ಕಡಬ : ದೋಳ್ಪಾಡಿಯ ಕಾಡಿನಲ್ಲಿ ಲಾರಿ ಚಾಲಕನ ಶವ ಪತ್ತೆ

ಕಾಣಿಯೂರು: ವ್ಯಕ್ತಿಯೋರ್ವರ ಶವ ಕಾಡಿನಲ್ಲಿ ಕವಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಡಿ.2ರಂದು ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ದೋಳ್ಪಾಡಿ ದಿ.ಕೊರಗಪ್ಪ ಅವರ ಪುತ್ರ ದೇವರಾಜ ಮೃತ ವ್ಯಕ್ತಿ.
ದೇವರಾಜ ಲಾರಿ ಚಾಲಕನಾಗಿದ್ದು, ಕಾಣಿಯೂರು ಗ್ರಾಮದ ನಾವೂರು ಅನಿತಾ ಎಂಬವರನ್ನು 13 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ದೇವರಾಜ ಅಮಲು ಪದಾರ್ಥ ಸೇವಿಸಿ ಆಗಾಗ ಪತ್ನಿ ಅನಿತಾಳೊಂದಿಗೆ ಜಗಳ ಮಾಡುತಿದ್ದು, ಹಲವು ಬಾರಿ ಕುಟುಂಬಸ್ಥರು ಬುದ್ದಿವಾದ ತಿಳಿಸಿದ್ದರು. ನ.28ರಂದು ರಾತ್ರಿ ದೇವರಾಜ ಅಮಲು ಪದಾರ್ಥ ಸೇವಿಸಿ ಹೆಂಡತಿ ಜತೆ ಜಗಳವಾಡಿದ್ದು, ಅವರ ತಂದೆ ನಾಗಪ್ಪ ಅವರು ಮನೆಗೆ ಬಂದು ಬುದ್ದಿವಾದ ಹೇಳಿದ್ದರು.

ಡಿ.29ರಂದು ದೇವರಾಜ ನಾಪತ್ತೆಯಾಗಿದ್ದು ಸ್ಥಳೀಯರು, ಮನೆಯವರು ದೋಳ್ಪಾಡಿ ಪರಿಸರದಲ್ಲಿ ಮತ್ತು ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರುವುದಿಲ್ಲ. ಡಿ.2ರಂದು ದೇವರಾಜನ ಮೃತ ದೇಹ ದೊಲ್ಪಾಡಿ ಗ್ರಾಮದ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಕವಚಿ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಕಡಬ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಡಬ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

Leave A Reply

Your email address will not be published.