ಬೆಳ್ತಂಗಡಿ : ಕಾಲೇಜು ಮುಗಿಸಿ ಫಾಲ್ಸ್ ಗೆ ತಿರುಗಾಡಲೆಂದು ಹೋದ ವಿದ್ಯಾರ್ಥಿಗಳ ಗುಂಪು | ನೀರಿನ ಸೆಳೆತಕ್ಕೆ ಓರ್ವ ವಿದ್ಯಾರ್ಥಿ ಸಾವು!!!

ಬೆಳ್ತಂಗಡಿ : ಖಾಸಗಿ ವಿದ್ಯಾರ್ಥಿಗಳ ತಂಡವೊಂದು ತಿರುಗಾಡಲೆಂದು ಹೊರಗೆ ಹೋದ ಸಂದರ್ಭದಲ್ಲಿ ಓರ್ವ ನೀರಿನ ಸೆಳೆತಕ್ಕೆ ಸಿಲುಕಿ ಸಾವಿಗೀಡಾದ ಘಟನೆಯೊಂದು ನಡೆದಿದೆ. ಈ ವಿದ್ಯಾರ್ಥಿಗಳ ತಂಡ ಒಟ್ಟು ಏಳು ಜನರಿದ್ದು, ಕಾಲೇಜು ಮುಗಿಸಿ, ಇಂದು ಮಧ್ಯಾಹ್ನ ಮಲವಂತಿಗೆ ಬಳಿಯ ಎರ್ಮಾಯಿ ಫಾಲ್ಸ್ ಗೆ ತಿರುಗಾಡಲು ಹೋಗಿದ್ದು ಈ ವೇಳೆ ಓರ್ವ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

ಧರ್ಮಸ್ಥಳ ಗ್ರಾಮದ ದೊಂಡೆಲೆಯ ನೇತ್ರಾನಗರದ ನಿವಾಸಿ ಕೇಶವ ಭಂಡಾರಿ ಮತ್ತು ಸುಮಿತ್ರಾ ದಂಪತಿಯ ಎರಡನೇ ಮಗನಾದ ವಿವೇಕ್ ಭಂಡಾರಿ(17) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.

ಉಜಿರೆ ಖಾಸಗಿ ಎರಡನೇ ವರ್ಷದ ಪಿಯುಸಿ ವಿದ್ಯಾರ್ಥಿಗಳ ಏಳು ಜನರ ತಂಡ ಶನಿವಾರ ಕಾಲೇಜು ಮುಗಿಸಿ ಮೂರು ಬೈಕ್ ನಲ್ಲಿ ಹೋಗಿದ್ದಾರೆ. ಸಂಜೆ ಸುಮಾರು ನಾಲ್ಕು ಗಂಟೆಗೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಈಜುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಈ ವೇಳೆ ಉಳಿದವರು ಬೊಬ್ಬೆ ಹಾಕಿದಾಗ ಸ್ಥಳೀಯರೊಬ್ಬರು ಬಂದು ನೀರಿನಲ್ಲಿ ಹುಡುಕಾಟ ನಡೆಸಿ ಕೊನೆಗೆ ಯುವಕನನ್ನು ನೀರಿನಿಂದ ರಕ್ಷಣೆ ಮಾಡಿ ತಕ್ಷಣ ಜೀಪಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಯ ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಘಟನೆ ಸಂಬಂಧ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.