Ration Card : ದೊರೆಯಿತು ಬಡ ಕುಟುಂಬಕ್ಕೆ ಬಿಪಿಎಲ್ ರೇಷನ್ ಕಾರ್ಡ್!!!

ರಾಜ್ಯದ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ . ಜನತೆಯ ಆರ್ಥಿಕ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸಿ ಅದರಂತೆ ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ, ಪಡಿತರ ಚೀಟಿ ವಿತರಣೆ ಮಾಡಿ ನೆರವಾಗುತ್ತಿವೆ.

ಆದ್ಯತಾ ಪಡಿತರ ಚೀಟಿ(ಬಿಪಿಎಲ್‌)ಗಳ ವಿತರಣೆಗೆ ಶುಭ ಗಳಿಗೆ ಕೂಡಿ ಬಂದಿದ್ದು , ಬೆಳಗಾವಿ ಜಿಲ್ಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿದ್ದ ಬಡಕುಟುಂಬಗಳಿಗೆ ಬಿಪಿಎಲ್‌ ರೇಷನ್‌ ಕಾರ್ಡ್‌ ಪಡೆಯುವ ಗಳಿಗೆ ಕೊನೆಗೂ ಕೂಡಿ ಬಂದಿದೆ.


ಎಲ್ಲ ವರ್ಗದ ಕುಟುಂಬಗಳಿಗೆ ಆಹಾರ ಭದ್ರತೆ ಹಾಗೂ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಆಸರೆ ಪಡೆಯುವ ಆದ್ಯತಾ ಪಡಿತರ ಚೀಟಿ(ಬಿಪಿಎಲ್‌)ಗಳನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಹಿರಿತನದ ಆಧಾರದ ಮೇಲೆ ವಿತರಿಸಲು ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ.


ಸದ್ಯ ಜಿಲ್ಲೆಗೆ ಒಟ್ಟು 10874 ಹೊಸ ಬಿಪಿಎಲ್‌ ಕಾರ್ಡ್‌ಗಳನ್ನು ಮಂಜೂರು ಮಾಡಲು ಅನುಮತಿ ನೀಡಲಾಗಿದ್ದು, ತಾಲೂಕುವಾರು ಆಹಾರ ಇಲಾಖೆ ಅಧಿಕಾರಿಗಳು ಸ್ಥಳ ತನಿಖೆ ಮಾಡಿರುವ ಪ್ರಕಾರ ಒಟ್ಟು 9787 ಕಾರ್ಡ್‌ಗಳನ್ನು ವಿತರಿಸಲು ಸೂಚನೆ ನೀಡಲಾಗಿದೆ. ಇನ್ನುಳಿದ 1087 ಪಡಿತರ ಚೀಟಿ ಮಂಜೂರಿಸುವ ಗುರಿಯನ್ನು ಕೇಂದ್ರ ಕಚೇರಿಯವರು ವಿವಿಧ ತುರ್ತು ಕಾರಣಗಳಿಗೆ ಶೇ.10ರಷ್ಟು ಕಾಯ್ದಿರಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.


ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗೆ 2017-18 ರಿಂದ 2021-22ನೇ ಸಾಲಿನಲ್ಲಿ ಕೂಡ ಅರ್ಜಿ ಸಲ್ಲಿಸಿದ್ದು ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ ಅರ್ಜಿಗಳ ಹಿರಿತನದ ಆಧಾರದ ಮೇಲೆ ಅಂದರೆ 2017-18 ನೇ ಸಾಲಿನಲ್ಲಿ ಸಲ್ಲಿಕೆ ಆಗಿರುವ ಅರ್ಜಿಗಳ ವಿಲೇವಾರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.

ಪ್ರಥಮ ಆದ್ಯತೆಯಾಗಿ ತೀವ್ರ ಆಹಾರ ಅಭದ್ರತೆಗೆ ಒಳಗಾಗಿರುವ ಕುಟುಂಬಗಳು ಮತ್ತು ಇದುವರೆಗೂ ಯಾವುದೇ ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳನ್ನು ಪರಿಗಣಿಸುವಂತೆ ಸೂಚಿಸಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ 2022 ಆ.25ರವರೆಗೂ ಆದ್ಯತಾ ಪಡಿತರ ಚೀಟಿಗಾಗಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ ಬರೋಬ್ಬರಿ 73,772 ಕುಟುಂಬಗಳ ಅರ್ಜಿಗಳಲ್ಲಿ 47911 ವಿಲೇವಾರಿಗೆ ಅರ್ಹವೆಂದು ಪರಿಗಣಿಸಲಾಗಿದೆ. ಅದರಲ್ಲಿ 30861 ಅರ್ಜಿಗಳ ಪರಿಶೀಲನೆ ಬಾಕಿಯಿದ್ದು ಇಲ್ಲಿಯವರೆಗೆ 20151 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ.

ಎರಡನೇ ಆದ್ಯತೆಯಾಗಿ ಮೂಲ ಬುಡಕಟ್ಟು, ಅಲೆಮಾರಿ ಕುಟುಂಬಗಳು, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗಗಳ ಹಾಗೂ ಕಾಡಿನಲ್ಲಿ ವಾಸ ಮಾಡುವ ಕುಟುಂಬಗಳಿಗೆ ಈ ಪಡಿತರ ಚೀಟಿ ವಿತರಿಸಬೇಕೆಂದು ಸೂಚಿಸಲಾಗಿದೆ.

ವಿತರಿಸುವ ಹೊಸ ಪಡಿತರ ಚೀಟಿಗಳ ಬಗ್ಗೆ ಇಲಾಖೆ ತಂತ್ರಾಂಶದಲ್ಲಿ ಅಥವಾ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಆದೇಶ ನೀಡಿದ್ದಾರೆ.

ಅಥಣಿ 725
ಬೈಲಹೊಂಗಲ 308
ಬೆಳಗಾವಿ(ನಗರ) 987
ಬೆಳಗಾವಿ(ಗ್ರಾ) 1454
ಚಿಕ್ಕೋಡಿ 555
ಗೋಕಾಕ 1130
ಹುಕ್ಕೇರಿ 777
ಖಾನಾಪುರ 417
ರಾಮದುರ್ಗ 389
ರಾಯಭಾಗ 1015
ಸವದತ್ತಿ 654
ಕಿತ್ತೂರ 185
ಮೂಡಲಗಿ 354
ನಿಪ್ಪಾಣಿ 428
ಕಾಗವಾಡ 408
ಒಟ್ಟು 9787

ಬೆಳಗಾವಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಆದ್ಯತಾ ಪಡಿತರ ಚೀಟಿಗಳ ವಿತರಣೆಗೆ ಕ್ರಮ ಕೈಗೊಂಡಿದ್ದು, ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೆ ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ವಿತರಣೆಯಾಗದಂತೆ ನೋಡಿಕೊಳ್ಳಲಾಗುವ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.