ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಬೇಧಿ ಸಮಸ್ಯೆ ಆಗಿಯೇ ಇರುತ್ತದೆ. ಅತಿಯಾದ ದ್ರವ ಪದಾರ್ಥದ ಸೇವನೆ ಮಾಡುವುದು,
ಹೊರಗಿನ ಆಹಾರ ಅಥವಾ ಫುಡ್ ಪಾಯ್ಸನ್ ಆದರೆ ಬೇಧಿ ಉಂಟಾಗಬಹುದು.
ಬೇಧಿಯಾದರೆ ಒಳ್ಳೆಯದೇ. ಏಕೆಂದರೆ ದೇಹದಲ್ಲಿನ ವಿಷ ಅಂಶವು ಮಲದ ಮೂಲಕ ಹೊರಹೋಗುತ್ತದೆ. ಹಾಗಾಗಿ ಆರಂಭದ ಮೊದಲ 5 ರಿಂದ 6 ಬಾರಿ ಮಲ ವಿಸರ್ಜನೆಯಾಗುವವರೆಗೂ ಏನೂ ಚಿಕಿತ್ಸೆ ಮಾಡಬಾರದು ಎಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳುತ್ತಾರೆ.
ಕೊಲೈಟಿಸ್, ಐಬಿಎಸ್ ಅಥವಾ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅಥವಾ ಅತಿಯಾದ ಖಾರ ಸೇವನೆ, ಕೆಲವು ಔಷಧಿಗಳ ಸೇವನೆ, ಆಹಾರದ ಅಲರ್ಜಿ, ಈ ಎಲ್ಲಾ ಕಾರಣದಿಂದ ಹೊಟ್ಟೆ ನೋವು,ಹೊಟ್ಟೆ ಉರಿ,ವಾಂತಿ, ನಿರ್ಜಲೀಕರಣ, ತಲೆಸುತ್ತುವಿಕೆ,ಸುಸ್ತು, ನಾಲಿಗೆಒಣಗುವುದು, 4 ರಿಂದ 5 ಬಾರಿ ಮಲವಿಸರ್ಜನೆ ಇಷ್ಟೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ. ಈ ಎಲ್ಲಾ ಸಮಸ್ಯೆಗೆ ನಾವು ಮನೆಯಲ್ಲೇ ಮನೆಮದ್ದು ಮಾಡಬಹುದು. ಹೇಗೆ ಅಂತೀರಾ ನೀವೇ ನೋಡಿ.
ಮಜ್ಜಿಗೆ:- ಸಾಮಾನ್ಯವಾಗಿ ಹೊಟ್ಟೆಯ ಯಾವುದೇ ಸಮಸ್ಯೆ ಕಾಡಿದರೂ ಮಜ್ಜಿಗೆ ಅದಕ್ಕೆ ರಾಮಬಾಣ. ಮಜ್ಜಿಗೆಯ ಸೇವನೆ ಬಹಳ ಒಳ್ಳೆಯದು. ಬೇಧಿಯ ಸಮಯದಲ್ಲಿ ಮಜ್ಜಿಗೆಯನ್ನು ಸೇವನೆ ಮಾಡುವುದಿರಂದ ದೇಹಕ್ಕೆ ದ್ರವ ಆಹಾರ ಸಿಕ್ಕಿ ನಿರ್ಜಲೀಕರಣವಾಗದಂತೆ ತಡೆಯುತ್ತದೆ.
ಬಿಸಿನೀರು:- ಬಿಸಿ ನೀರನ್ನು ಸೇವಿಸುವುದರಿಂದ ಬೇಧಿಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಉಗುರು ಬೆಚ್ಚಗಿನ ನೀರಿನ ಸೇವನೆಯು ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಚುರುಕುಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಸುಲಭವಾಗಿ ಹೊಟ್ಟೆಯಲ್ಲಿನ ಕಲ್ಮಷ ಹೊರಹೋಗಿ ಬೇಧಿ ನಿಲ್ಲುತ್ತದೆ. ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಸಕ್ಕರೆ ಅಥವಾ ಲಿಂಬು ರಸವನ್ನು ಸೇರಿಸಿ ಸೇವನೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.
ಜೀರಿಗೆ:- ಜೀರಿಗೆ ನೀರು ಹೊಟ್ಟೆಯ ಸಮಸ್ಯೆಗೆ ರಾಮಬಾಣವಾಗಿದೆ. ನೀವು ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೇವಿಸಿ. ಇದರಿಂದ ಬೇಧಿ ನಿಲ್ಲುತ್ತದೆ.