ಮಂಗಳೂರು: ಬೆಳ್ಳಂಬೆಳಗ್ಗೆ ಭೀಕರ ಅಪಘಾತ!! ಎರಡೂ ಲಾರಿಗಳ ಚಾಲಕರಿಬ್ಬರ ದುರ್ಮರಣ-ಹೊರತೆಗೆಯಲು ಹರಸಾಹಸ!!

ಮಂಗಳೂರು:ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ,ಚಾಲಕರಿಬ್ಬರು ಮೃತಪಟ್ಟ ಘಟನೆಯೊಂದು ನಗರದ ಹೊರವಲಯದ ಗುರುಪುರ-ಕೈಕಂಬ ಬಳಿಯ ಇಳಿಜಾರು ಪ್ರದೇಶದಲ್ಲಿ ನಡೆದಿದೆ.

ಮೂಡುಬಿದ್ರೆ ಕಡೆಯಿಂದ ಮಣ್ಣು ಹೊತ್ತು ಬರುತ್ತಿದ್ದ ಬೃಹತ್ ಲಾರಿ ಹಾಗೂ ಗುರುಪುರ ಕಡೆಯಿಂದ ಹೋಗುತ್ತಿದ್ದ ಲಾರಿ ನಡುವೆ ಇಳಿಜಾರು ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ಬದಿಯ ಹೊಂಡಕ್ಕೆ ಇಳಿದು ನಿಂತ ಪರಿಣಾಮ ಚಾಲಕರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.

ಸದ್ಯ ಓರ್ವನನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದು, ಇನ್ನೊರ್ವನ ಮೃತದೇಹ ಹೊರತೆಗೆಯಲು ಕಾರ್ಯಚರಣೆ ನಡೆಯಿತ್ತಿದೆ.

ರಸ್ತೆ ತುಂಬೆಲ್ಲಾ ವಾಹನ ದಟ್ಟಣೆ ಹೆಚ್ಚಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಮಾತ್ರ ಸ್ಥಳದಲ್ಲಿ ಟ್ರಾಫಿಕ್ ನಿರ್ವಹಣೆ ನಡೆಸುತ್ತಿರುವುದು ಕಂಡುಬಂತು.ಅಲ್ಲದೇ ಅಗಲ ಕಿರಿದಾದ ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ರಾತ್ರಿ ಮಾತ್ರ ಅವಕಾಶ ಕಲ್ಪಿಸಿಕೊಡಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆಗ್ರಹಿಸಿದರು.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಯಾಣಿಕರ ಗಮನಕ್ಕೆ: ಮಂಗಳೂರು-ಮೂಡಬಿದ್ರೆ ರಸ್ತೆಯು ಅಗಲಕಿರಿದಾಗಿದ್ದು,ನೂತನ ರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸೂಚನ ಫಲಕಗಳನ್ನು ಹಾಕಲಾಗಿದ್ದು,ದ್ವಿಚಕ್ರ ಸಹಿತ ಘನ ವಾಹನಗಳು ವೇಗದ ಮಿತಿಯನ್ನು ನಿಯಂತ್ರಿಸುವಂತೆ ಕೋರಲಾಗಿದೆ.

Leave A Reply

Your email address will not be published.