Child death: ಕಿವಿ ಚುಚ್ಚಲು ಅನಸ್ತೇಷಿಯಾ ನೀಡಿದ ಡಾಕ್ಟರ್; 6 ತಿಂಗಳ ಮಗು ಮೃತ್ಯು!

Child death: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಕಿವಿ ಚುಚ್ಚುವ ಸಲುವಾಗಿ, ವೈದ್ಯರು ಅನಸ್ತೇಷಿಯಾ ಚುಚ್ಚುಮದ್ದು ನೀಡಿದ ಪರಿಣಾಮ, ಆರು ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಇದೀಗ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ (Child death) ಎಂದು ಪೋಷಕರು ದೂರಿದ್ದಾರೆ.
ಹೌದು, ಶೆಟ್ಟಹಳ್ಳಿ ಗ್ರಾಮದ ಆನಂದ್-ಶುಭ ದಂಪತಿಯವರ 6 ತಿಂಗಳ ಗಂಡು ಮಗುವಿಗೆ ಕಿವಿ ಚುಚ್ಚಿಸಲು, ತಾಯಿ ಶುಭ ಮಗುವನ್ನು ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯ ಡಾ. ನಾಗರಾಜು, ಮಗುವಿನ ಎರಡು ಕಿವಿಗಳಿಗೂ ಅನಸ್ತೇಷಿಯಾ ಚುಚ್ಚುಮದ್ದು ನೀಡಿದ್ದರು. ಆದರೆ, ಅದು ಓವರ್ ಡೋಸ್ ಆಗಿದ್ದು, ಮಗುವಿನ ಬಾಯಿಯಲ್ಲಿ ನೊರೆ ಬಂದಿದೆ. ಅಲ್ಲಿಂದ ನೇರವಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ದಿರಿ ಎಂದು ಸೂಚನೆ ನೀಡಿದರು. ಆದರೆ ಬೊಮ್ಮಲಾಪುರ ಆರೋಗ್ಯ ಕೇಂದ್ರದಲ್ಲಿಯೇ ವೈದ್ಯರ ಎಡವಟ್ಟಿನಿಂದ ಮಗು ಅಸುನೀಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಿವಿ ಚುಚ್ಚಲು ಅನುಸರಿಸಬೇಕಾಗಿದ್ದ ಮುಂಜಾಗ್ರತಾ ಕ್ರಮಗಳನ್ನು ಸರಿಯಾಗಿ ಪಾಲಿಸದೇ ಎರಡೂ ಕಿವಿಗೆ ಅನಸ್ತೇಷಿಯಾ ನೀಡಿದ್ದು, ಅಲ್ಲದೇ, ಚಿಕಿತ್ಸೆ ನೀಡಲು ವೈದ್ಯರು ಹಣ ಪಡೆದುಕೊಂಡಿದ್ದಾರೆ. ಇವರ ನಿರ್ಲಕ್ಷ್ಯಕ್ಕೆ ಹಸುಗೂಸು ಸಾವನ್ನಪ್ಪಿದೆ. ಆದ್ದರಿಂದ ವೈದ್ಯರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
Comments are closed.