ಕೆಲವೊಮ್ಮೆ ಬೇರೆಯವರ ಮಾತು ಕೇಳಿ ಸ್ವತಃ ತಾವೇ ವೈದ್ಯರಂತೆ ಮದ್ದು ಮಾಡಲು ಹೋದರೆ ಪ್ರಮಾದಗಳು ಉಂಟಾಗುವ ಸಾಧ್ಯತೆಗಳು ಕೂಡ ಇವೆ. ಇದೇ ರೀತಿಯ ಪ್ರಕರಣವೊಂದು ಮುನ್ನಲೆಗೆ ಬಂದಿದೆ.
ಹೌದು!!..ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಧರ್ಮೇಂದ್ರ ಎಂಬ ಯುವಕ ತನ್ನ ಕೈಯ ನೋವನ್ನು ಗುಣಪಡಿಸುವ ಸಲುವಾಗಿ ಸೋರೆಕಾಯಿ ರಸವನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್ ಮೂಲಕ ಕಲಿತುಕೊಂಡು ಜ್ಯೂಸ್ ಅನ್ನು ಕುಡಿದು ಸಾವನ್ನಪ್ಪಿರುವ ವಿದ್ರಾವಕ ಘಟನೆ ನಡೆದಿದೆ.
ತಮ್ಮ ಕೈ ನೋವನ್ನು ಗುಣಪಡಿಸಲು ಯೂಟ್ಯೂಬ್ನಲ್ಲಿ ತೋರಿಸಿದ ಪ್ರಿಸ್ಕ್ರಿಪ್ಷನ್ ಪ್ರಕಾರ ಸೋರೆಕಾಯಿ ರಸವನ್ನು ತಯಾರಿಸಿದ್ದಾರೆ ಎನ್ನಲಾಗಿದ್ದು, ಸೋರೆಕಾಯಿ ರಸವನ್ನು ತಯಾರಿಸಿದ ಬಳಿಕ ರಸವನ್ನು ಕುಡಿದಿದ್ದಾರೆ. ಸ್ವಲ್ಪ ಸಮಯದ ಬಳಿಕ ಧರ್ಮೇಂದ್ರ ಅವರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಡಲು ಪ್ರಾರಂಭಿಸಿದ್ದು, ಕುಟುಂಬವು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಚಿಕಿತ್ಸೆಯ ಸಮಯದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಪ್ರಸ್ತುತ, ಮೃತರ ಕುಟುಂಬವು ಇಡೀ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಮದ್ಯೆ ಪೊಲೀಸರು ಇಡೀ ವಿಷಯದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಹಾಗಾಗಿ, ಪೊಲೀಸರು ಮೃತರ ಶವದ ಮರಣೋತ್ತರ ಪರೀಕ್ಷೆಯನ್ನು ಮಾಡಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಹೊರ ಬಂದ ಬಳಿಕವಷ್ಟೆ ಧರ್ಮೇಂದ್ರ ಅವರ ಸಾವಿಗೆ ಕಾರಣವೇನು ಎಂಬುದು ಬಹಿರಂಗವಾಗ ಬೇಕಾಗಿದೆ. ಯಾವುದೇ ಮದ್ದು ಸೇವಿಸುವ ಮೊದಲು ವೈದ್ಯರ ಇಲ್ಲವೇ ನುರಿತವರ ಸಲಹೆ ಪಡೆಯುವುದು ಸೂಕ್ತ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿದ್ದು, ಕೆಲವೊಂದು ಆಹಾರ ಕ್ರಮಗಳು ಕೆಲವರಿಗೆ ಹೊಂದಿಕೆಯಾಗುವುದಿಲ್ಲ ಹಾಗಾಗಿ, ಏನೋ ಮಾಡಲು ಹೋಗಿ ಮತ್ತೊಂದು ಅವಾಂತರ ಎದುರಾಗುವ ಬದಲಿಗೆ ವೈದ್ಯರ ಸಲಹೆ ಪಡೆಯುವುದು ಮುಖ್ಯವಾಗುತ್ತದೆ.