ಮದುವೆಗೆ ನಕಾರ | ಯುವತಿಗೆ ಚಾಕು ಇರಿದು ಕೊಲೆ ಮಾಡಿದ ಪ್ರೇಮಿ | ಕೊನೆಗೆ ಆತ ಮಾಡಿದ್ದೇನು?

ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ.ಪುಣೆಯ ಔಂಧ್ ಎಂಬಲ್ಲಿ ಮದುವೆಯಾಗಲು ನಿರಾಕರಿಸಿದ ಸುಶಿಕ್ಷಿತ ಯುವತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತಪಟ್ಟಿರುವ ಯುವತಿಯನ್ನು ಸಿದ್ಧಾರ್ಥ್ ನಗರದ ಶ್ವೇತಾ ವಿಜಯ್ ರಣವಾಡೆ (26) ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಆರೋಪಿಯನ್ನು ರಾಜಗುರುನಗರದ ಪ್ರತೀಕ್ ಕಿಸಾನ್ ಧಾಮಲೆ ಎಂದು ಗುರುತಿಸಲಾಗಿದೆ.

ಶ್ವೇತಾ ಸಿಎ ಓದುತ್ತಿದ್ದಳು ಎನ್ನಲಾಗಿದ್ದು, ಆಕೆಯ ತಂದೆ ಮೂರು ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದು, ಅವಳು ತನ್ನ ತಾಯಿ ಮತ್ತು ಸಹೋದರನೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಸಿಎ ಕೋರ್ಸ್ ಮುಗಿಸಿದ ಆಕೆ ಮತ್ತೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ಇಚ್ಛೆ ಹೊಂದಿದ್ದಳು.

2018ರಲ್ಲಿ ಸಂಬಂಧಿಕರೊಬ್ಬರ ಮದುವೆಯಲ್ಲಿ ಪ್ರತೀಕ್‌ಗೆ ಶ್ವೇತಾಳ ಪರಿಚಯವಾಗಿದ್ದು, ಇವರಿಬ್ಬರು ಕೂಡ ಮದುವೆಯಾಗುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಇದಾದ ​ ಕೆಲವು ದಿನಗಳ ನಂತರ ಪ್ರತೀಕ್ ಶ್ವೇತಾಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಮಾನಸಿಕವಾಗಿಯು ಹಿಂಸೆ ನೀಡಲು ಪ್ರಾರಂಭಿಸಿದ್ದರಿಂದ ಬೇಸತ್ತ ಶ್ವೇತಾ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.

ಈ ವಿಷಯವನ್ನು ತನ್ನ ಮನೆಯವರಿಗೂ ಕೂಡ ಯುವತಿ ತಿಳಿಸಿದ್ದು, ಆದರೆ ಪ್ರತೀಕ್ ಮಾತ್ರ ಆತ್ಮಹತ್ಯೆ ಬೆದರಿಕೆ ಹಾಕುವ ಮೂಲಕ ಮತ್ತಷ್ಟು ಕಿರುಕುಳ ನೀಡುತ್ತಿದ್ದ ಹಾಗಾಗಿ, ಬೇಸತ್ತ ಯುವತಿ ಶ್ವೇತಾ ಈ ಬಗ್ಗೆ ಎರಡು ತಿಂಗಳ ಹಿಂದೆ ಚತುರ್ಶಿಂಗಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾಳೆ.

ಆದರೆ ಬುಧವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಶ್ವೇತಾ ತನ್ನ ತಾಯಿ ದೀಪಾಲಿ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಬಂದಾಗ , ಮನೆಯ ಬಳಿಯ ಪಾರ್ಕಿಂಗ್​ ಸ್ಥಳದಲ್ಲಿದ್ದ ಪ್ರತೀಕ್​ ಏಕಾಏಕಿ ಶ್ವೇತಾಳ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರತೀಕ್ ಶ್ವೇತಾಳ ಕುತ್ತಿಗೆ, ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಶ್ವೇತಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಸದ್ಯ ಶ್ವೇತಾ ಕೊಲೆ ಆರೋಪಿ ಪ್ರತೀಕ್ ಧಾಮಲೆ ಟಾಟಾ ಡ್ಯಾಮ್ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಘಟನೆಯ ಸಂಬಂಧ ಚತುರ್ಶಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.