ಪ್ರೀತಿ ಪ್ರೇಮ ಪ್ರಣಯ..ಎಂದು ಡೇಟಿಂಗ್ ಆ್ಯಪ್ ಮೂಲಕ ಪ್ರೀತಿಯ ಬಲೆಗೆ ಸಿಲುಕಿ ತನ್ನ ಜೀವವನ್ನೇ ಬಲಿ ಪಡೆದುಕೊಂಡ ದೆಹಲಿಯ ಶ್ರದ್ದಾ ಪ್ರಕರಣ ಇಡೀ ಜಗತ್ತನ್ನೆ ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಿದ ಖಾಕಿ ಪಡೆಗೂ ಕೂಡ ಈ ಹೀನ ಕೃತ್ಯ ಎಸಗಿದ ಘಟನೆ ಕೇಳಿ ನಡುಕ ಹುಟ್ಟಿದೆ. ಈ ಪ್ರಕರಣದ ಬೆನ್ನಲ್ಲೆ ಮಹಿಳಾ ಆಯೋಗ ಎಚ್ಚೆತ್ತುಕೊಂಡು, ಯುವಜನತೆಯ ಹಾದಿ ತಪ್ಪಿಸುವ ಪ್ರಯತ್ನಕ್ಕೆ ಬ್ರೇಕ್ ನೀಡಲು ಮುಂದಾಗಿದೆ.
ಹೌದು!!!. ದೆಹಲಿಯಲ್ಲಿ ಶ್ರದ್ಧಾ ಭೀಕರ ಕೊಲೆಯ ಬಳಿಕ ಡೇಟಿಂಗ್ ಆಪ್ ಹಾವಳಿ ಹಾಗೂ ಲೀವ್ಇನ್ ರಿಲೇಷನ್ಶಿಪ್ ವಿಚಾರದಲ್ಲಿ ಯುವ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಪ್ರೀತಿಯ ಬಲೆಗೆ ಸಿಲುಕಿಸಿ , ಹಾದಿ ತಪ್ಪಿಸುವ ಪ್ರಯತ್ನ ದೇಶದಲ್ಲಿ ಮಾತ್ರವಲ್ಲದೇ, ಕರ್ನಾಟಕದಲ್ಲೂ ಕೂಡ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಮಹಿಳಾ ಆಯೋಗ ಫೀಲ್ಡ್ ಗಿಳಿದಿದೆ.
ದೆಹಲಿಯ ಶ್ರದ್ದಾ ವಿಕಾಸ್ ವಾಲ್ಕರ್ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದ್ದು, ಕಿರಾತಕನ ಜೊತೆ ಡೇಟಿಂಗ್ ಆಪ್ ಚಾಟಿಂಗ್, ಲೀವ್ ಇನ್ ರಿಲೇಷನ್ನಲ್ಲಿ ಇಲ್ಲದೇ ಇದ್ದಿದ್ದರೆ ಬಹುಶಃ ಶ್ರದ್ಧಾಳಿಗೆ ಈ ರೀತಿಯ ದಾರುಣ ಸಾವು ಕಾಣುತ್ತಿರಲಿಲ್ಲವೇನೋ!!!
ಡೇಟಿಂಗ್ ಆಪ್ಗಳ ಮೂಲಕ ಮುಖವಾಡ ಧರಿಸಿಕೊಂಡಿರುವ ಇಂತಹ ವಿಕೃತ ಕಾಮಿ ವ್ಯಕ್ತಿತ್ವದ ಕ್ರಿಮಿಗಳ ಕಾಟದಿಂದ, ನರರಾಕ್ಷಸರ ಜೊತೆ ಲೀವ್ ಇನ್ ರಿಲೇಷನ್ನಲ್ಲಿ ಇರುವುದರಿಂದ ಅದೆಷ್ಟೋ ಹೆಣ್ಣು ಮಕ್ಕಳ ಜೀವನ ಬೀದಿಗೆ ಬಂದು ಬದುಕು ಬರ್ಬಾದ್ ಆಗಿಬಿಟ್ಟಿದೆ. ಕರ್ನಾಟಕದಲ್ಲಿ ಅದರಲ್ಲೂ ನಗರ ಪ್ರದೇಶದಲ್ಲಿ ಈ ಆ್ಯಪ್ ಗಳ ರಿಲೇಷನ್ಶಿಪ್ನ ವಿಷವರ್ತುಲದಲ್ಲಿ ಹೆಣ್ಣುಮಕ್ಕಳು ಸಿಕ್ಕಿಹಾಕಿಕೊಂಡಿದ್ದಾರೆ. ಹೀಗಾಗಿ ಜಾಗೃತಿಗಾಗಿ ಕರ್ನಾಟಕ ಮಹಿಳಾ ಆಯೋಗ ಅಖಾಡಕ್ಕೆ ಇಳಿದಿದ್ದಾರೆ.
ಕಾಲೇಜುಗಳಲ್ಲಿ `ಜಾಗೃತಿ’ ಕ್ಲಾಸ್: ರಾಜ್ಯಾದ್ಯಂತ ಕಾಲೇಜುಗಳಲ್ಲಿ ಮಹಿಳಾ ಆಯೋಗದ ಟೀಂಗಳಿಂದ ಸ್ಪೆಷಲ್ ಕ್ಲಾಸ್ ನಡೆಸಲಾಗುತ್ತದೆ. ಸೋಷಿಯಲ್ ಮೀಡಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುವ ಜೊತೆಗೆ ಸ್ವಾವಲಂಬಿ ಬದುಕಿನ ಬಗ್ಗೆ ತರಗತಿಗಳಲ್ಲಿ ಹೇಳಿಕೊಡಲಾಗುತ್ತದೆ.
ಇತ್ತೀಚಿನ ದಿನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಲೀವ್ ಇನ್ ರಿಲೇಷನ್ಗಳಿಂದ ಆಗಬಹುದಾದ ತೊಡಕಿನ ಬಗ್ಗೆ ವಿವರಣೆ ನೀಡಲಾಗುತ್ತದೆ. ಈ ರೀತಿಯ ಆ್ಯಪ್ಗಳಿಂದ ಆಗಲಿರುವ ತೊಂದರೆಯ ಬಗ್ಗೆ ತಜ್ಞರನ್ನು ಕರೆಸಿ ವಿಶೇಷ ತರಗತಿ ನಡೆಸಲಾಗುತ್ತದೆ. ಕಾಲೇಜು ಮಾತ್ರವಲ್ಲದೇ ಮಹಿಳಾ ಉದ್ಯೋಗಿಗಳು ಇರುವ ಸಂಸ್ಥೆಯಲ್ಲೂ ಕೂಡ ಜಾಗೃತಿ ತರಗತಿ ನಡೆಸಲಾಗುತ್ತದೆ.
ಈಗಾಗಲೇ ರಾಜ್ಯದಲ್ಲಿ ಲಿವ್ ಇನ್ ರಿಲೇಷನ್ ಶಿಪ್ನಿಂದಾಗಿ ಸಾಕಷ್ಟು ಮಹಿಳೆಯರು ತೊಂದರೆ ಅನುಭವಿಸಿದ್ದು ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ. ಜೊತೆಗೆ ಕಾಲೇಜ್ ಓದುವ ವಿದ್ಯಾರ್ಥಿಗಳು ಈ ಆಪ್ಗಳಿಗೆ ಆಡಿಕ್ಟ್ ಆಗಿರುವುದರಿಂದ ಹೊರಬರುವ ಬಗ್ಗೆ ಕೂಡ ಹೆಚ್ಚಿನ ಜಾಗೃತಿಯ ಅವಶ್ಯಕತೆ ಇದೆ.