ಮಣ್ಣು, ರಾಸಾಯನಿಕ ಬಳಸದೆ ತರಕಾರಿಗಳನ್ನು ಬೆಳೆದು 70ಲಕ್ಷ ಆದಾಯಗಳಿಸುತ್ತಿರುವ ವ್ಯಕ್ತಿ!

ಇಂದಿನ ದುಬಾರಿ ದುನಿಯಾದಲ್ಲಿ ಒತ್ತಮವಾದ ಯೋಜನೆಯ ಮೂಲಕವಷ್ಟೇ ಯಶಸ್ಸು ಕಾಣಲು ಸಾಧ್ಯ. ಯಾಕಂದ್ರೆ ಪ್ರತಿಯೊಂದು ದಿನಬಳಕೆಯ ವಸ್ತು ಕೂಡ ದುಬಾರಿ ಆಗಿದೆ. ಅದರಲ್ಲೂ ಮುಖ್ಯವಾಗಿ ತರಕಾರಿ ಬೆಲೆಯೂ ಅಧಿಕವಾಗುತ್ತಲೇ ಇದೆ. ಬೆಳೆಗಾರರಿಗಿಂತ ಹೆಚ್ಚಾಗಿ ಬಳಕೆದಾರರೇ ಹೆಚ್ಚುತ್ತಿರುವುದೇ ಕಾರಣ ಎನ್ನಬಹುದು.

ಹೀಗಾಗಿ, ತರಕಾರಿ ಬೆಳೆಯೋರಿಗೆ ಈ ವ್ಯಕ್ತಿ ಮಾಡಿದ ಉತ್ತಮ ಯೋಜನೆ ಮಾರ್ಗದರ್ಶನವಾಗುವುದರಲ್ಲಿ ಡೌಟ್ ಇಲ್ಲ. ಹೌದು. ಕೇವಲ ತರಕಾರಿ ಬೆಳೆಯುವ ಮೂಲಕ ವರ್ಷಕ್ಕೆ 70 ಲಕ್ಷ ರೂಪಾಯಿ ಗಳಿಸುವ ಉತ್ತರ ಪ್ರದೇಶದ ಸ್ಫೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಬರೇಲಿಯ ರಾಮ್‌ವೀರ್ ಸಿಂಗ್ ಎನ್ನುವವರು, ತಮ್ಮ ಮೂರು ಅಂತಸ್ತಿನ ಮನೆಯಲ್ಲಿ ಮಣ್ಣು ಮತ್ತು ಯಾವುದೇ ರಾಸಾಯನಿಕಗಳನ್ನು ಬಳಸದೆ ತರಕಾರಿಗಳನ್ನು ಬೆಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರು ಸ್ಟ್ರಾಬೆರಿ, ಹೂಕೋಸು, ಬೆಂಡೇಕಾಯಿ ಮತ್ತು ಇತರ ಅನೇಕ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಅವರ ಮೂರು ಅಂತಸ್ತಿನ ಮನೆಯಲ್ಲಿ 10 ಸಾವಿರಕ್ಕೂ ಅಧಿಕ ಗಿಡಗಳಿವೆ.

ಹೈಡ್ರೋಪೋನಿಕ್ಸ್ ಬಳಸಿ ಮಣ್ಣಿನ ಅಗತ್ಯವಿಲ್ಲ ಮತ್ತು 90% ರಷ್ಟು ನೀರನ್ನು ಉಳಿಸಬಹುದು ಎನ್ನುತ್ತಾರೆ ಅವರು. ರಾಮ್‌ವೀರ್ ಅವರು ವಿಂಪಾ ಆರ್ಗ್ಯಾನಿಕ್ ಮತ್ತು ಹೈಡ್ರೋಪೋನಿಕ್ಸ್ ಎಂಬ ಕಂಪೆನಿಯನ್ನು ಹೊಂದಿದ್ದಾರೆ. ಇದರಿಂದ ಅವರು ವರ್ಷಕ್ಕೆ 70 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ. ಯುಎನ್‌ಇಪಿಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್ಹೈಮ್ ಈ ಸಾಧನೆಯ ವಿಡಿಯೋ ಹಂಚಿಕೊಂಡಿದ್ದು, ಇದಾಗಲೇ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ.

Leave A Reply

Your email address will not be published.