Leelavati Degula: ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ನಟಿ ಲೀಲಾವತಿ ಸ್ಮಾರಕಕ್ಕೆ ಗಂಡಾಂತರ? ‘ಲೀಲಾವತಿ ದೇಗುಲ’ ಈಗ ಬೇರೆಡೆಗೆ ಸ್ಥಳಾಂತರ ?

Leelavati Degula: ಕನ್ನಡದ ನಟ ವಿನೋದ್ ರಾಜ್(Vinod Raj)ಅವರು ತಮ್ಮನ್ನು ಅಗಲಿರುವ ತಾಯಿ ಲೀಲಾವತಿಗಾಗಿ ಭವ್ಯವಾದ ಸ್ಮಾರಕವೊಂದನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಲೀಲಾವತಿ ದೇಗುಲವೆಂದು(Leelavati Degula)ನಾಮಕರಣ ಮಾಡಿದ್ದಾರೆ ಕೆಲವು ದಿನಗಳ ಹಿಂದಷ್ಟೇ ಈ ಸ್ಮಾರಕದ ಉದ್ಘಾಟನೆ ಮಾಡಿದ್ದಾರೆ. ಆದರೆ ಇದೀಗ ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಈ ಲೀಲಾವತಿ ದೊಡ್ಡ ಗಂಡಾಂತರವೊಂದು ಎದುರಾಗಲಿದೆ ಎಂಬ ಸುದ್ದಿ ಒಂದು ಕೇಳಿ ಬರುತ್ತಿದೆ.

 

ಹೌದು, ಕನ್ನಡ ಚಿತ್ರರಂಗದ ವರನಟಿ ಡಾ. ಲೀಲಾವತಿ(Leelavati) ಅಗಲಿ ಒಂದು ವರ್ಷವಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ 8 ಕ್ಕೆ ಹಿರಿಯ ನಟಿ ಲೀಲಾವತಿ ದೇಹತ್ಯಾಗ ಮಾಡಿದ್ದರು. ಸದಾ ಅಮ್ಮನ ಜೊತೆಯೇ ಇರುತ್ತಿದ್ದ ವಿನೋದ್ ರಾಜ್ ಅವರ ನೆನಪಿನಲ್ಲಿಯೇ ಕಾಲ ಕಳೆಯುವಂತಾಗಿತ್ತು. ಅಮ್ಮನ ಅಗಲಿಕೆ ಬಳಿಕ ಅವರಿಗಾಗಿ ಸ್ಮಾರಕ ನಿರ್ಮಾಣ ಮಾಡಬೇಕು ಅನ್ನೋದು ಆಸೆಯಿತ್ತು. ಅದರಂತೆ ಸೋಲದೇವನಹಳ್ಳಿಯಲ್ಲಿ ವಿನೋದ್ ರಾಜ್ ಅವರು ಲೀಲಾವತಿಗಾಗಿ ಭವ್ಯವಾದ ಸ್ಮಾರಕವೊಂದನ್ನು ನಿರ್ಮಾಣ ಮಾಡಿದ್ದಾರೆ. ಇದರ ಉದ್ಘಾಟನೆ ನಿನ್ನೆ (ಡಿಸೆಂಬರ್‌ 5) ನಡೆದಿದೆ. ಇದಕ್ಕೆ ವರನಟಿ ಡಾ.ಎಂ.ಲೀಲಾವತಿ ದೇಗುಲ ಎಂದು ಹೆಸರಿಟ್ಟಿದ್ದಾರೆ. ಆದರೆ, ಲೀಲಾವತಿ ದೇಗುಲ ನಿರ್ಮಾಣವಾದ ಕೆಲವೇ ದಿನಗಳಲ್ಲಿ ಸರ್ಕಾರದಿಂದಲೇ ಇದಕ್ಕೆ ಕುತ್ತು ಎದುರಾಗಿದೆ.

ಅದೇನೆಂದರೆ ರಾಜ್ಯ ಸರ್ಕಾರ ಈಗಾಗಲೇ ಕುಣಿಗಲ್‌ ಹಾಗೂ ನೆಲಮಂಗಲ ತಾಲೂಕಿನಲ್ಲಿ 2ನೇ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗಾಗಿ 6 ಸಾವಿರ ಎಕರೆ ಜಾಗವನ್ನು ಅಂತಿಮ ಮಾಡಿದ್ದಾಗಿ ಸುದ್ದಿಯಾಗಿದೆ. ಇದರದ್ದು ಎನ್ನಲಾದ ಸ್ಕೆಚ್‌ ಈಗ ವೈರಲ್‌ ಆಗಿದ್ದು, ನೆಲಮಂಗಲ ತಾಲೂಕಿನ ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 30 ಹಳ್ಳಿಗಳನ್ನು ಒಳಗೊಂಡಿರುವ ಉದ್ದೇಶಿತ ವಿಮಾನ ನಿಲ್ದಾಣದ ಗಡಿಗಳನ್ನು ತೋರಿಸುವ ನಕ್ಷೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.

ಅಧಿಕಾರಿಗಳು ಈಗಾಗಲೇ ಜಮೀನಿನ ಸರ್ವೆ ನಡೆಸಿದ್ದು, ನೆಲಮಂಗಲ ತಾಲೂಕಿನ ಭಟ್ಟೇರಹಳ್ಳಿ, ಯೆಂಟಗಾನಹಳ್ಳಿ, ಸೋಲದೇವನಹಳ್ಳಿ, ಮೋಟಗಾನಹಳ್ಳಿ ಗ್ರಾಮಗಳು ಸೇರಿದಂತೆ 6 ಸಾವಿರ ಎಕರೆ ಪ್ರದೇಶದಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ. ಇನ್ನು ಈ 6 ಸಾವಿರ ಎಕರೆ ಪ್ರದೇಶದಲ್ಲಿರುವ ಸೋಲದೇವನಹಳ್ಳಿಯ ಪ್ರದೇಶದಲ್ಲಿಯೇ ದಿವಂಗತ ನಟಿ ಡಾ.ಎಂ ಲೀಲಾವತಿ ಅವರ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಹಾಗೇನಾದರೂ ಸರ್ಕಾರ ಇದೇ ಜಾಗವನ್ನು ಏರ್‌ಪೋರ್ಟ್‌ಗೆ ಅಂತಿಮ ಮಾಡಿದಲ್ಲಿ ಲೀಲಾವತಿ ಸ್ಮಾರಕವನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಅನಿವಾರ್ಯತೆ ಎದುರಾಗಲಿದೆ. ಉದ್ದೇಶಿತ ವಿಮಾನ ನಿಲ್ದಾಣದ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ತಮ್ಮ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

Leave A Reply

Your email address will not be published.