” ಮಕ್ಕಳೇ ದೇಶದ ಮಾಣಿಕ್ಯ ಮಕ್ಕಳೇ ದೇಶದ ಸಂಪತ್ತು “

ಮಕ್ಕಳೆಂದರೆ ಒಂದು ರೀತಿಯ ದೇವರ ಅವತಾರ ಎಂದು ಹೇಳಬಹುದು. ಮುದ್ದು ಮುದ್ದಾದ ಮಕ್ಕಳನ್ನು ಕಂಡರೆ ಎಲ್ಲರಿಗೂ ಇಷ್ಟವೇ. ಅದರಲ್ಲೂ ನನಗಂತೂ ತುಂಬಾ ಇಷ್ಟ. ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಎಂದಾಕ್ಷಣ ನೆನಪಾಗುವುದು ನಮ್ಮ ಶಾಲೆ,ಆಟ, ಪಾಠ ಶಾಲೆಯಲ್ಲಿ ಮಾಡಿದ ಸ್ನೇಹಿತರೊಂದಿಗಿನ ಗಲಾಟೆ ಪಡೆದ ಬಹುಮಾನ, ಸಿಹಿತಿಂಡಿ ಹಾಗೂ ನಮ್ಮ ನೆಚ್ಚಿನ ಚಾಚಾ ನೆಹರು ಸವಿ ನೆನಪು..!
ಇವೆಲ್ಲ ನೆನಪುಗಳನ್ನು ಶಾಲೆಗೆ ಹೋಗುವ ಮಕ್ಕಳಲ್ಲಿ ಕಾಣಬಹುದು. ಆದರೆ ಶಾಲೆಗೆ ಹೋಗದೆ ಮಧ್ಯದಲ್ಲಿ ಶಾಲೆಯನ್ನು ಬಿಟ್ಟ ಬೀದಿ ಮಕ್ಕಳ ಬಾಲಕಾರ್ಮಿಕರು ಅಪಾಯದ ಅಂಚಿನಲ್ಲಿರುವ ಮಕ್ಕಳ ದಿನಾಚರಣೆಯನ್ನು ಮಾಡವರು ಯಾರೆಂದು ಪ್ರಶ್ನೆಯಾಗಿ ಉಳಿದಿದೆ. ಇಂದಿನ ಯುವ ಜನಾಂಗದವರು ಆಧುನಿಕತೆಯತ್ತ ಪಯಣವನ್ನು ಮಾಡುತ್ತಿರುವುದರಿಂದ ಮಕ್ಕಳ ಹಕ್ಕು ಬಾಧ್ಯತೆಗಳಿಗೆ ರಕ್ಷಣೆ ನೀಡಿ, ಅವರನ್ನು ಇತರ ಸಹಪಾಠಿಗಳೊಂದಿಗೆ ಮಕ್ಕಳ ಹಾಗೆ ಜೀವನ ಕಳೆಯುವಂತೆ ಮಾಡುವ ಮತ್ತು ಅವರನ್ನು ಸಮಾಜದ ಹಾಗೂ ಸಮುದಾಯದ ಮುಖ್ಯ ವಾಹಿನಿಗೆ ತರುವ ಜವಾಬ್ದಾರಿ ಯಾರದು.? ಎಂಬ ಪ್ರಶ್ನೆಗಳಿಗೆ ಸೂಕ್ಷ್ಮತೆಯಿಂದ ಉತ್ತರವನ್ನು ಹುಡುಕಬೇಕಾದ ಸಂದರ್ಭ ಬಂದಿದೆ. ಮಕ್ಕಳ ಮೇಲೆ ದಿವಂಗತ ಪಂಡಿತ್ ಜವಾಹರ್ ಲಾಲ್ ನೆಹರು
ರವರಿಗೆ ಇದ್ದಂತಹ ಕಾಳಜಿ ಮತ್ತು ಪ್ರೀತಿ,ಸಹನೆ ವಾತ್ಸಲ್ಯ,ಮಮತೆ ಜನ ಸಾಮಾನ್ಯರಲ್ಲೂಮೂಡಬೇಕಾಗಿದೆ.

ಮಕ್ಕಳ ಹಕ್ಕುಗಳ ಮತ್ತು ಶಿಕ್ಷಣದ ಅರಿವನ್ನು ಮೂಡಿಸುವ ಉದ್ದೇಶದಿಂದ ನೆಹರುರವರ ಜನ್ಮದಿನವಾದ ನವೆಂಬರ್ 14ರಂದು ಮಕ್ಕಳ ದಿನವನ್ನಾಗಿ ಆಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಎಲ್ಲಾ ದೇಶಗಳಲ್ಲಿಯೂ ಮಕ್ಕಳ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಇಂದಿನ ಮಕ್ಕಳೇ ದೇಶದ ಮುಂದಿನ ಪ್ರಜೆಗಳು ಮಕ್ಕಳೇ ದೇಶದ ಮಾಣಿಕ್ಯ.ಮಕ್ಕಳೇ ಆಸ್ತಿ ಎಂಬ ಮಾತುಗಳನ್ನು ಕೇಳುತ್ತಾ ಬಂದಿದ್ದೇವೆ. ಆದರೆ ಎಲ್ಲಾ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸುವ ಜವಾಬ್ದಾರಿಯು ತಂದೆ, ತಾಯಿ ಮತ್ತು ಶಿಕ್ಷಕ ಸಮಾಜದ ಕರ್ತವ್ಯವಾಗಿದೆ. ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಸಮಾನ ಅವಕಾಶ ನೀಡಬೇಕು. ಮಕ್ಕಳನ್ನು ದೇಶದ ಆಸ್ತಿಯೆಂದು ಪ್ರತಿಬಿಂಬಿಸುವ ನಾವು ಮಕ್ಕಳ ಹಕ್ಕುಗಳ ಕಡೆಗೆ ಹೆಚ್ಚಿನ ಒತ್ತು ನೀಡಬೇಕು.

“ಮಕ್ಕಳಿಗೆ ಆಸ್ತಿ ಮಾಡಿ ಕೊಡುವ ಬದಲು ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಬೇಕು” ಎಂಬ ಮಾತನ್ನು ಶಿವರಾಮ ಕಾರಂತರು ಹೇಳಿರುವ ಹಾಗೆ ಪೋಷಕರು ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸಬೇಕು. ಹೀಗಾಗಿ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ..? ಎಂಬ ಗಾದೆ ಮಾತಿನಂತೆ ಮಕ್ಕಳಿಗೆ ಸಣ್ಣವರಿದ್ದಾಗಲೇ ಒಳ್ಳೆಯ ಗುಣಗಳನ್ನು ಕಲಿಸೋಣ. ಮಕ್ಕಳ ಬಗ್ಗೆ ಹೇಳಲು ಹೊರಟರೆ ದಿವಸಗಳು ಸಾಲದು ದಿನಗಳು ಸಲ್ಲದು.
ಇಂದು ನಾವೆಲ್ಲರೂ ನಮ್ಮ ಮಕ್ಕಳ ಮುಗ್ಧತೆ ಹಾಗೂ ಪರಿಶುದ್ಧತೆಯನ್ನು ಆಚರಿಸೋಣ. ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಅವರು ಅಮೂಲ್ಯ. ಏಕೆಂದರೆ ಅವರು ನಮ್ಮ ಭವಿಷ್ಯ.

ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು
ಕಿಶನ್ ಎಂ ಪವಿತ್ರ ನಿಲಯ ಪೆರುವಾಜೆ.

Leave A Reply

Your email address will not be published.