ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆದ್ರೆ, ಕೆಲ ಪ್ರಕರಣಗಳ ಕಂಡಾಗ ಅಚ್ಚರಿ ಮೂಡಿಸುವುದಂತು ಸುಳ್ಳಲ್ಲ. ಕೆಲವೊಮ್ಮೆ ಸಣ್ಣ ಪುಟ್ಟ ಕ್ಷುಲ್ಲಕ ಕಾರಣಗಳು ಗಲಾಟೆ, ಕೊಲೆ ಮೂಲಕ ಮುಕ್ತಾಯಗೊಂಡು ಜೀವದ ಬಲಿದಾನ ಆಗುವ ಪ್ರಹಸನಗಳು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ, ಬೆಂಗಳೂರು ನಗರದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಚಾಕುವಿನಿಂದ ಇರಿದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೆಚ್ಎಸ್ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಡಿಯೋ ಕಾಲ್ನಲ್ಲಿ ಪತ್ನಿಯ ಮೊಗವನ್ನು ತೋರಿಸದ ಹಿನ್ನೆಲೆ ಸಹೋದ್ಯೋಗಿಗೆ ಕತ್ತರಿಯಿಂದ ಇರಿದ ಘಟನೆ ವರದಿಯಾಗಿದೆ. ಸುರೇಶ್ ಚಾಕುವಿನಿಂದ ರಾಜೇಶ್ ಮಿಶ್ರಾ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸುರೇಶ್ ಮತ್ತು ರಾಜೇಶ್ ಮಿಶ್ರಾ ಹೆಚ್ಎಸ್ಆರ್ ಲೇಔಟ್ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದ ಸಂದರ್ಭದಲ್ಲಿ ರಾಜೇಶ್ ಮಿಶ್ರಾ ಫೋನ್ನಲ್ಲಿ ಪತ್ನಿಯ ಜೊತೆಗೆ ಕರೆಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಅಲ್ಲಿಗೆ ಆಗಮಿಸಿದ ಸುರೇಶ್ , ರಾಜೇಶ್ ಅವರ ಬಳಿ ಯಾರೊಂದಿಗೆ ಮಾತನಾಡುತ್ತಿದ್ದೀಯಾ? ಎಂದು ಪ್ರಶ್ನಿಸಿ ವೀಡಿಯೊ ಕಾಲ್ ಮಾಡುವಂತೆ ಒತ್ತಾಯಿಸಿ, ರಾಜೇಶ್ ಅವರ ಮಡದಿಯನ್ನು ನೋಡಬೇಕೆಂದು ದುಂಬಾಲು ಬಿದ್ದಿದ್ದು, ಇದರಿಂದ ಕುಪಿತನಾದ ರಾಜೇಶ್ ತನ್ನ ಪತ್ನಿಯನ್ನು ಹೆಂಡತಿಯನ್ನು ಈತನಿಗೇಕೆ ತೋರಿಸಬೇಕೆಂದು ಶುರುವಾದ ಗಲಾಟೆ ತಾರಕಕ್ಕೇರಿದೆ. ಹೀಗೆ, ಆರಂಭವಾದ ಜಗಳ ಮಾತಿಗೆ ಮಾತು ಬೆಳೆದು, ಸುರೇಶ್ ಅಂಗಡಿಯಲ್ಲಿದ್ದ ಕತ್ತರಿಯಿಂದ ರಾಜೇಶ್ ಹೊಟ್ಟೆಗೆ ಇರಿದಿದ್ದಾನೆ ಎನ್ನಲಾಗಿದೆ. ಈ ಪ್ರಕರಣದ ಕುರಿತಂತೆ ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಸದ್ಯ ಆರೋಪಿ ಸುರೇಶ್ನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.