Koragajja: ಕೊರಗಜ್ಜ ದೈವದ ಕುರಿತು ಬರ್ತಾ ಇದೆ ಹೊಸ ಸಿನಿಮಾ; ಸೆಟ್ಟೇರಿತು ‘ಕರಿ ಹೈದ ಕರಿ ಅಜ್ಜ’

ಕಾಂತಾರ ಸಿನಿಮಾ ಸೃಷ್ಟಿಸಿದ ಹವಾ ಒಂದಲ್ಲ ಎರಡಲ್ಲ. ಎಲ್ಲಾ ಕಡೆ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತುಳುನಾಡು, ತುಳುನಾಡಿನ ದೈವಗಳ ಚರ್ಚೆ ಎಲ್ಲಾ ಕಡೆ ಎಲ್ಲರ ಬಾಯಲ್ಲಿ ಬರುವಂತೆ ಮಾಡಿದೆ ಈ ಸಿನಿಮಾ. ಭೂತಾರಾಧನೆಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ ಈ ಸಿನಿಮಾ ಬೇರೆ ಬೇರೆ ಭಾಗದ ಜನರಿಗೆ ಇದರ ಬಗ್ಗೆ ಆಸಕ್ತಿ ಮೂಡುವ ಹಾಗೆ ಮಾಡಿದೆ. ಈ ನಡುವೆ ಕೊರಗಜ್ಜ ದೈವದ ಕುರಿತು ಹೊಸ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ‘ಕರಿ ಹೈದ ಕರಿ ಅಜ್ಜ’ (Kari Haida Kari Ajja) ಎಂದು ಹೆಸರು ಇಡಲಾಗಿದೆ. ಈ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ. ‘ಕರಿ ಹೈದ ಕರಿ ಅಜ್ಜ’ ಚಿತ್ರದ ಮೂಲಕ ಕೊರಗಜ್ಜ ದೈವದ (Koragajja) ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾದಲ್ಲಿ ಕಬೀರ್​ ಬೇಡಿ, ಶ್ರುತಿ, ಭವ್ಯ ಮುಂತಾದ ಖ್ಯಾತ ಕಲಾವಿದರು ನಟಿಸಲಿದ್ದಾರೆ.

‘ಕರಿ ಹೈದ ಕರಿ ಅಜ್ಜ’ ಚಿತ್ರವು ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಮೂಲಕ ನಿರ್ಮಾಣ ಆಗಲಿದೆ. ತ್ರಿವಿಕ್ರಮ್ ಸಪಲ್ಯ ಅವರು ಬಂಡವಾಳ ಹೂಡುತ್ತಿದ್ದಾರೆ. ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆಯಿತು. ಬೆಳ್ತಂಗಡಿ ತಾಲೂಕಿನ ಬಳ್ಳಮಂಜದ ಇತಿಹಾಸ ಪ್ರಸಿದ್ಧ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಶಾಸಕ ಶ್ರೀ ಹರೀಶ್ ಪೂಂಜ ಅವರು ಕ್ಯಾಮೆರಾ ಚಾಲನೆ ಮಾಡುವುದರ ಮೂಲಕ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿದರು. ಮಾತೃಶ್ರೀ ಕಮಲಾ ಕೆ. ಸಪಲ್ಯ ಆರಂಭ ಫಲಕ ತೋರಿಸಿದರು.
ಈ ಚಿತ್ರದಲ್ಲಿ ಕಬೀರ್ ಬೇಡಿ ಅವರು ಈ ವಿಶೇಷ ಪಾತ್ರ ಮಾಡಲಿದ್ದು, ಭರತ್ ಸೂರ್ಯ ಎಂಬ ಹೊಸ ಕಲಾವಿದನನ್ನು ಈ ಚಿತ್ರದ ಮೂಲಕ ಸಿನಿಜಗತ್ತಿಗೆ ಪರಿಚಯ ಮಾಡಲಾಗುತ್ತಿದೆ. ವಿದ್ಯಾಧರ್ ಶೆಟ್ಟಿ ಸಂಕಲನ, ಪವನ್ ವಿ. ಕುಮಾರ್, ಗಣೇಶ್ ಕೆಳಮನೆ ಛಾಯಾಗ್ರಹಣ, ಸುಧೀರ್-ಕೃಷ್ಣ ರವಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಕೊರಗಜ್ಜ ದೈವದ ಕುರಿತು ಸಿನಿಮಾ ಮಾಡಬೇಕು ಎಂದು ಈ ಮೊದಲಿನಿಂದಲೂ ಪ್ರಯತ್ನಗಳು ನಡೆದಿದ್ದವು. ಈಗ ಸುಧೀರ್​ ಅತ್ತಾವರ್​ ಅವರು ಸಾಕಷ್ಟು ಮಾಹಿತಿ ಕಲೆ ಹಾಕಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಕೊರಗಜ್ಜನ ಜನಾಂಗದ ಅನೇಕರೊಂದಿಗೆ ಚರ್ಚಿಸಿ, ಸುಮಾರು 12ನೇ ಶತಮಾನದ ಸಮಯದಲ್ಲಿದ್ದ ಕೊರಗಜ್ಜನ ನೈಜ ಬದುಕಿನ ಬಗ್ಗೆ ಯಾರಿಗೂ ತಿಳಿದಿರದಂತಹ ಸಾಕಷ್ಟು ವಿಷಯಗಳನ್ನು ಈ ಸಿನಿಮಾದ ಮೂಲಕ ಜನರಿಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಸಕ್ಸಸ್‌ ಕಾಣಲಿ. ಕಾಂತಾರ ಸಿನಿಮಾ ಹೇಗೆ ಜಗತ್ತಿನುದ್ದಗಲಕ್ಕೂ ನಮ್ಮ ಕರಾವಳಿ ಸೊಗಡು, ಭೂತಾರಾಧನೆಯನ್ನು ಪಸರಿಸಿತೋ ಹಾಗೆನೇ ಈ ಸಿನಿಮಾ ಕೂಡಾ ಯಶಸ್ಸು ಕಾಣಲಿ.

Leave A Reply