ಬುದ್ಧಿವಾದ ಹೇಳಿದ ಅಮ್ಮನಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ ಮಗ

ಮಂಗಳೂರು : ಬುದ್ದಿವಾದ ಹೇಳಿದ್ದರಿಂದ ಕುಪಿತಗೊಂಡು ತಾಯಿಯ ಮೇಲೆ ಮಗ ಹಲ್ಲೆ ಮಾಡಿ,ಕೊಲೆ ಬೆದರಿಕೆಯೊಡ್ಡಿರುವ ಘಟನೆ ಮಂಗಳೂರಿನ ಬೋಳಾರ ಬತ್ತೇರಿ ಗಾರ್ಡನ್‌ನ ಫೆಲಿಕ್ಸ್‌ ಕಂಪೌಂಡ್‌ನ‌ಲ್ಲಿ ನಡೆದಿದೆ.

ರೋಹಿತ್ ಎಂಬಾತ ತಡರಾತ್ರಿ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ದೂಡಿ ಹಾಕಿ ತುಳಿದ ತೊಡೆಯ ಮೂಳೆ ಮುರಿಯುವಂತೆ ಮಾಡಿದ್ದಾನೆ.ಇದರಿಂದ ಆರೋಪಿಯ ತಾಯಿ ಶಾಂತಾ ರೈ ಗಾಯಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುತ್ರ ರೋಹಿತ್‌ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಂತಾ ರೈ ಅವರ ಮೈದುನ ನವೀನ್‌ ರೈ ಮತ್ತು ಅತ್ತೆ ಶಾಂಭವಿ ಶೆಟ್ಟಿ ಅವರು ಫೆಲಿಕ್ಸ್‌ ಕಂಪೌಂಡ್‌ನ‌ಲ್ಲಿ ವಾಸವಿದ್ದಾರೆ. ರಾತ್ರಿ ಸುಮಾರು 1.30ರ ವೇಳೆಗೆ ಆರೋಪಿ ಪುತ್ರ ರೋಹಿತ್‌ ಕಬ್ಬಿಣದ ಪಂಚ್‌ ತರಹದ ವಸ್ತುವನ್ನು ಹಿಡಿದು ತಿರುಗಿಸುತ್ತಾ ಮನೆಯ ಒಳಗೆ ಬಂದು ಶಾಂಭವಿ ಶೆಟ್ಟಿಯವರ ಕುತ್ತಿಗೆ ಹಿಡಿಯಲು ಮುಂದಾಗಿದ್ದಾನೆ. ಆಗ ನವೀನ್‌ ಆತನನ್ನು ತಡೆದಿದ್ದಾರೆ. ಆಗ ಅವರಿಗೂ ಕೊಲೆ ಬೆದರಿಕೆಯೊಡ್ಡಿ, ಆತನ ಕೈಯಲ್ಲಿದ್ದ ಕಬ್ಬಿಣದ ವಸ್ತುವಿನಿಂದ ಎದೆಗೆ ಗುದ್ದಿ ಎಳೆದಾಡಿ ದೂಡಿ ಹಾಕಿದ್ದಾನೆ. ತಾಯಿ ಶಾಂತಾ ಅವರು ತಡೆಯಲು ಬಂದಾಗ ಅವರಿಗೆ, ಅವಾಚ್ಯ ಶಬ್ದಗಳಿಂದ ಬೈಯ್ದು ದೂಡಿ ಹಾಕಿದ್ದಾನೆ.

ನೆಲಕ್ಕೆ ಬಿದ್ದ ಆಕೆಯ ಬಲಕಾಲಿನ ತೊಡೆಗೆ ಕಾಲಿನಿಂದ ತುಳಿದಿದ್ದಾನೆ. ಪರಿಣಾಮ ಮೂಳೆ ಮುರಿತವಾಗಿದ್ದು, ಬಳಿಕ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದಾನೆ. ಶಾಂತಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೋಹಿತನ ನಡತೆ ಸರಿ ಇಲ್ಲದೇ ಇದ್ದುದರಿಂದ ಹಲವು ಬಾರಿ ಸರಿಯಾಗಿ ಕೆಲಸಕ್ಕೆ ಹೋಗಿ ಹಣ ಸಂಪಾದಿಸುವಂತೆ ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡು ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.