Balloon Festival : ಎಲ್ಲಾ ಸಮಸ್ಯೆ ಮಾಯ ಮಾಡೋ ಬಲೂನ್ | ಎಲ್ಲಿ?

ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ, ಕಷ್ಟಗಳು ಇದ್ದೇ ಇವೆ. ಕೆಲವರು ದೇವರ ಮೊರೆಯೂ ಹೋಗುತ್ತಾರೆ. ಅದೇನೋ ಧಾರ್ಮಿಕ್ವ್ ಸ್ಥಳಕ್ಕೆ ಹೋದಾಗ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೆ ನಮ್ಮೆಲ್ಲಾ ಕಷ್ಟಗಳು ಪರಿಹಾರವಾದ ಸಂತೃಪ್ತಿ ಭಾವನೆ ಇರುತ್ತದೆ. ಇಲ್ಲೊಂದು ಕಡೆ ಬಲೂನ್ ಹಾರಿಸುವುದರಿಂದ ನಮ್ಮ ಕಷ್ಟಗಳೆಲ್ಲಾ ಮಾಯವಾಗುತ್ತದೆ ಎಂಬ ನಂಬಿಕೆ ಇದೆ!!

ಹೌದು, ಕಾರವಾರದಲ್ಲಿ ನೆಲೆಸಿರುವ ರಾಮನಾಥೇಶ್ವರ ದೇವರ ಕಾರ್ತಿಕೋತ್ಸವದ ಉತ್ಸವವು ಪ್ರತಿ ವರ್ಷ ನಡೆಯುತ್ತದೆ. ಉತ್ಸವದ ದಿನ ದೇವರ ಪಲ್ಲಕ್ಕಿಯನ್ನು ರಾಮನಾಥ ದೇವಾಲಯದಿಂದ ಸಾತೇರಿ ದೇವಾಲಯಕ್ಕೆ ತಂದು ಪೂಜೆ ಮಾಡಿ, ಸುತ್ತಲಿನ ಊರ ಜನರು ಕುಲಾವಿ ತೋರಣದಿಂದ ಊರನ್ನು ಸಿಂಗರಿಸಿ ದೇವರಿಗೆ ದೀಪಾರತಿ ಬೆಳಗಿ ಸೇವೆ ನೀಡುತ್ತಾರೆ.

ಆದರೆ ಇದೆಲ್ಲಕ್ಕೂ ಜಾಸ್ತಿ ಜನರು ಇಷ್ಟಪಡುವುದೇ ವಾಫರ್ ಬಲೂನು ಹಾರಾಟ. ಅರೇ ವ್ಹಾ! ದೇವಸ್ಥಾನದಲ್ಲಿ ಏನಾದರೂ ಬಲೂನು ಕಾಂಪಿಟೇಶನ್ ಇಟ್ಕೊಂಡಿದರಾ? ಅಂತ ಅಂದ್ಕೊಂಡ್ರ. ಅದಲ್ಲ ಕಥೆ ಇದು ಬೇರೆನೇ ಇದೆ. ಸಂಜೆಯಾಗುತ್ತಲೇ ರಾಮನಾಥ ದೇವಾಲಯದ ಬಳಿ ಬಿಸಿ ಗಾಳಿ ತುಂಬಿದ ಬಲೂನ್ ಅನ್ನು ಹಾರಿ ಬಿಡುತ್ತಾರೆ. ಮುಗಿಲೆತ್ತರಕ್ಕೆ ಮುಖ ಮಾಡಿರುವ ವಾಫರ್ ಬಲೂನು, “ಹರ ಹರ ಮಹಾದೇವ” ಎಂದು ದೇವರ ಉದ್ಘೋಷ ಮೊಳಗಿಸುತ್ತಿರುವ ಭಕ್ತರು. ಇಂತಹ ಭಕ್ತಿ ಪರಾಕಾಷ್ಠೆ ಮೆರೆಯುವ ಜನರು ಹೀಗೆ ಬಲೂನು ಹಾರಿಸೋಕೂ ಒಂದು ಕಾರಣವಿದೆ.

ಬಲೂನಿನ ಮೂಲಕ ಜನ ಸಂಕಟಕ್ಕೆ ಅಂತ್ಯ ಹಾಡೋ ಸೂಚನೆಯಿದು. ದೇವರಿಗೆ ಮೊರೆ ಇಡುವ ರೀತಿಯಿದು. ಬಲೂನ್ ಮೇಲೇರಿದಷ್ಟೂ ಹೇಗೆ ಚಿಕ್ಕದಾಗುತ್ತದೆಯೋ ಹಾಗೆಯೇ ಕಷ್ಟಗಳು ಸಣ್ಣದಾಗಲಿ ಎಂದು ಪ್ರಾರ್ಥಿಸಿಕೊಂಡರು. ಒಂದು ಸುದೀರ್ಘ ಹಾರಾಟದ ನಂತರ ಅದು ಸಮುದ್ರಕ್ಕೆ ಸೇರಬೇಕು. ಹಾಗೆ ಸೇರಿದರೆ ಊರಿನವರ ಸಂಕಷ್ಟ ನಿವಾರಣೆಯಾಗುತ್ತದೆ ಅನ್ನೋದು ಜನರ ನಂಬಿಕೆ. ಈ ಬಾರಿಯ ಬಲೂನು 20 ಅಡಿ ಎತ್ತರ ಹಾಗೂ 8 ಅಡಿ ಅಗಲ ಹೊಂದಿತ್ತು.

ಬಲೂನ್ ಜಾತ್ರೆ ಎಂದೇ ಫೇಮಸ್ ಆಗಿರುವ ಈ ಜಾತ್ರಾ ಮಹೋತ್ಸವಕ್ಕೆ ಊರ, ಪರವೂರ ಭಕ್ತರೂ ಆಗಮಿಸಿದ್ದಾರೆ. ಬಲೂನಿನಂತೆ ತಮ್ಮ ಜೀವನ ಉನ್ನತ ಮಟ್ಟಕ್ಕೆ ಏರಲಿ, ಸಮಸ್ಯೆಗಳು ನಿವಾರಣೆ ಆಗಲಿ ಅನ್ನೋ ಆಶಯದೊಂದಿಗೆ ಜಾತ್ರೆ ಮುಕ್ತಾಯವಾಯ್ತು.

Leave A Reply

Your email address will not be published.