Narendra Modi in Cricket Field : 4 ನೇ ಟೆಸ್ಟ್ ಕ್ರಿಕೆಟ್ ಸಂದರ್ಭ, ಕ್ರಿಕೆಟ್ ಅಂಗಳಕ್ಕೆ ಇಳಿಯಲಿರುವ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ !

Narendra Modi in Cricket Field: ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಆಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ (Narendra Modi) ಕ್ರೀಡಾಂಗಣದಲ್ಲಿ ನಾಳೆಯಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಇಬ್ಬರು ವಿಶೇಷ ಅತಿಥಿಗಳು ಕ್ರೀಡಾಂಗಣಕ್ಕೆ ಕಾಲಿಡಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳು ಅಂಕಣಕ್ಕೆ ಇಳಿಯಲಿದ್ದಾರೆ.

ನಾಳಿನ ಪಂದ್ಯ ಬಹಳ ಮಹತ್ವದ್ದು ಎನಿಸಲಿದೆ. ವಿಶೇಷವೆಂದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ನಾಳಿನ ಪಂದ್ಯದ ಟಾಸ್‌ ಪ್ರಕ್ರಿಯೆ ವೇಳೆ ಹಾಜರಿರುವ ಬಗ್ಗೆ ಮಾಹಿತಿ ಲಬಂದಿದೆ. “ನಾನು ಮತ್ತು ಪ್ರಧಾನಿ ಮೋದಿ ಟಾಸ್‌ ಪ್ರಕ್ರಿಯೆ ವೇಳೆ ಹಾಜರಿರಲ್ಲಿದ್ದೇವೆ” ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.

ಭಾರತಕ್ಕೆ ಭೇಟಿ ನೀಡುವ ಮುನ್ನ ಅವರು NOVA 93.7 ಪರ್ತ್‌ಗೆ ನೀಡಿದ ರೇಡಿಯೊ ಸಂದರ್ಶನದಲ್ಲಿ ಮಾತನಾಡಿ, ತಾನು ಮತ್ತು ಪ್ರಧಾನಿ ಮೋದಿ ಅಹಮದಾಬಾದ್ ಟೆಸ್ಟ್‌ ಪಂದ್ಯದ ಟಾಸ್‌ ವೇಳೆ ಹಾಜರಿರುವುದಾಗಿ ದೃಢಪಡಿಸಿದ್ದಾರೆ. ಭಾರತ ಮತ್ತು ಆಸೀಸ್ ಅಂತಿಮ ಟೆಸ್ಟ್‌ ಪಂದ್ಯದ ವೀಕ್ಷಣೆ ಹಾಗೂ ಟಾಸ್‌ ಪ್ರಕ್ರಿಯೆಗೆ ಅತಿ ಗಣ್ಯ ನಾಯಕರು ಆಗಮಿಸುತ್ತಿರುವುದರಿಂದ, ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿಯ ಬ್ಯಾನರ್‌ಗಳು ಮೈದಾನದ ಸುತ್ತಮುತ್ತ ಎಲ್ಲೆಡೆ ರಾರಾಜಿಸುತ್ತಿವೆ.

“ನಾನು ಮತ್ತು ಪ್ರಧಾನಿ ಮೋದಿ ನಾಣ್ಯವನ್ನು ಚಿಮ್ಮಿಸಲಿರುವ ಕಾರಣ ನಮ್ಮ ಮೇಲೆ ಬಹಳಷ್ಟು ಒತ್ತಡವಿದೆ,” ಎಂದು ಪ್ರಧಾನಿಯವರ ಅಧಿಕೃತ ವೆಬ್‌ಸೈಟ್‌ನಲ್ಲಿ ಅಲ್ಬನೀಸ್ ಅವರ ರೇಡಿಯೊ ಸಂದರ್ಶನದ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಆದರೆ, ನಾಣ್ಯವನ್ನು ಪ್ರಧಾನಿ ಮೋದಿ ಟಾಸ್ ಮಾಡುತ್ತಾರೋ ಅಥವಾ ಆಸ್ಟ್ರೇಲಿಯಾದ ಪ್ರಧಾನಿ ಮಾಡುತ್ತಾರೋ ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲ. ಆ ಸಂದರ್ಭದಲ್ಲಿ “ಇಬ್ಬರು ಒಂದು ನಾಣ್ಯವನ್ನು ಹೇಗೆ ಟಾಸ್ ಮಾಡುತ್ತೀರಿ ” ಎಂಬ ರೇಡಿಯೋ ಕಾರ್ಯಕ್ರಮದ ನಿರೂಪಕನ ತಮಾಷೆ ಪ್ರಶ್ನೆಗೆ ಉತ್ತರಿಸಿದ ಆಸ್ಟ್ರೇಲಿಯಾದ ಪ್ರಧಾನಿ, “ಆ ಬಗ್ಗೆ ನನಗೆ ತಿಳಿದಿಲ್ಲ. ನರೇಂದ್ರ ಮೋದಿಯವರು ಆತಿಥೇಯ ದೇಶದ ಪ್ರಧಾನ ಮಂತ್ರಿ. ಹೀಗಾಗಿ ಅವರೇ ಮುಂದೆ ನಿಂತು ಈ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ” ಎಂದು ಅವರು ಆಸೀಸ್ ಮುಖ್ಯಸ್ಥ ಹೇಳಿದ್ದಾರೆ.

ಸದ್ಯ ಭಾರತವು ಟೆಸ್ಟ್‌ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಆದರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯಲು ನಾವು ಅಂತಿಮ ಟೆಸ್ಟ್‌ನಲ್ಲಿ ಗೆಲುವು ಸಾಧಿಸಬೇಕಾಗಿದೆ. ಜೂನ್ 7 ರಿಂದ ಲಂಡನ್‌ನಲ್ಲಿ ಚಾಂಪಿಯನ್‌ಶಿಪ್ ಘರ್ಷಣೆ ನಡೆಯಲಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತವು ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಜಯ ಸಾಧಿಸಿತ್ತು. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಆಗ ಕೇವಲ ಮೂರು ದಿನಗಳ ಅಂತರದಲ್ಲಿ ಈ ಎರಡೂ ಟೆಸ್ಟ್‌ಗಳು ಮುಗಿದಿದ್ದವು. ಮತ್ತೆ ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಾಂಗರೂಗಳು ಪುಟಿದೆದ್ದು ಕಾದಾಡಿದ್ದರು. ಅವರು ಒಂಬತ್ತು ವಿಕೆಟ್‌ಗಳಿಂದ ಗೆದ್ದು ತೀವ್ರ ಪ್ರತಿರೋಧದ ಸೂಚನೆ ನೀಡಿದ್ದಾರೆ. ಆ ಮೂಲಕ ಸರಣಿ ವೈಟ್‌ವಾಶ್ ತಪ್ಪಿಸಿದ್ದಲ್ಲದೆ, ನಾಳಿನ ಪಂದ್ಯಕ್ಕೆ ಕುತೂಹಲ ಮತ್ತು ಸ್ಪರ್ಧೆಯನ್ನು ಒಡ್ಡಿ ಕೂತಿದ್ದಾರೆ.

ಈ ಸಲ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಂಡದಿಂದ ಹೊರಗುಳಿದಿದ್ದಾರೆ. ನಾಯಕನ ಅಲಭ್ಯತೆಯಲ್ಲಿ ತಂಡದ ಜವಾಬ್ದಾರಿ ಹೊತ್ತ ಸ್ಟೀವ್ ಸ್ಮಿತ್‌, ನಾಗಪುರದಲ್ಲಿ ನಡೆದ 3ನೇ ಪಂದ್ಯದಲ್ಲಿ ತಂಡವನ್ನು ಕಂಬ್ಯಾಕ್ ಮಾಡುವಂತೆ ಮಾಡಿದ್ದಾರೆ. ಪ್ಯಾಟ್​ ಕಮಿನ್ಸ್​​ 4ನೇ ಪಂದ್ಯದ ಜೊತೆಗೆ ಮಾರ್ಚ್​​ 17ರಿಂದ ಶುರುವಾಗುವ ಏಕದಿನ ಸರಣಿಗೂ ಅಲಭ್ಯರಾಗಲಿದ್ದಾರೆ. ಹೀಗಾಗಿ ಸ್ಟೀವ್ ಸ್ಮಿತ್‌ ಅವರೇ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ನಾಲ್ಕನೇ ಟೆಸ್ಟ್‌ಗೆ ಭಾರತದ ಟೆಸ್ಟ್ ತಂಡ ಇಂತಿವೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್‌ ಕೀಪರ್), ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕತ್.

Leave A Reply

Your email address will not be published.