ಮಂಗಳೂರು : ಇದೊಂದು ವ್ಯವಸ್ಥಿತ ಜಾಲ ಎಂದ ಸಿಎಂ | ಮಂಗಳೂರು, ಕೊಯಮತ್ತೂರಿನಲ್ಲಿ ಉಗ್ರರು ಓಡಾಡಿರುವ ಶಂಕೆ

ಮಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ಪ್ರಕರಣವು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ, ಇದೊಂದು ಉಗ್ರರ ಕೃತ್ಯ , ಅವರು ಸಂಚು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ನಕಲಿ ಐಡಿ ಕಾರ್ಡ್, ನಕಲಿ ವಿಳಾಸ ಬಳಸಿ, ಈ ಕೃತ್ಯವನ್ನು ನಡೆಸಲಾಗಿದೆ. ಇನ್ನೂ ಈ ನಕಲಿ ವಿಳಾಸ ಹುಬ್ಬಳ್ಳಿಯದೆಂದು ತಿಳಿದುಬಂದಿದೆ. ಹಾಗಾಗಿ ಎನ್‍ಐಎ, ಐಬಿ ಸ್ಥಳದಲ್ಲೇ ಬೀಡು ಬಿಟ್ಟಿದೆ. ಅವರ ಜಾಡನ್ನು ಪತ್ತೆ ಹಚ್ಚಲು ಎನ್‍ಐಎ, ತನಿಖೆ ಮುಂದುವರೆಸಿದೆ.

ಇನ್ನೂ ಈ ಉಗ್ರರು ಮಂಗಳೂರು, ಕೊಯಮತ್ತೂರಿನಲ್ಲಿ ಓಡಾಡಿರುವ ಶಂಕೆ ಇದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಆ ಜಾಲವನ್ನು ಪತ್ತೆ ಮಾಡುತ್ತೇವೆ ಎಂದೂ ಕೂಡ ಹೇಳಿದ್ದಾರೆ.

ಶನಿವಾರ ಸಂಜೆ 5 ಗಂಟೆಯ ಹೊತ್ತಿಗೆ ಮಂಗಳೂರಿನ ಪಂಪ್‍ವೆಲ್‍ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ನಿಗೂಢವಾಗಿ ಸ್ಫೋಟಗೊಂಡಿದ್ದು, ದಾರಿ ಮಧ್ಯೆ ಸವಾರನೋರ್ವ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದಾನೆ ಮತ್ತು ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೋಲೀಸ್ ಠಾಣೆಯ ಎದುರು ಆಟೋ ಒಳಗೆ ಸ್ಫೋಟಗೊಂಡಿದ್ದು ಸವಾರನ ಕೈಯಲ್ಲಿದ್ದ ಕುಕ್ಕರ್ ಛಿದ್ರ ಛಿದ್ರಗೊಂಡಿತ್ತು.

ಇನ್ನೂ ಆಶ್ಚರ್ಯಕರ ಸಂಗತಿ ಏನೆಂದರೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿನಲ್ಲಿರುವಾಗಲೇ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ವಿಚಾರ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಇದೀಗ ಈ ಘಟನೆಯನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ.

Leave A Reply

Your email address will not be published.