಎಂಕ್ ಅಯಿತ ಕೆಬಿ, ಕಾರ್, ಕೈ,ಉಪ್ಪು, ಮುಂಚಿ, ಪುಳಿ ಕೊರೊಡು
ವಿಶೇಷ ಆಹಾರ :
ಕುಡು ಅರಿ (ನನ್ಯೆರಿ) ಕೆಡ್ಡಸ ಸಮಯದಲ್ಲಿ ಕುಡು ಅರಿ (ಹುರುಳಿ, ಹೆಸರು ಕಾಳು, ಒಣಗಿದ ತೆಂಗಿನಕಾಯಿ, ಕುಚ್ಚುಲಕ್ಕಿ ಅಕ್ಕಿ, ಬೆಲ್ಲ ಮತ್ತು ಕಡಲೆಕಾಯಿಗಳ ಮಿಶ್ರಣವನ್ನು ಎಲ್ಲರಿಗೂ ಹಂಚಲಾಗುವುದು. ಏಕೆಂದರೆ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ಬಹಳಷ್ಟು ಪೌಷ್ಟಿಕಾಂಶಗಳನ್ನು ಮತ್ತು ಎಣ್ಣೆ ಅಂಶಗಳನ್ನು ಇದು ಒದಗಿಸುತ್ತದೆ. ಈ ಮಿಶ್ರಣವು ದೇಹವು ಚಟುವಟಿಕೆಯಿಂದಿರಲು ಸಹಾಯವಾಗುತ್ತದೆ.
ದೈವಗಳು :
ಕೋಟಿ-ಚೆನ್ನಯ, ಮುಗೇರ್ಲು, ಉಳ್ಳಾಕುಲು ಈ ದೈವಗಳನ್ನು ಮನಸಾರೆ ನೆನೆದುಕೊಂಡು ಆಚರಿಸಲಾಗುತ್ತದೆ.
ಬರಹ- ಜನಾರ್ಧನ ಜಿ ಜಯನಗರ, ಸುಳ್ಯ
Comments are closed.