Mangalore: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಸ್ಥಳ ಮಹಜರು ವೇಳೆ ಎಸ್ಕೇಪ್ ಯತ್ನ; ಆರೋಪಿಯ ಕಾಲಿಗೆ ಗುಂಡೇಟು

Mangalore: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಮಂಗಳೂರು ಪೊಲೀಸರು ಸ್ಥಳ ಮಹಜರು ನಡೆಸುವುದಕ್ಕೆಂದು ಉಳ್ಳಾಲಕ್ಕೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಎಸ್ಕೇಪ್ ಆಗಲು ಯತ್ನಿಸಿದ ಕಣ್ಣನ್ ಮಣಿ (35) ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಸ್ಥಳ ಮಹಜರು ಮಾಡುವ ಸಲುವಾಗಿ ಮಣಿಯನ್ನು ಮಂಗಳೂರು ಸಿಸಿಬಿ ಮತ್ತು ಉಳ್ಳಾಲ ಪೊಲೀಸರು ತಲಪಾಡಿಯ ಕೆಸಿ ರೋಡ್ ಅಲಂಕಾರ ಗುಡ್ಡೆಗೆ ಕರೆದುಕೊಂಡು ಬಂದಿದ್ದರು. ಆದರೆ ಆರೋಪಿ ಜೀಪಿನಿಂದ ಇಳಿಯುವಾಗ ಪೊಲೀಸರಿಗೆ ಹಲ್ಲೆ ಮಾಡಿ, ಪರಾರಿಗೆ ಯತ್ನ ಮಾಡಿದ್ದ. ಅಲ್ಲೇ ಸ್ಥಳದಲ್ಲಿ ಇದ್ದ ಬಿಯರ್ ಬಾಟಲಿಯ ಚೂರಿಯಿಂದ ಹಲ್ಲೆಗೆ ಯತ್ನ ಮಾಡಿದ್ದು, ಸಿಸಿಬಿ ಇನ್ಸ್ಪೆಕ್ಟರ್ ಈ ಸಂದರ್ಭದಲ್ಲಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆರೋಪಿ ಕಣ್ಣನ್ ಮಣಿ ಮೂಲತಃ ತಮಿಳುನಾಡು ನಿವಾಸಿ. ಆದರೆ ಮುಂಬೈ ನಗರದ ಚೆಂಬೂರಿನಲ್ಲಿ ವಾಸವಿದ್ದ. ಈತ ಧಾರಾವಿ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದ.
ಈ ಘಟನೆಯಲ್ಲಿ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ, ಪೇದೆಗಳಾದ ನಿತಿನ್, ಅಂಜಿನಪ್ಪ ಅವರಿಗೆ ಗಾಯವಾಗಿದ್ದು ಇವರ ಜೊತೆಗೆ ಆರೋಪಿ ಕಣ್ಣನ್ ಮಣಿಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ದರೋಡೆ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧನ ಮಾಡಿದ್ದು, ಸ್ಥಳ ಮಹಜರಿಗೆಂದು ಒಬ್ಬನನ್ನು ಮಾತ್ರ ಕರೆದೊಯ್ಯಲಾಗಿತ್ತು. ಇವರನ್ನು ತಮಿಳುನಾಡಿನ ಸ್ಥಳೀಯ ಕೋರ್ಟಿನಲ್ಲಿ ಹಾಜರುಪಡಿಸಿ ಮಂಗಳೂರಿಗೆ ಕರೆತರಲಾಗಿತ್ತು.
ಫೈರಿಂಗ್ ಘಟನೆ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.