ರಾಜ್ಯವೇ ಬೆಚ್ಚಿಬಿದ್ದ ಘಟನೆ | ಮಂಡ್ಯದಲ್ಲಿ ಪತ್ತೆಯಾದ ರುಂಡವಿಲ್ಲದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯರ ಕೊಲೆ ಪ್ರಕರಣ |ಕೊನೆಗೂ ಪಾತಕಿಗಳು ಖಾಕಿ ಬಲೆಗೆ!!!

ಮಂಡ್ಯದಲ್ಲಿ ರುಂಡವಿಲ್ಲದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯರಿಬ್ಬರ ಮೃತ ದೇಹಗಳು ಇಡೀ ಮಂಡ್ಯ ಮಾತ್ರವಲ್ಲದೇ, ದೇಶಾದ್ಯಂತ ಸಂಚಲನ ಮೂಡಿಸಿತ್ತು.ಈ ಎರಡು ಕೊಲೆ ಪ್ರಕರಣಗಳನ್ನು ಬೇಧಿಸಲೂ ಖಾಕಿ ಪಡೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ .

ಹಾಗಾಗಿ, ಈ ಪ್ರಕರಣ ಪೋಲಿಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ಕೃತ್ಯ ಎಸೆಗಿದ್ದ ಹಂತಕರ ಹೆಡೆ ಮುರಿಕಟ್ಟಲು ಪೋಲಿಸ್ ಪಡೆ ನಿರಂತರ ಶ್ರಮಿಸಿದ್ದು, ಇದೀಗ ಪ್ರಕರಣ ನಡೆದ 2 ತಿಂಗಳ ನಂತರ ಪಾತಕಿಗಳು ಖಾಕಿ ಪಡೆಯ ಬಲೆಗೆ ಬಿದ್ದಿದ್ದಾರೆ..

ಜೂನ್ 6 ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದ ಕೆರೆ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಸಮೀಪದ ಹಳ್ಳದಲ್ಲಿ ಮಹಿಳೆಯರ ಸೊಂಟದಿಂದ ಕೆಳಭಾಗ ಮೃತ ದೇಹ ಪತ್ತೆಯಾಗಿತ್ತು.

ರುಂಡವಿಲ್ಲದ ದೇಹಗಳು ಪತ್ತೆಯಾಗಿದ್ದರಿಂದ ಸಾಮಾನ್ಯ ಜನರು ಬೆಚ್ಚಿ ಬೀಳಿಸಿತ್ತು. ಪೊಲೀಸರು ಕೂಡ ಈ ಪ್ರಕರಣ ಕಂಡು ಬೆರಗಾಗಿದ್ದರು. ಮಾತ್ರವಲ್ಲದೇ, ಪ್ರಕರಣ ದಾಖಲಿಸಿ ಕಾರ್ಯ ಪ್ರವೃತ್ತರಾದ ಖಾಕಿ ಪಡೆ ಹಲವೆಡೆ ಹುಡುಕಾಟ ನಡೆಸಿದರೂ ರುಂಡ ಪತ್ತೆಯಾಗಿರಲಿಲ್ಲ.

ಅಲ್ಲದೆ ರಾಜ್ಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣವನ್ನು ಪರಿಶೀಲಿಸಿದಾಗಲೂ ಕೊಲೆಯಾದ ಮಹಿಳೆಯರ ಗುರುತು ಪತ್ತೆಯಾಗಿರಲಿಲ್ಲ.

ಈ ಪ್ರಕರಣದ ಕುರಿತು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶೋಧ ಕಾರ್ಯ ಮುಂದುವರಿಸಿದ ಖಾಕಿ ಪಡೆಗೆ ಎರಡು ತಿಂಗಳ ಬಳಿಕ ಹಂತಕರು ಸೆರೆ ಸಿಕ್ಕಿದ್ದಾರೆ. ಪ್ರೇಯಸಿ ಜತೆ ಸೇರಿ ಹಂತಕ ಮಹಿಳೆಯರನ್ನು ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ.

ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅದರಂತೆ ಆರೋಪಿಗಳು ಎರಡಲ್ಲ ಮೂರು ಕೊಲೆ ಮಾಡಿರುವ ಮತ್ತು ಐವರ ಕೊಲೆಗೆ ಸಂಚು ರೂಪಿಸಿರುವ ಸತ್ಯ ಸಂಗತಿ ಬಹಿರಂಗವಾಗಿದೆ.

ಬೆಂಗಳೂರು ಮೂಲದ ಸಿದ್ದಲಿಂಗಪ್ಪ ಹಾಗೂ ಮಂಡ್ಯದ ಹರವು ಗ್ರಾಮದ ಚಂದ್ರಕಲಾ ಎಂಬ ಕೇಡಿ ಜೋಡಿಗಳು ಈ ಭೀಕರ ಕೃತ್ಯವೆಸಗಿದ ಹಂತಕರಾಗಿದ್ದಾರೆ. ಬೆಂಗಳೂರಿನ ಟೂಲ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಲಿಂಗಪ್ಪ ಗಾರ್ಮೆಂಟ್ಸ್​​ನಲ್ಲಿ ಕೆಲಸ ಮಾಡುತ್ತಿದ್ದ ಜಯಲಕ್ಷ್ಮಿ ಎಂಬಾಕೆಯನ್ನ ಮದುವೆಯಾಗಿದ್ದಾನೆ.

ಈ ನಡುವೆ ಪತ್ನಿ ಜಯಲಕ್ಷ್ಮಿ ಸಂಬಂಧಿಯಾದ ಚಂದ್ರಕಲಾ ಮೇಲೆ ಪ್ರೇಮಾಂಕುರವಾಗಿದ್ದು, ಹಾಗಾಗಿ, ಮೈಸೂರಿನ ಹೆಬ್ಬಾಳದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದರು. ಚಂದ್ರಕಲಾಗೆ ಇದ್ದ ವೇಶ್ಯೆಯರ ಲಿಂಕ್ ಕಾರಣವೆಂದು ತಿಳಿದುಬಂದಿದೆ. ಕೆಲವರು ಆಗಾಗ ಚಂದ್ರಕಲಾಗೆ ಫೋನ್ ಮಾಡಿ ದಂಧೆಗೆ ಬರುವಂತೆ ಕರೆಯುತ್ತಿದ್ದರು ಎನ್ನಲಾಗಿದ್ದು, ಈ ವಿಚಾರ ತಿಳಿದಾಗ ಸಿದ್ದಲಿಂಗಪ್ಪ ಕೋಪ ನೆತ್ತಿಗೇರಿತ್ತು .

ಹೀಗಾಗಿ ಚಂದ್ರಕಲಾ ಸ್ನೇಹಿತೆಯರನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದ ಎನ್ನಲಾಗಿದೆ. ಹಾಗಾಗಿ ಮೊದಲೇ ಪ್ಲಾನ್ ಮಾಡಿಕೊಂಡಂತೆ ಸಿದ್ದಲಿಂಗಪ್ಪ, ಚಂದ್ರಕಲಾ ಮೂಲಕ ಮೇ 30ರಂದು ಚಿತ್ರದುರ್ಗದ ಪಾರ್ವತಿಯನ್ನು ಮೈಸೂರಿನ ತನ್ನ ಮನೆಗೆ ಕರೆಸಿಕೊಂಡಿದ್ದಾನೆ.

ಮಧ್ಯರಾತ್ರಿ ಕುತ್ತಿಗೆ ಬಿಗಿದು ಕೊಂದು, ದೇಹವನ್ನು ಎರಡು ಭಾಗಗಳನ್ನಾಗಿ ತುಂದರಿಸಿದ್ದಾನೆ. ನಂತರ ಚೀಲಕ್ಕೆ ತುಂಬಿಕೊಂಡು ಒಂದು ಭಾಗವನ್ನು ಶ್ರೀರಂಗಪಟ್ಟಣದ ಕಾವೇರಿ ನದಿಗೆ ಮತ್ತೊಂದು ಭಾಗವನ್ನು ಸಿಡಿಎಸ್ ನಾಲೆಗೆ ಎಸೆದಿದ್ದಾನೆ.

ಜೂನ್ 3 ರಂದು ಚಾಮರಾಜನಗರದ ಗೀತ ಆಲಿಯಾಸ್ ಪುಟ್ಟಿ ಎಂಬಾಕೆಯನ್ನು ಮಧ್ಯಾಹ್ನ ಕೊಂದು ಎರಡು ಭಾಗವಾಗಿ ದೇಹ ಕಟ್ ಮಾಡಿ ಒಂದು ಭಾಗವನ್ನು ಪಾಂಡವಪುರ ತಾಲ್ಲೂಕಿನ ಬಳಿ ವಿಶ್ವೇಶ್ವರಯ್ಯ ನಾಲೆಗೆ ಮತ್ತೊಂದು ಭಾಗವನ್ನು ಬೇಬಿ ಗ್ರಾಮದ ಕೆರೆಗೆ ಎಸೆದು ಪರಾರಿಯಾಗಿದ್ದಾರೆ.

ಈ ಮಹಾ ಕಾರ್ಯ ನಡೆಸಿದ ಬಳಿಕ ಮೈಸೂರಿನ ಮನೆ ಖಾಲಿ ಮಾಡಿ ಬೆಂಗಳೂರಿನ ಡಾಬ್ಸ್ ಪೇಟೆಗೆ ಆಗಮಿಸಿದ್ದಾರೆ.

ಈ ವಿಚಾರದ ಕುರಿತಾಗಿ ಸತ್ಯ ಹೊರ ಬಂದ ವಿಷಯವೇ ರೋಚಕವಾಗಿದೆ. ಯಾವುದೇ ಸುಳಿವು ಸಿಗದೇ ಇದ್ದ ತಲೆ ಬಿಸಿಯಲ್ಲಿದ್ದ ಖಾಕಿ ಪಡೆ ನಿರಂತರವಾಗಿ ತನಿಖೆ ನಡೆಸುತ್ತಿದ್ದಾಗ ಜುಲೈ 25ರಂದು ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗೀತಾ ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ದೊರೆತಿದೆ.

ಹಾಗಾಗಿ, ಗೀತಾಳ ಮೊಬೈಲ್ ಲಾಸ್ಟ್ ಕಾಲ್ ಹಾಗೂ ಲಾಸ್ಟ್ ಲೊಕೇಷನ್ ಟ್ರೇಸ್ ಮಾಡಿದಾಗ ಚಂದ್ರಕಲಾ ಬಗ್ಗೆ ಮಾಹಿತಿ ದೊರೆತಿದೆ. ಅದರ ಕುರಿತಾಗಿ ಚಂದ್ರಕಲಾ ಹಾಗೂ ಸಿದ್ದಲಿಂಗಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.

ಪ್ರಕರಣದ ತನಿಖೆ ವೇಳೆ ಮತ್ತೊಂದು ಕೊಲೆ ಬಗ್ಗೆ ಹಂತಕರು ಬಾಯಿಬಿಟ್ಟಿದ್ದು ಕಳೆದ ಮೇ 1ರಂದು ಬೆಂಗಳೂರಿನಲ್ಲಿ ಕುಮುದ ಎಂಬಾಕೆಯನ್ನ ಕೊಲೆ ಮಾಡಿದ್ದಾರೆ ಎಂಬ ಸತ್ಯ ಕಕ್ಕಿದ್ದಾರೆ.

ಇಷ್ಟೇ ಅಲ್ಲದೆ,ಮತ್ತೆ ಐವರನ್ನು ಕೊಲೆ ಮಾಡಲು ಕೂಡ ಸಂಚು ರೂಪಿಸಿದ್ದಾಗಿ ಹಂತಕ ಸಿದ್ದಲಿಂಗಪ್ಪ ಪೋಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಇದೀಗ, ಕೊಲೆ ಪ್ರಕರಣ ಭೇದಿಸಿರುವ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಸಣ್ಣ ಕುರುಹು ನೀಡದೆ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿದ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

Leave A Reply

Your email address will not be published.