ಮದುವೆಯಾದ ಆರೇ ತಿಂಗಳಿಗೇ ಗರ್ಭಿಣಿ ಹೆಂಡತಿಗೆಂದೇ ದಟ್ಟ ಅರಣ್ಯದಲ್ಲಿ ಗುಂಡಿ ತೋಡಿದ್ದ ಪಾಪಿ ಗಂಡ | ಸಂಶಯದ ಭೂತ ತಲೆ ತುಂಬಿತ್ತು!

ಅನುಮಾನವೆಂಬ ಪೆಡಂಭೂತ ಅದೆಷ್ಟೋ ದೊಡ್ಡ ಪ್ರಮಾದಗಳಿಗೆ ಎಡೆಮಾಡಿ ಕೊಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ವರದಿಯಾಗಿದೆ.

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಅಡಿ ಇಟ್ಟು ಮದುವೆಯಾಗಿ ಆರು ತಿಂಗಳು ತುಂಬಿ , ನೂರಾರು ಕನಸು ಹೊತ್ತ ನವ ವಿವಾಹಿತೆ ಪತಿಯ ಜೊತೆ ಅತ್ತೆ ಮನೆಗೆ ಬಂದು ಮಸಣಕ್ಕೆ ತೆರಳಿದ ವಿಷಾದನೀಯ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯಲ್ಲಿ ಈ ಕೊಲೆ ನಡೆದಿದ್ದು, ಇದೇ ವರ್ಷ ಏಪ್ರಿಲ್ 13ರಂದು ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೇಶಪ್ಪ, ರತ್ನಮ್ಮ ದಂಪತಿಯ ಕೊನೆಯ ಪುತ್ರಿ ರಶ್ಮಿಯನ್ನು ಗಂಗಗೊಂಡನಹಳ್ಳಿಯ ನಿವಾಸಿ ಮೋಹನ್ ಜೊತೆ ಮದುವೆ ಮಾಡಿಕೊಡಲಾಗಿತ್ತು.

ಹಿರಿಯರ ಸಮ್ಮುಖದಲ್ಲಿ ಮೋಹನ್ ಮತ್ತು ರಶ್ಮಿ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಡಲಾಗಿದ್ದು, ಆದರೆ, ಮದುವೆಯಾದ ಆರು ತಿಂಗಳಲ್ಲಿಯೇ ರಶ್ಮಿ ಪತಿಯಿಂದಲೇ ಕೊಲೆಯಾಗಿದ್ದಾಳೆ. ರಶ್ಮಿ ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆ ಸಂತೋಷಪಡದ ಮೋಹನ್ ಪತ್ನಿಯ ಮೇಲೆ ಅನುಮಾನಪಡಲು ಆರಂಭಿಸಿದ್ದು, ರಶ್ಮಿ ಯಾರ ಬಳಿ ಮಾತನಾಡಿದರು ಕೂಡ ಅನುಮಾನದ ದೃಷ್ಠಿಯಿಂದ ನೋಡುತ್ತಿದ್ದ ಎನ್ನಲಾಗಿದ್ದು, ಮೋಹನ್ ರಶ್ಮಿಗೆ ಮಾನಸಿಕ ಕಿರುಕುಳ ಕೂಡ ನೀಡುತ್ತಿದ್ದ ಎನ್ನಲಾಗಿದೆ.

ಇದೇ ವಿಷಯವಾಗಿ ರಶ್ಮಿ ಮತ್ತು ಮೋಹನ್ ಕುಮಾರ್ ನಡುವೆ ಹಲವು ಬಾರಿ ಜಗಳ ಕೂಡ ನಡೆದು, ಇಬ್ಬರ ಕುಟುಂಬಸ್ಥರು ರಾಜಿ ಸಂಧಾನ ನಡೆಸಿ ಜೊತೆಯಾಗಿ ಬಾಳುವಂತೆ ತಿಳಿ ಹೇಳುತ್ತಿದ್ದರು ಎನ್ನಲಾಗಿದೆ. ರಾಜಿ ಸಂಧಾನದ ಬಳಿಕವೂ ಮೋಹನ್ ಅನುಮಾನಿಸುವುದನ್ನು ಬಿಟ್ಟಿಲ್ಲ.20 ವರ್ಷದ ಯುವತಿ ರಶ್ಮಿ ಅಲಿಯಾಸ್ ರೇಷ್ಮಾ ಕೊಲೆಯಾದ ನವ ವಿವಾಹಿತೆಯಾಗಿದ್ದು, ಗಂಡನ ಅನುಮಾನಕ್ಕೆ ಬಲಿಯಾಗಿದ್ದಾಳೆ.

ಮದುವೆಯಾದ ಬಳಿಕ, ರಶ್ಮಿ ಗರ್ಭಿಣಿ (Pregnant) ಆಗಿದ್ದು, ಹಾಗಾಗಿ ಪತಿ ಮೋಹನ್ ಪತ್ನಿಯ ಮೇಲೆ ಅನುಮಾನಗೊಂಡು ಕೊಲೆ ಮಾಡಿ, ದಟ್ಟ ಅರಣ್ಯ ಪ್ರದೇಶದಲ್ಲಿ ರಶ್ಮಿ ಶವ ಹೂತು ಹಾಕಿದ್ದು, ಕೊಂದ (Wife Murder) ಬಳಿಕ ದೇವರ ಮುಂದೆ ಪ್ರಮಾಣ ಮಾಡಿದ್ದ ನೀಚ ಮೋಹನ್ ಕುಮಾರ್ ಅಲಿಯಾಸ್ ಮನು ಪತ್ನಿಯನ್ನು ನಾನು ಕೊಲೆ ಮಾಡಿಲ್ಲ. ಎಂದು ಹೇಳಿಕೊಂಡಿದ್ದಾನೆ. ಆಕೆ ಯಾರ ಜೊತೆಯಲ್ಲಾದರು ಓಡಿ ಹೋಗಿರಬೇಕು ಎಂದು ಕಥೆಗೆ ಹೊಸ ರೆಕ್ಕೆ ಪುಕ್ಕ ಸೇರಿಸಿ ಕುಟುಂಬಸ್ಥರ ಮುಂದೆ ಹೇಳಿಕೊಂಡಿದ್ದಾನೆ.

ಮೋಹನ್ ಕುಮಾರ್ ಪತ್ನಿ ರಶ್ಮಿ ಕೊಲೆಗೆ ಒಂದು ತಿಂಗಳ ಮೊದಲೇ ಪ್ಲಾನ್ ಮಾಡಿಕೊಂಡಿದ್ದು, ತನ್ನ ಸಂಚಿನಂತೆಯೇ ಒಂದು ತಿಂಗಳು ಮೊದಲು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಸಮೀಪದ ಶಿರಗಲಿಪುರ ಕಣಿವೆ ಬಳಿ ಗುಂಡಿ ತೋಡಲು ಜಾಗ ಗುರುತಿಸಿದ್ದಾನೆ. ತನ್ನ ಯೋಜನೆ ಯಂತೆಯೇ ಗುರುತಿಸಿದ ಜಾಗದಲ್ಲಿ ಗುಂಡಿ ತೋಡಿ ಬಂದಿದ್ದಾನೆ.

ಅಕ್ಟೋಬರ್ 8ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರಶ್ಮಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ರಾತ್ರಿಯೇ ಕಾರ್​ನಲ್ಲಿ ಶವ ಸಾಗಿಸಿ ಗುರುತಿಸಿದ ಜಾಗದಲ್ಲಿ ಹೂತು ಹಾಕಿ ಬಂದಿರುವ ಘಟನೆ ನಡೆದಿದೆ. ಮತ್ತೆ ಮನೆಗೆ ಬಂದಿದ್ದ ಮೋಹನ್ ಕುಮಾರ್ ಹಲವು ಸಾಕ್ಷ್ಯ ನಾಶಗೊಳಿಸಿ ರಶ್ಮಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ಕಾಣುತ್ತಿಲ್ಲ ಎಂದು ಹೇಳಿಕೊಂಡು ಯಾರ ಜೊತೆಯಲ್ಲಾದರು ಓಡಿ ಹೋಗಿರಬಹುದು ಎಂಬ ಅನುಮಾನದ ಮಾತುಗಳನ್ನು ಆಡಿದ್ದಾನೆ.

ಮಗಳು ನಾಪತ್ತೆ ವಿಷಯ ತಿಳಿಯುತ್ತಿದ್ದಂತೆ ದೌಡಾಯಿಸಿದ ಪೋಷಕರು ಮೋಹನ್ ಕುಮಾರ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ದೇವರ ಮುಂದೆ ಪ್ರಮಾಣ ಮಾಡಿದ್ದ ಮೋಹನ್ ಕುಮಾರ್, ನಾನು ಆಕೆಯನ್ನು ಏನೂ ಮಾಡಿಲ್ಲ. ಮನೆಯಲ್ಲಿ ಕಾಣಿಸುತ್ತಿಲ್ಲ ಎಂದು ತನ್ನ ಹಳೆ ಮಾತುಗಳನ್ನು ಪುನರುಚ್ಚಿಸಿದ್ದ ಎನ್ನಲಾಗಿದೆ.

ಮಗಳು ಸಿಗದ ಹಿನ್ನೆಲೆಯಲ್ಲಿ ರಶ್ಮಿ ಪೋಷಕರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪುತ್ರಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಪೊಲೀಸರಿಗೂ ಆರಂಭದಲ್ಲಿ ಮೋಹನ್ ಕುಮಾರ್ ಮೇಲೆಯೇ ಅನುಮಾನ ಬಂದಿದ್ದು, ಶಂಕೆ ಹಿನ್ನೆಲೆ ಮೋಹನ್ ಕುಮಾರ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೋಹನ್ ಕುಮಾರ್ ಹೂತಿಟ್ಟಿದ್ದ ಶವವನ್ನು ಹೊರಗೆ ತಗೆದು ಮರಣೋತ್ತರ ಶವಪರೀಕ್ಷೆ ಸಹ ನಡೆಸಲಾಗಿದೆ.ಮಗಳ ಜೀವನ ಚೆನ್ನಾಗಿರಲಿ ಎಂದು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಆಕೆಯನ್ನು ಸ್ಮಶಾನಕ್ಕೆ ಕಳುಹಿಸಲು ಮದುವೆ ಮಾಡಿಕೊಟ್ಟಂತೆ ಆಗಿದೆ ಎಂದು ರಶ್ಮಿ ಪೋಷಕರು ಕಣ್ಣೀರು ಹಾಕುತ್ತ ಅಳಲು ತೋಡಿಕೊಂಡಿದ್ದಾರೆ. ಏನೇ ಆಗಲಿ.. ನೂರಾರು ಕನಸು ಹೊತ್ತು ಸುಖಮಯ ಜೀವನ ಕಾಣಬೇಕಾದ ಗರ್ಭಿಣಿ ಹೆಂಡತಿಯನ್ನು ಮೃತ್ಯು ಕೂಪಕ್ಕೆ ತಳ್ಳಿದ ಭೂಪ ಪೊಲೀಸರ ಅತಿಥಿಯಾಗಿದ್ದಾನೆ…

Leave A Reply

Your email address will not be published.