ಹಿಜಾಬ್ ಪ್ರಕರಣದ ಕಾವು ತಗ್ಗುತ್ತಿರುವ ನಡುವೆ ಇದೀಗ ಲವ್ ಜಿಹಾದ್ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಹಿಂದು ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು , ತಮ್ಮ ಪ್ರೇಮದ ಬಲೆಯಲ್ಲಿ ಬೀಳಿಸಿ ನರಾಳಿಡಿಸುವ ಇಲ್ಲವೆ ಮೃತ್ಯು ಕೂಪಕ್ಕೆ ತಳ್ಳುತ್ತಿರುವ ಅನೇಕ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇವೆ.
ದೆಹಲಿಯ ಶ್ರದ್ದಾ ಪ್ರಕರಣದ ಬೆನ್ನಲ್ಲೆ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳೆದ 2 ತಿಂಗಳಿಂದ ಕೊಪ್ಪ ಮೂಲದ ಮೊಹಮ್ಮದ್ ರೋಫ್ ಎಂಬ ವ್ಯಕ್ತಿಯೊಬ್ಬ ಹಿಂದು ಯುವತಿಯೊಬ್ಬಳ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು, ಇದರ ಹಿಂದೆ ಲವ್ ಜಿಹಾದ್ (Love Jihad) ಸಂಚು ದಟ್ಟವಾಗಿದೆ ಎಂದು ಯುವತಿಯ ಸಹೋದರ ಆರೋಪಿಸಿದ್ದಾರೆ.
ಕೊಪ್ಪ ತಾಲೂಕಿನ ಶಾನುವಳ್ಳಿಯ ನಿವಾಸಿಯಾದ ಮನೋಜ್ ಅವರ ತಂಗಿಯ ಫೋಟೊವನ್ನು ಮೊಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನ್ನು ಗಮನಿಸಿದ್ದು, ತಕ್ಷಣ ಕೊಪ್ಪದ ಹರಿಹರಪುರದ ಠಾಣೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಇದು ಸೂಕ್ಷ್ಮ ವಿಚಾರವಾದ ಕಾರಣ ಜತೆಗೆ ಸೈಬರ್ ಕ್ರೈಂ ವ್ಯಾಪ್ತಿಗೆ ಒಳಪಡುತ್ತದೆ ಎಂದು ಚಿಕ್ಕಮಗಳೂರಿನ ಸಿಇಎನ್ ಕ್ರೈಂ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಹಿಂದು ಯುವತಿ ಮಾನಸ ಎಂಬಾಕೆಯ ಅಣ್ಣ ಮನೋಜ್ ಎಂಬುವವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನ್ನ ತಂಗಿಯ ಪೋಟೊಗಳನ್ನು ಮುಸ್ಲಿಂ ಯುವಕನೊಬ್ಬ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿರುವ ಕುರಿತು ದೂರು ದಾಖಲಿಸಿದ್ದಾರೆ. ಈಗಲೂ ಕೂಡ ಮೊಹಮ್ಮದ್ ಎಂಬಾತ ನನ್ನ ತಂಗಿ ಫೋಟೊವನ್ನು ಹರಿಬಿಡುತ್ತಿದ್ದು, ಇದರಿಂದಾಗಿ ನಮ್ಮ ಕುಟುಂಬದವರು ನೊಂದಿದ್ದೇವೆ ಎಂದಿದ್ದಾರೆ.
ಈ ಸಂಬಂಧ ಅಕ್ಟೋಬರ್ 30ರಂದು ಸಿಇಎನ್ ಠಾಣೆಗೆ ದೂರು ನೀಡಿದ್ದರು ಕೂಡ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಯುವತಿಯ ಮನೆಯವರು ಆರೋಪಿಸಿದ್ದಾರೆ. ದೂರು ನೀಡಿ ತಿಂಗಳು ಕಳೆದರೂ ಸಿಇಎನ್ ಠಾಣಾಧಿಕಾರಿ ಜಾಕೀರ್ ಹುಸೇನ್ ನೆಪ ಮಾತ್ರಕ್ಕೆ ಭರವಸೆ ನೀಡಿದ್ದು, ಆದರೆ, ಈ ಕ್ಷಣದವರೆಗೆ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಪತ್ರವನ್ನು ಬರೆದಿದ್ದಾರೆ.
ಎಫ್ಐಆರ್ ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಅಲ್ಲದೆ, ಉದ್ದೇಶಪೂರ್ವಕವಾಗಿ ಲವ್ ಜಿಹಾದ್ ಇದರ ಹಿಂದೆ ವ್ಯವಸ್ಥಿತ ಜನರು ಇರುವ ಶಂಕೆ ಇದ್ದು, ಹಾಗಾಗಿ, ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಯುವತಿಯ ಮನೆಯವರು ಮನವಿ ಸಲ್ಲಿಸಿದ್ದಾರೆ.