ಅಭಿಮಾನಿ ಕಲ್ಪನೆಯಲ್ಲಿ ಕಾಂತಾರದ ಶಿವ | ‘ಪುನೀತ್’ ಶಿವನಾಗಿ ಮೂಡಿದಾಗ !!!
ಎಲ್ಲೆಡೆ ಧೂಳೆಬ್ಬಿಸಿದ್ದ ಕಾಂತಾರ ಸಿನಿಮಾ ಕರಾವಳಿಯ ಅದ್ಭುತ ಕಲಾವಿದ ರಿಷಬ್ ಶೆಟ್ಟಿಯ ನಟನೆಯಲ್ಲಿ ಹೊರ ಹೊಮ್ಮಿದೆ. ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ ಬಗ್ಗೆ ಪರಭಾಷೆ ಮಂದಿ ಕೂಡ ಶಹಭಾಷ್ಗಿರಿ ನೀಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಈ ಸಿನಿಮಾ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಈ ನಡುವೆ ಪುನೀತ್ ರಾಜ್ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದ್ದು, ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಬಗ್ಗೆ ತಿಳಿಸಿಕೊಡುವ ಈ ಸಾಕ್ಷ್ಯಚಿತ್ರಕ್ಕೆ ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ. ಇಂದು ಅಪ್ಪು ನಮ್ಮೊಂದಿಗೆ ಇರದಿದ್ದರೂ ಕೂಡ ಕಾಣದ ದೈವ ಎಂದಿಗೂ ನಮ್ಮ ಹೃದಯದಲ್ಲಿ ಅಜಾರಮರ ಎಂದು ಅಪ್ಪು ಅಭಿಮಾನಿಗಳು ನಂಬಿದ್ದಾರೆ.
ಕರಾವಳಿಯ ಕಲೆಯ ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ಸಿನಿಮಾ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿ ಜನಪ್ರಿಯತೆ ಗಳಿಸಿದ್ದು ಗೊತ್ತಿರುವ ವಿಚಾರವೇ!!!.. ಇದೀಗ ಕನ್ನಡದ ಹಿಟ್ ಮೂವಿಯಾಗಿರುವ ಕಾಂತಾರ ಅಭಿಮಾನಿಗಳ ಚಕ್ರವರ್ತಿ ಅಪ್ಪು ನಟಿಸಿದ್ದರೆ ಹೇಗಿರುತ್ತಿತ್ತು??? ಎಂದು ಊಹಿಸಿದ್ದಿರಾ??
ಆರಂಭದಲ್ಲಿ ಈ ಕಥೆಯನ್ನು ಪುನೀತ್ ರಾಜ್ಕುಮಾರ್ ಅವರಿಗೆ ಹೇಳಲಾಗಿದ್ದು, ಆದರೆ, ಕಾರಣಾಂತರ ಅಪ್ಪು ಈ ಚಿತ್ರದಲ್ಲಿ ನಟಿಸಲಿಲ್ಲ. ಒಂದು ವೇಳೆ ನಟಿಸಿದ್ದರೆ ಅವರ ಗೆಟಪ್ ಹೇಗಿರುತ್ತಿತ್ತು? ಎಂಬ ಪ್ರಶ್ನೆಗೆ ಕಲಾವಿದರೊಬ್ಬರ ಕಲ್ಪನೆಯಲ್ಲಿ ಉತ್ತರ ದೊರೆತಿದೆ. ‘ಕಾಂತಾರ’ ಗೆಟಪ್ನಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಪೋಸ್ಟರ್ ಸಿದ್ಧಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಡಿಜಿಟಲ್ ಆರ್ಟಿಸ್ಟ್ ಕುಶಾಲ್ ಹಿರೇಮಠ್ ಅವರು ಈ ಪೋಸ್ಟರ್ ರಚಿಸಿದ್ದು, ಪುನೀತ್ ಅವರ ಬೇರೆ ಫೋಟೋವನ್ನು ಬಳಸಿಕೊಂಡು ಈ ರೀತಿ ವಿನ್ಯಾಸ ಮಾಡಿದ್ದಾರೆ. ‘ಕಾಂತಾರ’ ಚಿತ್ರದ ಕಥಾನಾಯಕ ಶಿವನ ಪಾತ್ರವನ್ನು ಪುನೀತ್ ನಿರ್ವಹಿಸಿದ್ದರೆ ಅವರ ಗೆಟಪ್ ಹೇಗಿರುತ್ತಿತ್ತು ಎಂದು ಊಹಿಸಿಕೊಂಡು ಫೋಟೋ ಮಾಡಿದ್ದಾರೆ. ಇದನ್ನು ನೋಡಿ ಅಪ್ಪುಅಭಿಮಾನಿಗಳು ಕಂಬನಿ ಗೈಯುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಜೊತೆಗೆ ಪುನೀತ್ ರಾಜ್ಕುಮಾರ್ ಅವರು ಆಪ್ತ ಒಡನಾಟ ಹೊಂದಿದ್ದರು. ‘ಕಾಂತಾರ’ ಚಿತ್ರವನ್ನು ಪುನೀತ್ ಅವರೇ ಮಾಡಬೇಕೆಂದು ಅಂದಾಜಿಸಲಾಗಿತ್ತು. ಆದರೆ ಈ ಪಾತ್ರಕ್ಕೆ ರಿಷಬ್ ಶೆಟ್ಟಿ ಅವರೇ ಸೂಕ್ತ ಎಂದು ಸ್ವತಃ ಪುನೀತ್ ಸೂಚಿಸಿದ ಬಳಿಕ ಆ ಪಾತ್ರ ರಿಷಬ್ ಪಾಲಾಗಿದೆ. ಇಂದು ‘ಕಾಂತಾರ’ ಎಲ್ಲೆಡೆ ಜಯಭೇರಿ ಭಾರಿಸುತ್ತಿದ್ದು, ಈ ಯಶಸ್ಸಿನ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಪ್ಪು ಅವರು ನಮ್ಮೊಂದಿಗೆ ಇಲ್ಲವಲ್ಲ ಎಂದು ಅಭಿಮಾನಿಗಳು ದುಃಖಿತರಾಗಿದ್ದಾರೆ.
ಕಾಂತಾರ ಸಿನಿಮಾ ಕರಾವಳಿಯ ಕಲೆಯನ್ನು ಜಗತ್ತಿನೆಲ್ಲೆಡೆಗೂ ಪಸರಿಸಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೂ ಡಬ್ ಆಗಿ ‘ಕಾಂತಾರ’ ತೆರೆಕಂಡಿದ್ದು, ಕನ್ನಡ ಚಿತ್ರರಂಗದ ಹಿರಿಮೆಯನ್ನು ಉಳಿದವರು ಹಿಂದಿರುಗಿ ನೋಡುವಂತೆ ಮಾಡಿದೆ. ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದು, ಉತ್ತರ ಭಾರತದಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ.ಹಿಂದಿ ವರ್ಷನ್ನಿಂದ ಈವರೆಗೂ 70 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಒಂದು ವೇಳೆ ಪುನೀತ್ ರಾಜ್ಕುಮಾರ್ ಅವರು ಇದ್ದಿದ್ದರೆ ಈ ಚಿತ್ರದ ಗೆಲುವನ್ನು ಖಂಡಿತ ಸಂಭ್ರಮಿಸುತ್ತಿದ್ದರು. ಕನ್ನಡ ಚಿತ್ರರಂಗ ಕಂಡ ನಗುಮುಖದ ಸರದಾರನನ್ನು ನೆನೆಯುತ್ತಾ ಅಭಿಮಾನಿ ವರ್ಗ ಇಂದಿಗೂ ಕಣ್ಣೀರು ಇಡುತ್ತಿದೆ.