ವಾಟ್ಸಪ್ ಮೂಲಕ ಬಂದ ಸಂದೇಶ ಓರ್ವನ ಪ್ರಾಣ ಕಸಿಯಿತು | ದೇಹದಾರ್ಢ್ಯ ಹೆಚ್ಚಲು ಇದನ್ನು ತಿಂದ ವ್ಯಕ್ತಿ ದಾರುಣ ಸಾವು!

ಸೋಷಿಯಲ್ ಮೀಡಿಯಾದಿಂದ ಎಷ್ಟು ಒಳ್ಳೆದಿದೆಯೋ ಅಷ್ಟೇ ಕೆಟ್ಟದೂ ಕೂಡ ಇದೆ. ಎಷ್ಟೋ ಜನರು ಸೋಷಿಯಲ್ ಮೀಡಿಯಾದಲ್ಲಿ ಬರುವ ಸಂದೇಶಗಳನ್ನು ಸತ್ಯವೆಂದು ನಂಬಿ ಇನ್ನೇನೋ ಅನಾಹುತ ಮಾಡಿಕೊಂಡಿರುವ ಘಟನೆಗಳು ಸಾಕಷ್ಟಿವೆ. ಅಂತಹದೇ ಆಘಾತಕಾರಿ ಘಟನೆ ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದಿದೆ.

ಪ್ಲೇಮ್ ಲಿಲ್ಲಿ ಗಡ್ಡೆ ತಿಂದರೆ ದೇಹದಾರ್ಢ್ಯ ವೃದ್ಧಿಯಾಗುತ್ತದೆ ಎಂಬ ಸಂದೇಶವೊಂದು ಕಾನ್ಸ್‌ಟೇಬಲ್ ಅಭ್ಯರ್ಥಿ ಮತ್ತು ಆತನ ಗೆಳೆಯನಿಗೆ ಬಂದಿದೆ. ಈ ವಾಟ್ಸಾಪ್ ಸಂದೇಶವನ್ನು ಸತ್ಯವೆಂದು ನಂಬಿದ ಇಬ್ಬರೂ ಕೂಡ ಫ್ಲೇಮ್ ಲಿಲ್ಲಿ ಗಡ್ಡೆ ತಿಂದು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ಅಸ್ವಸ್ಥರಾದ ಕಾನ್ಸ್ ಟೇಬಲ್ ಅಭ್ಯರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆತನ ಗೆಳೆಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಪ್ರಕಾರ, ತಿರುಪತ್ತೂರಿನ ಮಿನ್ನೂರಿನ ಲೋಗನಾಥನ್ (25) ಮತ್ತು ಸಮೀಪದ ಗ್ರಾಮದ ರತ್ನಂ ಎಂಬಾತನೊಂದಿಗೆ ಖಾಸಗಿ ಕ್ವಾರಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಲೋಗನಾಥನ್ ಪೊಲೀಸ್ ಪಡೆಗೆ ಸೇರಲು ಬಹಳ ಆಸಕ್ತಿ ಹೊಂದಿದ್ದರು. ಪೋಲಿಸ್ ಆಗಬೇಕು ಎಂದು ಸಾಕಷ್ಟು ಕನಸು ಕಂಡಿದ್ದರು. ಹಾಗೇ ತಮಗೆ ಬಂದ ವಾಟ್ಸಾಪ್ ಸಂದೇಶದಲ್ಲಿ ಪ್ಲೇಮ್ ಲಿಲ್ಲಿ ಗಡ್ಡೆ ತಿಂದರೆ ದೇಹದಾರ್ಢ್ಯ ವೃದ್ಧಿಯಾಗುತ್ತದೆ ಎಂದಿತ್ತು.

ಹಾಗಾಗಿ ಪೊಲೀಸ್ ಇಲಾಖೆ ನಡೆಸಿದ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ವಾಟ್ಸಾಪ್ ಸಂದೇಶವನ್ನು ನೋಡಿದ ಅವರು ಫ್ಲೇಮ್ ಲಿಲ್ಲಿ ಗಡ್ಡೆ ತಿಂದಿದ್ದಾರೆ. ಜೊತೆಗೆ ಕೆಲಸ ಮಾಡಿದ ರತ್ನಂ ಸಹ ಇದನ್ನು ತಿಂದಿದ್ದಾರೆ. ಇದನ್ನು ತಿಂದ ಕೂಡಲೇ ಇಬ್ಬರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥತೆಯಿಂದ ಬಳಲುತ್ತಿದ್ದ ಈ ಇಬ್ಬರನ್ನು ತಕ್ಷಣವೇ ಕುಟುಂಬಸ್ಥರು ಚಿಕಿತ್ಸೆಗಾಗಿ ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾಗಲೇ ಲೋಗನಾಥನ್ ಸ್ಥಿತಿ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ಆ ಬಳಿಕ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಾಗಲೇ ಲೋಗನಾಥನ್ ಮೃತಪಟ್ಟಿದ್ದಾರೆ.

ಘಟನೆ ಬಗ್ಗೆ ಅಂಬೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಪೇದೆಯಾಗುವ ಆಸಕ್ತಿ ಇದ್ದರಿಂದ ಲೋಗನಾಥನ್ ನಿತ್ಯವೂ ವ್ಯಾಯಾಮ ಮಾಡುತ್ತಿದ್ದರು. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ದೇಹವನ್ನು ಕಟ್ಟುಮಸ್ತಾಗಿ ಉಳಿಸಿಕೊಳ್ಳಲು ಪ್ಲೇಮ್ ಲಿಲ್ಲಿ ಗಡ್ಡೆ ತಿನ್ನುವಂತೆ ವಾಟ್ಸಾಪ್‌ನಲ್ಲಿ ಸಂದೇಶವೊಂದು ಬಂದಿದೆ. ಹೀಗಾಗಿ ಅವರಿಬ್ಬರು ಅದನ್ನು ತಿಂದಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಈಗಾಗಲೇ ತನಿಖೆ ಮುಂದುವರೆಸಿದ್ದಾರೆ.

Leave A Reply

Your email address will not be published.