Delhi Murder : ಈ ಒಂದು ಸುಳ್ಳಿನಿಂದ ಸಿಕ್ಕಿಬಿದ್ದಿದ್ದ ಅಫ್ತಾಬ್ | ಅಷ್ಟಕ್ಕೂ ಆ ಸುಳ್ಳು ಯಾವುದು?

ಪ್ರಿಯಕರ ಅಫ್ತಾಬ್ ಪೂನಾವಾಲಾನಿಂದಲೇ ಶ್ರದ್ಧಾ ವಾಕರ್‌ ಭೀಕರ ಹತ್ಯೆಗೀಡಾದಳು. ಅಫ್ತಾಬ್ ಹೇಳಿದ ಈ ಒಂದು ಸುಳ್ಳಿನಿಂದ ಆತನು ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾದರೆ ಆತ ಹೇಳಿದ ಸುಳ್ಳಾದರೂ ಏನು?

ವಸೈ ಮೂಲದ ಅಫ್ತಾಬ್ ಪೂನಾವಾಲಾ ಮತ್ತು ಶ್ರದ್ಧಾ ವಾಕರ್ ಅವರು ಡೇಟಿಂಗ್ ಅಪ್ಲಿಕೇಶನ್‌ ಮುಖಾಂತರ 2019 ರಲ್ಲಿ ಭೇಟಿಯಾಗಿದ್ದರು. ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ಮುಂಬೈನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ತನ್ನ ಲಿವ್‌ ಇನ್‌ ಸಂಗಾತಿ ಶ್ರದ್ಧಾ ವಾಕರ್‌ ನ್ನು ಕೊಂದು 35 ತುಂಡುಗಳಾಗಿ ಕತ್ತರಿಸಿ, ಮೃತದೇಹದ ತುಂಡುಗಳನ್ನು ದೆಹಲಿಯ ಕಾಡಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ ಆರೋಪಿ ಅಫ್ತಾಬ್ ಪೂನಾವಾಲಾ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

ಪೊಲೀಸರು ಹೇಳುವಂತೆ ಇವನು ಹೇಳಿದ ಆ ಒಂದು ಸುಳ್ಳಿನಿಂದ ಆತನ ಕ್ರೌರ್ಯ ಬಯಲಾಗಿದೆ ಎಂಬ ಸ್ಫೋಟಕ ಮಾಹಿತಿ ತಿಳಿಸಿದ್ದಾರೆ. ಶ್ರದ್ಧಾ ವಾಕರ್ ಅವರ ಅಪ್ಪ ಕಳೆದ ತಿಂಗಳು ಮುಂಬೈ ಬಳಿಯ ವಸೈನಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ಅಕ್ಟೋಬರ್ 26 ರಂದು ಅಫ್ತಾಬ್ ಪೂನಾವಾಲಾನನ್ನು ವಿಚಾರಣೆಗೆ ಕರೆಯಲಾಯಿತು. ಆಗ ಆತನು ಆಕೆ ಫ್ಲ್ಯಾಟ್ ತೊರೆಯುವಾಗ ಮೊಬೈಲ್ ಫೋನ್ ನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾಳೆ. ಆಕೆಯ ಬಟ್ಟೆ, ಇತರ ವಸ್ತುಗಳನ್ನು ಇಲ್ಲೇ ಬಿಟ್ಟಿದ್ದಾಳೆ ಎಂದು ಅಫ್ತಾಬ್ ಪೊಲೀಸರಿಗೆ ಹೇಳಿದ್ದ.

ತನಿಖಾಧಿಕಾರಿಗಳು ಫೋನ್ ಚಟುವಟಿಕೆ, ಕರೆ ವಿವರಗಳು ಮತ್ತು ಸಿಗ್ನಲ್ ಸ್ಥಳವನ್ನು ಟ್ರ್ಯಾಕ್ ಮಾಡಿದಾಗ, ಸ್ಥಳ ಮೆಹ್ರೌಲಿ, ಅವರು ಒಟ್ಟಿಗೆ ಇರುತ್ತಿದ್ದ ಪ್ರದೇಶ. ಆದರೆ ಮೇ 22 ರಂದು ಅವಳು ಹೋದಾಗಿನಿಂದ ತಾನು ಅವಳೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಅಫ್ತಾಬ್ ಪೊಲೀಸರಿಗೆ ಹೇಳಿದ್ದರಿಂದ ಇದು ಅನುಮಾನಗಳನ್ನು ಹೆಚ್ಚಿಸಿತು. ಮೇ 22 ರಂದು ಶ್ರದ್ಧಾ ಆತನನ್ನು ಬಿಟ್ಟು ಹೋಗಿದ್ದರೆ ಅವಳ ಸ್ಥಳ ಇನ್ನೂ ಮೆಹ್ರೌಲಿ ಎಂದು ಯಾಕಿದೆ? ಎಂದು ಪೊಲೀಸರು ಅಫ್ತಾಬ್ ಪೂನಾವಾಲಾನಲ್ಲಿ ಪ್ರಶ್ನಿಸಿದಾಗ ಆತ ಈ ಭಯಾನಕ ಕೃತ್ಯವನ್ನು ಪೊಲೀಸರ ಮುಂದೆ ಹೇಳಿದ್ದಾನೆ. ಇನ್‌ಸ್ಟಾಗ್ರಾಮ್ ಚಾಟ್‌ ಮತ್ತು ಬ್ಯಾಂಕ್ ಪಾವತಿ ಮಾಡಿ ಶ್ರದ್ಧಾ ತನ್ನನ್ನು ಬಿಟ್ಟು ಹೋಗಿದ್ದಾಳೆ ಎಂದು ತೋರಿಸುವುದಕ್ಕಾಗಿ ಆರೋಪಿ ಶ್ರಮಿಸಿದ್ದ. ಆದರೆ ಈ ನಾಟಕವೇ ಆತನಿಗೆ ಮುಳುವಾಯಿತು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.

ಮೇ 31 ರಂದು ಮಾಡಿದ ಒಂದು ಚಾಟ್‌ನಲ್ಲಿ ಫೋನ್‌ನ ಸ್ಥಳವನ್ನು ಮತ್ತೆ ಮೆಹ್ರೌಲಿ ಎಂದು ತೋರಿಸಿದೆ. ಇದರಿಂದ ಅಫ್ತಾಬ್, ಶ್ರದ್ಧಾಳ ಸ್ನೇಹಿತರೊಂದಿಗೆ ಚಾಟ್ ಮಾಡಲು ಆಕೆಯ Instagram ಖಾತೆಯನ್ನು ಬಳಸಿದ್ದಾನೆ ಎಂದು ಕಂಡುಕೊಂಡರು.

ಅಫ್ತಾಬ್ ಅವಳ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುತ್ತಿದ್ದ. ಬ್ಯಾಂಕ್ ಅಧಿಕಾರಿಗಳು ಶ್ರದ್ಧಾಳ ಮುಂಬೈ ವಿಳಾಸಕ್ಕೆ ಹೋಗದಂತೆ ತಡೆಯಲು ಅಫ್ತಾಬ್ ಈ ಪ್ಲಾನ್ ಮಾಡಿದ್ದ. ಮೇ 22 ಮತ್ತು 26 ರ ನಡುವೆ ಶ್ರದ್ಧಾ ವಾಕರ್ ಖಾತೆಯಿಂದ ಫೋನ್‌ನಲ್ಲಿರುವ ಬ್ಯಾಂಕಿಂಗ್ ಅಪ್ಲಿಕೇಶನ್ ಬಳಸಿ ಅಫ್ತಾಬ್ ಪೂನಾವಾಲಾ ₹ 54,000 ಅನ್ನು ವರ್ಗಾಯಿಸಿದ್ದಾನೆ. ಆದರೆ ಪೊಲೀಸರ ಮುಂದೆ ಆಕೆಯ ಪಾಸ್‌ವರ್ಡ್‌ಗಳನ್ನು ಹೊಂದಿದ್ದರಿಂದ ಬ್ಯಾಂಕ್ ವರ್ಗಾವಣೆ ಮಾಡಿದ್ದೇನೆ ಎಂದು ತಿಳಿಸಿದ್ದ.

ಮೇ 22 ರಂದು ಜಗಳವಾಡಿ ತಮ್ಮ ಬಾಡಿಗೆ ಫ್ಲಾಟ್ ಅನ್ನು ಆಕೆ ತೊರೆದಿದ್ದಾಳೆ ಎಂದು ಆಗ ಅಫ್ತಾಬ್ ಪೊಲೀಸರಿಗೆ ಹೇಳಿದ್ದ. ಹೀಗೆ ಹೇಳಿದ್ದ ನಾಲ್ಕು ದಿನಗಳ ಹಿಂದೆಯೇ ಅಫ್ತಾಬ್ ಶ್ರದ್ಧಾಳನ್ನು ಕೊಲೆ ಮಾಡಿದ್ದ ಎಂದು ನಂತರ ಪತ್ತೆಯಾಗಿದೆ. ಅಫ್ತಾಬ್ 18 ದಿನಗಳ ಕಾಲ ತಮ್ಮ ಬಾಡಿಗೆ ಫ್ಲಾಟ್‌ನ ಸಮೀಪವಿರುವ ಕಾಡಿನಲ್ಲಿ ಎಸೆದ ಆಕೆಯ ದೇಹದ 35 ತುಂಡುಗಳಲ್ಲಿ ಕನಿಷ್ಠ 10 ತುಂಡುಗಳು ಪೊಲೀಸರಿಗೆ ಸಿಕ್ಕಿದೆ.

Leave A Reply

Your email address will not be published.